ಕೈ, ಕಮಲ ಆಕಾಂಕ್ಷಿಗಳ ಎದೆ ಬಡಿತ ಹೆಚ್ಚಳ, ಜೆಡಿಎಸ್ ನಿರಾಳ
ಮೈಸೂರು, ಏಪ್ರಿಲ್ 7 : ಇದು ಮೈಸೂರು ಜಿಲ್ಲೆಯ ಬಿಜೆಪಿ ಹಾಗೂ ಕಾಂಗ್ರೆಸ್ ನ ವಿಧಾನಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿಗಳ ತಳಮಳ. ಯಾರಿಗೆ ಟಿಕೆಟ್ ಕೊಡ್ತಾರಂತೆ ಎಂಬುದು ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಪದೇಪದೇ ಕೇಳಿಬರುವ ಪ್ರಶ್ನೆಯಾಗಿದೆ. ಆದರೆ ಜೆಡಿಎಸ್ ನಲ್ಲಿ ಈ ರೀತಿ ಗೊಂದಲ ಇಲ್ಲ. ಹಲವು ಕ್ಷೇತ್ರಗಳ ಅಭ್ಯರ್ಥಿಗಳು ನಿಕ್ಕಿ ಆಗಿರುವುದರಿಂದ ಆತ್ಮವಿಶ್ವಾಸದಿಂದ ಪ್ರಚಾರ ಮಾಡುತ್ತಿದ್ದಾರೆ.
ಆ ಕಾರಣಕ್ಕೆ ಎರಡೂ ಪಕ್ಷಗಳ ಆಕಾಂಕ್ಷಿಗಳು ಏನಾಗುವುದೋ ಎಂಬ ಒತ್ತಡದಲ್ಲಿಯೇ ಕಾಲ ದೂಡುವಂತಾಗಿದೆ. ಕೆಲವರಿಗಂತೂ ಆರೋಗ್ಯದಲ್ಲಿ ಕೂಡ ಏರುಪೇರಾಗುತ್ತಿದೆ. ಮೇ 12ರಂದು ಚುನಾವಣೆ ನಡೆಯಲಿದ್ದು, ಅಧಿಸೂಚನೆ ಏಪ್ರಿಲ್ 17ರಂದು ಹೊರಡಲಿದೆ. ನಂತರ ಪ್ರಚಾರಕ್ಕೆಂದು ಉಳಿಯುವುದು ಕೇವಲ 20 ರಿಂದ 22 ದಿನಗಳು ಮಾತ್ರ.
ಆದರೆ, ಬಿಜೆಪಿ ಹಾಗೂ ಕಾಂಗ್ರೆಸ್ ನಲ್ಲಿ ಇದುವರೆಗೂ ಯಾವುದೇ ಕ್ಷೇತ್ರಕ್ಕೂ ಅಧಿಕೃತವಾಗಿ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಹೀಗಾಗಿ ಮತಯಾಚನೆಗೆ ತೆರಳಲೂ ಆಗದೆ ಸುಮ್ಮನೆ ಕೂರಲೂ ಆಗದೆ ಆಕಾಂಕ್ಷಿಗಳು ಪ್ರತಿ ನಿಮಿಷವೂ ಚಡಪಡಿಸುವಂತಾಗಿದೆ. ಜೆಡಿಎಸ್ ನಿಂದ ಮಾತ್ರ ಚಾಮರಾಜ, ಕೃಷ್ಣರಾಜ, ನರಸಿಂಹರಾಜ, ಚಾಮುಂಡೇಶ್ವರಿ, ವರುಣಾ ಹಾಗೂ ಜಿಲ್ಲೆಯ ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿ ಘೋಷಣೆಯಾಗಿದೆ.

ಸಿದ್ದರಾಮಯ್ಯ, ಯತೀಂದ್ರ ಪ್ರಚಾರ ಜೋರು
ಪಕ್ಷದ ಅಭ್ಯರ್ಥಿಗಳು ಪ್ರಚಾರ ಕೂಡ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸಿದ್ದರಾಮಯ್ಯ ಹಾಗೂ ವರುಣಾ ಕ್ಷೇತ್ರದಿಂದ ಯತೀಂದ್ರ ಸಿದ್ದರಾಮಯ್ಯ ಹೆಸರು ಬಹುತೇಕ ಅಂತಿಮ ಆಗಿರುವುದರಿಂದ ಅವರು ಈಗಾಗಲೇ ಚುನಾವಣಾ ಕಣಕ್ಕೆ ಧುಮುಕಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

