ನಂಜನಗೂಡಲ್ಲಿ ಏಷ್ಯನ್ ಪೇಂಟ್ಸ್ ಘಟಕಕ್ಕೆ ವಿರೋಧ
ನಂಜನಗೂಡು(ಮೈಸೂರು) ಸೆ.21: ಇಲ್ಲಿನ ಕಪಿಲಾ ನದಿ ಪಾತ್ರದಲ್ಲಿ ಏಷ್ಯನ್ ಪೇಂಟ್ಸ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಸ್ಥಳೀಯರು ಹಾಗೂ ಪರಿಸರವಾದಿಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಅದರೆ, ಸುಮಾರು 2.300 ಕೋಟಿ ರು ಮೌಲ್ಯದ ಘಟಕ ಸ್ಥಾಪನೆಗೆ ಮುಹೂರ್ತ ಫಿಕ್ಸ್ ಆಗಿದೆ.
ಸೆ.22ರಂದು ನಂಜನಗೂಡಿನ ತಾಲೂಕಿನ ತಾಂಡವಪುರದಲ್ಲಿ ಸುಮಾರು 2,300 ಕೋಟಿ ರೂ. ಬಂಡವಾಳದ ಘಟಕ ನಿರ್ಮಾಣ ಕಾರ್ಯಕ್ಕೆ ಇಮ್ಮಾವು ಕೈಗಾರಿಕಾ ಪ್ರದೇಶದಲ್ಲಿ ಚಾಲನೆ ಸಿಗಲಿದೆ.
ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಸಚಿವರಾದ ವಿ.ಶ್ರೀನಿವಾಸಪ್ರಸಾದ್, ಆರ್.ವಿ.ದೇಶಪಾಂಡೆ, ಸತೀಶ್ ಜಾರಕಿಹೊಳಿ, ಡಾ.ಎಚ್.ಸಿ. ಮಹದೇವಪ್ಪ, ಎಚ್.ಎಸ್.ಮಹದೇವಪ್ರಸಾದ್, ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ ಮೊದಲಾದವರು ಪಾಲ್ಗೊಳ್ಳಲಿದ್ದಾರೆ. [ನಂಜನಗೂಡಲ್ಲಿ ಸ್ಥಾಪನೆಯಾಗಲಿದೆ ಏಷಿಯನ್ ಪೇಯಿಂಟ್ಸ್ ಘಟಕ]
ಕಪಿಲಾ ನದಿಯ ಪಕ್ಕದಲ್ಲೇ ಕಾರ್ಖಾನೆ ಸ್ಥಾಪನೆಯಾಗುತ್ತಿದ್ದು, ಇದರಿಂದ ನದಿ ನೀರು ಕಲುಷಿತವಾಗಲಿದೆ. ಅಂತರ್ಜಲಕ್ಕೂ ವಿಷ ಉಣಿಸಿದಂತಾಗಲಿದ್ದು, ಕಾರ್ಖಾನೆ ನಿರ್ವಿುಸಲು ಅವಕಾಶ ನೀಡಬೇಡಿ. ಅದನ್ನು ಜಿಲ್ಲೆಯ ಬೇರೆ ಕಡೆ ನಿರ್ವಿುಸಿ ಎಂದು ರೈತರು, ಪರಿಸರವಾದಿಗಳು ಸೇರಿ ಸಾರ್ವಜನಿಕ ವಲಯದಿಂದಲೂ ಪ್ರಬಲ ಕೂಗು ಕೇಳಿ ಬಂದಿತ್ತು. ಅದರೆ, ಸಿದ್ದರಾಮಯ್ಯ ಅವರು ಮಧ್ಯ ಪ್ರವೇಶಿಸಿ ಸಂಬಂಧಪಟ್ಟ ಕಾರ್ಖಾನೆ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಅವರನ್ನು ಮನವೊಲಿಸಿದರು.
ಈ ಉತ್ಪಾದನಾ ಘಟಕದಿಂದ ದೇಶದ ದಕ್ಷಿಣ ಹಾಗೂ ಪೂರ್ವ ಭಾಗಗಳ ಬೇಡಿಕೆಯನ್ನು ಈಡೇರಿಸಲಾಗುತ್ತದೆ ಎಂದು ಏಷ್ಯನ್ ಪೇಂಟ್ಸ್ ಸಂಸ್ಥೆ ಬಿಎಸ್ ಇ ಗೆ ಮಾಹಿತಿ ನೀಡಿದೆ.