ನಾಪತ್ತೆಯಾಗಿದ್ದ ಹುಣಸೂರು ಬಾಲಕಿ ಪ್ರಕರಣಕ್ಕೆ ವಿಚಿತ್ರ ತಿರುವು
ಮೈಸೂರು, ಜುಲೈ 01 : ಹುಣಸೂರಿನಲ್ಲಿ ಶಾಲೆಗೆ ತೆರಳಿದ್ದ ವಿದ್ಯಾರ್ಥಿನಿ ನಾಪತ್ತೆಯಾಗಿದ್ದ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಈಕೆಯನ್ನು ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ ಕರೆದೊಯ್ದು ತನ್ನೊಂದಿಗಿಟ್ಟುಕೊಂಡಿದ್ದು ಬೆಳಕಿಗೆ ಬಂದಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಹುಣಸೂರು ತಾಲೂಕಿನ ಹಿಂಡ್ಲುಗೂಡ್ಲು ಗ್ರಾಮದ ಶಿವಲಿಂಗ ಎಂಬುವರ ಪುತ್ರ ರವಿ ಅಲಿಯಾಸ್ ರವಿಕುಮಾರ್(24) ಬಂಧಿತ. ಅಪ್ರಾಪ್ತ ವಯಸ್ಕ ಪೂಜಾಳನ್ನು ಯಾರಾದರೂ ಕಂಡರೆ ಹುಣಸೂರು ಪೊಲೀಸರಿಗೆ ತಿಳಿಸಬೇಕಾಗಿ ಮೊಬೈಲ್ ಸಂಖ್ಯೆಯನ್ನು ನೀಡಲಾಗಿತ್ತು.
ಈತ ಹನಗೋಡಿನಲ್ಲಿರುವ ಪುಷ್ಪಾ ಸ್ಟುಡಿಯೋದಲ್ಲಿ ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದ. ಅಲ್ಲಿಯೇ ಹುಣಸೂರು ನಗರದ ಹೊಸ್ಸೂರಮ್ಮ ಬಡಾವಣೆಯ ಪ್ರದೀಪ್ ಕುಮಾರ್ ಮತ್ತು ದಂಪತಿಗಳ ಎರಡನೇ ಪುತ್ರಿ 9ನೇ ತರಗತಿ ವಿದ್ಯಾರ್ಥಿನಿ ಪೂಜಾ (15) ಎಂಬಾಕೆಯ ಚಿಕ್ಕಪ್ಪ ಹೋಟೆಲ್ ನಡೆಸುತ್ತಿದ್ದು, ಅಲ್ಲಿಗೆ ವಿದ್ಯಾರ್ಥಿನಿ ಪೂಜಾ ಆಗಾಗ ಹೋಗುತ್ತಿದ್ದಳು. ಅಲ್ಲಿಗೆ ಬರುತ್ತಿದ್ದ ರವಿ ಮತ್ತು ಪೂಜಾ ನಡುವಿನ ಪರಿಚಯದ ಮೊಗ್ಗು ಪ್ರೀತಿಯಾಗಿ ಅರಳಿತ್ತು. [ಕಾಣೆಯಾಗಿರುವ ಈ ತರುಣಿ ಕಣ್ಣಿಗೆ ಬಿದ್ದರೆ ಕರೆ ಮಾಡಿ!]
ಈ ನಡುವೆ ಪುಸಲಾಯಿಸಿ ನಿನ್ನನ್ನು ಮದುವೆಯಾಗುವುದಾಗಿ ನಂಬಿಸಿದ ರವಿ, ಶಾಲೆಗೆ ಬಂದಿದ್ದ ಪೂಜಾಳನ್ನು ಜೂ.27ರಂದು ತನ್ನ ಗೆಳೆಯ ಕೆಲಸ ಮಾಡುತ್ತಿದ್ದ ಕೊಡಗಿನ ವಿರಾಜಪೇಟೆಯ ತಾಲೂಕಿನ ಕೆದಮುಳ್ಳೂರು ಗ್ರಾಮದ ಕುಂಞಪ್ಪ ಎಂಬುವರ ತೋಟದ ಮನೆಗೆ ಕರೆದೊಯ್ದಿದ್ದನು. ಅಲ್ಲದೆ ಮಾಲೀಕರೊಂದಿಗೆ ತೋಟದಲ್ಲಿ ಕೆಲಸ ಮಾಡುವುದಾಗಿ ಹೇಳಿ ಕೆಲಕ್ಕೆ ಸೇರಿಕೊಂಡಿದ್ದರು.
ಇತ್ತ ವಿದ್ಯಾರ್ಥಿನಿಯ ತಂದೆ ಪ್ರದೀಪ್ ಕುಮಾರ್ ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾದ ಬಗ್ಗೆ ದೂರು ನೀಡಿದ್ದರು. ಕಾಣೆಯಾದ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆಯೇ ವಿಷಯ ತಿಳಿದ ತೋಟದ ಮಾಲೀಕರಾದ ಕುಂಞಪ್ಪ ಅವರು ಹುಣಸೂರು ಪೊಲೀಸ್ ಠಾಣೆಗೆ ಕರೆಮಾಡಿ ಯುವತಿ ಯುವಕನೊಂದಿಗೆ ತಮ್ಮ ಎಸ್ಟೇಟ್ನಲ್ಲಿರುವ ಬಗ್ಗೆ ಮಾಹಿತಿ ನೀಡಿದ್ದರು. [ಸ್ನಾಪ್ ಡೀಲ್ ದೀಪ್ತಿ ಕಿಡ್ನಾಪಿಗೆ ಶಾರುಖ್ ಸಿನ್ಮಾ ಸ್ಫೂರ್ತಿ?]
ತಕ್ಷಣ ಹುಣಸೂರು ನಗರ ಪೊಲೀಸರು ಕುಂಞಪ್ಪನವರ ತೋಟಕ್ಕೆ ತೆರಳಿ ರವಿಕುಮಾರ್ ಮತ್ತು ಪೂಜಾಳನ್ನು ತಮ್ಮ ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರವಿಯ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ಅಡಿಯಲ್ಲಿ ಅತ್ಯಾಚಾರ ಮತ್ತು ಫೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಈ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಪ್ರಾಪ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. [ಹುಣಸೂರಲ್ಲಿ ಮಳೆ ಅವಾಂತರ, ಕೊಚ್ಚಿ ಹೋದ ತಂಬಾಕು ಬೆಳೆ]