ತನ್ವೀರ್ ಸೇಠ್ ಪ್ರಚಾರ ಮಾಡ್ತಿದ್ದಾರೆ
ಆದರೆ, ಉಳಿದ ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಯನ್ನು ಘೋಷಿಸಿಲ್ಲ. ಹೀಗಾಗಿ ಟಿಕೆಟ್ ಆಕಾಂಕ್ಷಿಗಳು ಬಹಿರಂಗವಾಗಿ ಮತ ಯಾಚಿಸದೆ ತೆರೆ ಮರೆಯಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಚಾಮರಾಜ ಕ್ಷೇತ್ರದಲ್ಲಿ ಹಾಲಿ ಶಾಸಕ ವಾಸು, ಮುಡಾ ಮಾಜಿ ಅಧ್ಯಕ್ಷ ಡಿ.ಧ್ರುವಕುಮಾರ್ ಪ್ರಚಾರ ನಡೆಸುತ್ತಿದ್ದರೆ, ನರಸಿಂಹರಾಜ ಕ್ಷೇತ್ರದಲ್ಲಿ ಹಾಲಿ ಶಾಸಕ ತನ್ವೀರ್ ಸೇಠ್ ಹಾಗೂ ಕೆಆರ್ ಕ್ಷೇತ್ರದ ಶಾಸಕ ಎಂ.ಕೆ. ಸೋಮಶೇಖರ್ ಸ್ವಲ್ಪ ಮಟ್ಟಿಗಿನ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಬಿಜೆಪಿಯಲ್ಲಿ ಹೆಚ್ಚಿನ ಗೊಂದಲ
ಇನ್ನು ಅತಿ ಹೆಚ್ಚು ಗೊಂದಲವಿರುವುದು ಬಿಜೆಪಿಯಲ್ಲಿ. ಇಲ್ಲಿ ಪ್ರತೀ ಕ್ಷೇತ್ರಕ್ಕೂ ನಾಲ್ಕಾರು ಆಕಾಂಕ್ಷಿಗಳಿದ್ದಾರೆ. ತಮಗೇ ಟಿಕೆಟ್ ದೊರೆಯುತ್ತದೆ ಎಂಬ ವಿಶ್ವಾಸ ಎಲ್ಲರಲ್ಲಿಯೂ ಇದೆ. ಆದರೂ ಯಾರಿಗೆ ಟಿಕೆಟ್ ದೊರೆಯುತ್ತದೆಯೋ ಎಂಬ ದುಗುಡ ಹೆಚ್ಚಾಗುತ್ತಿದೆ. ಕೆಆರ್ ಕ್ಷೇತ್ರ, ನರಸಿಂಹರಾಜ, ಚಾಮರಾಜ, ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ 3 ರಿಂದ 4 ಆಕಾಂಕ್ಷಿಗಳು ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ.

ಬಿಜೆಪಿಗಾಗಿ ಮತ ಯಾಚನೆ
ಆದರೆ, ಅವರು ನಮಗೆ ಮತ ನೀಡಿ ಎಂದು ಹೇಳುವ ಧೈರ್ಯ ತೋರುತ್ತಿಲ್ಲ. ಬದಲಾಗಿ ಬಿಜೆಪಿಗೆ ಮತ ನೀಡಿ ಎಂದು ಮನೆಮನೆಗೆ ತೆರಳಿ ಮತ ಯಾಚಿಸುತ್ತಿದ್ದಾರೆ. ಅಭ್ಯರ್ಥಿ ಯಾರು ಎಂದು ಜನರು ಕೇಳುವ ಪ್ರಶ್ನೆಗೆ ನಿಖರವಾದ ಉತ್ತರವಿಲ್ಲ. ಬದಲಾಗಿ ಅಭ್ಯರ್ಥಿ ಯಾರೇ ಆಗಲಿ ಬಿಜೆಪಿಗೆ ಮತ ನೀಡಿ ಎನ್ನುತ್ತಿದ್ದಾರೆ.

ಹೆಚ್ಚುತ್ತಿದೆಯಂತೆ ಮಧುಮೇಹ, ರಕ್ತದೊತ್ತಡ
ಮುಂದಿನ 10 ದಿನಗಳ ಒಳಗಾಗಿ ಎಲ್ಲ ಪಕ್ಷಗಳು ಕೂಡ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲೇಬೇಕಿದೆ. ಅಲ್ಲಿಯವರೆಗೆ ಯಾವ ಆಕಾಂಕ್ಷಿಗಳ ಮಧುಮೇಹ, ರಕ್ತದೊತ್ತಡ ಹೆಚ್ಚುತ್ತದೆಯೋ ಬಲ್ಲವರ್ಯಾರು ಎಂದು ಪಕ್ಷದ ಕಿರಿಯ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.












Click it and Unblock the Notifications