ಮೈಸೂರು ರಾಮ್ ರಹೀಮ್ ಆಶ್ರಮಕ್ಕೆ ಬಿಗಿ ಭದ್ರತೆ
ಮೈಸೂರು, ಆಗಸ್ಟ್ 28: ಅತ್ಯಾಚಾರ ಪ್ರಕರಣವೊಂದರಲ್ಲಿ ದೋಷಿ ಎಂದು ಘೋಷಿಸಲಾದ ಹರ್ಯಾಣದ ಡೇರಾ ಸಚ್ಚಾ ಸೌದದ ವಿವಾದಿತ ಸ್ವಯಂಘೋಷಿತ ದೇವಮಾನವ ಬಾಬಾ ರಾಮ್ ರಹೀಮ್ ಗೆ ಇಂದು(ಆಗಸ್ಟ್ 28) ನ್ಯಾಯಾಲಯದಿಂದ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಹೊರವಲಯದ ಸಿದ್ದಲಿಂಗಪುರ ಗ್ರಾಮದ ಬಳಿಯಿರುವ ಡೇರಾ ಸಚ್ಚಾ ಸೌದ ಪಂಥದ ಆಶ್ರಮಕ್ಕೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದ್ದು, ಸಂಪೂರ್ಣ ಬೀಗ ಜಡಿಯಲಾಗಿದೆ.
Recommended Video
ಡೇರಾ ಸಚ್ಚಾ ಸೌಧದ ಹಣಕಾಸು ನೀತಿ ಬಗ್ಗೆ ಗೊತ್ತೆ?
ಆಶ್ರಮದ ಒಳಗಿರುವ ಬಾಬಾ ಬೆಂಬಲಿಗರು, ಹೊರ ಬರಲು ಹಿಂಜರಿಯುತ್ತಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಮಹಿಳಾ ಅನುಯಾಯಿಗಳೆಲ್ಲರೂ ತಡರಾತ್ರಿಯೇ ಆಶ್ರಮದಿಂದ ಕಾಲ್ಕಿತ್ತಿದ್ದಾರೆ.
ಪೊಲೀಸ್ ಇಲಾಖೆ ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿರುವ ಸಿದ್ದಲಿಂಗಪುರ ಗ್ರಾಮದ ಬಳಿಯಿರುವ ಡೇರಾ ಸಚ್ಚಾ ಸೌಧ ಪಂಥದ ಆಶ್ರಮಕ್ಕೆ ಭದ್ರತೆಯನ್ನು ಬಿಗಿಗೊಳಿಸಿದೆ. ಆಶ್ರಮದ ಮುಂಭಾಗದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸರನ್ನು ನಿಯೋಜಿಸಲಾಗಿದೆ. ರಾಮ್ ರಹೀಮ್ ಮೈಸೂರಿಗೆ ಬಂದಾಗಲೆಲ್ಲಾ ಇದೇ ಆಶ್ರಮದಲ್ಲಿ ವಾಸ್ತವ್ಯ ಹೂಡುತ್ತಿದ್ದರು ಎನ್ನಲಾಗಿದೆ.