ಸಾರ್ವಜನಿಕ ಸ್ಥಳದಲ್ಲಿ ಪೊಲೀಸ್ ಗೌರವ ವಂದನೆ ಬೇಡ; ಸಿಎಂ ಬೊಮ್ಮಾಯಿ ಆದೇಶ
ಮಂಗಳೂರು, ಆಗಸ್ಟ್ 12: ಸರ್ಕಾರಿ ಸಭೆ- ಸಮಾರಂಭಗಳಲ್ಲಿ ಹೂಗುಚ್ಚ, ಹಾರ- ತುರಾಯಿ ಅಂತಾ ಅನಗತ್ಯ ಖರ್ಚು ವೆಚ್ಚ ಮಾಡುವುದನ್ನು ನಿಲ್ಲಿಸಬೇಕು ಎಂದು ಆದೇಶ ಹೊರಡಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಈಗ ಮತ್ತೊಂದು ಆದೇಶವನ್ನು ಹೊರಡಿಸಿದ್ದಾರೆ.
ಪೊಲೀಸರು ನೀಡುವ ಗೌರವ ವಂದನೆಯನ್ನು ಸಾರ್ವಜನಿಕ ಪ್ರದೇಶದಲ್ಲಿ ನೀಡಬಾರೆಂದು ಸಿಎಂ ಬಸವರಾಜ ಬೊಮ್ಮಾಯಿ ಪೊಲೀಸರಿಗೆ ಮಂಗಳೂರಿನಲ್ಲಿ ಸೂಚನೆ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಪರಿಶೀಲನೆ ಸಭೆಗೆಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ, ವಿಮಾನ ನಿಲ್ದಾಣದಲ್ಲಿ ಮಾಡಿದ್ದ ಗಾರ್ಡ್ ಆಫ್ ಹಾನರ್ ವ್ಯವಸ್ಥೆಗೆ ಕಸಿವಿಸಿಗೊಂಡಿದ್ದಾರೆ.
ಲಾಕ್ಡೌನ್ ಆಗಬಾರದೆಂದರೆ ಸರಿಯಾಗಿ ಕೆಲಸ ಮಾಡಿ; ಬಸವರಾಜ ಬೊಮ್ಮಾಯಿ
ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ತಿಳಿದು ತಕ್ಷಣ ಮಂಗಳೂರು ಪೊಲೀಸ್ ಕಮೀಷನರ್ ಎನ್, ಶಶಿಕುಮಾರ್ಗೆ ಇನ್ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಗಾರ್ಡ್ ಆಫ್ ಹಾನರ್ ವ್ಯವಸ್ಥೆ ಮಾಡಬಾರದು ಅಂತಾ ಸೂಚನೆ ನೀಡಿದರು.
ಸಾರ್ವಜನಿಕರಿಗೆ ತೊಂದರೆಯಾಗುತ್ತದೆ
ಸಾರ್ವಜನಿಕರಿಗೆ ತೊಂದರೆಯಾಗುವಂತೆ ಗಾರ್ಡ್ ಆಫ್ ಹಾನರ್ ಕೊಡಬೇಡಿ. ಇನ್ನು ಸರ್ಕಾರಿ ಕಚೇರಿ ಹೊರತುಪಡಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಗಾರ್ಡ್ ಆಫ್ ಹಾನರ್ ಮಾಡುವುದು ಬೇಡ. ವಿಮಾನ ನಿಲ್ದಾಣ, ರೈಲ್ವೇ ಸ್ಟೇಷನ್ ಮತ್ತು ಬಸ್ ಸ್ಟ್ಯಾಂಡ್ಗಳಲ್ಲಿ ಗಾರ್ಡ್ ಆಫ್ ಹಾನರ್ ವ್ಯವಸ್ಥೆ ಮಾಡಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಇನ್ಮುಂದೆ ಸಾರ್ವಜನಿಕ ಸ್ಥಳದಲ್ಲಿ ಗೌರವ ವಂದನೆಗೆ ವ್ಯವಸ್ಥೆ ಮಾಡಬಾರದು ಅಂತಾ ಈ ಕೂಡಲೇ ನೋಟಿಫಿಕೇಷನ್ ಹೊರಡಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.
ಗಾರ್ಡ್ ಆಫ್ ಹಾನರ್ಗೆ ಪೊಲೀಸರ ತಯಾರಿ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಗಾರ್ಡ್ ಆಫ್ ಹಾನರ್ಗೆ ಪೊಲೀಸರು ತಯಾರಿ ಮಾಡಿಕೊಂಡು ಕಾಯುತ್ತಿದ್ದರಿಂದ ಗೌರವ ವಂದನೆ ಸ್ವೀಕರಿಸಿ, ಇನ್ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಗಾರ್ಡ್ ಆಫ್ ಹಾನರ್ ವ್ಯವಸ್ಥೆ ಮಾಡಬಾರದು ಅಂತಾ ಪೊಲೀಸರಿಗೆ ಸೂಚನೆ ನೀಡಿದರು. ಈ ಬಗ್ಗೆ ಸರ್ಕಾರದಿಂದ ಅಧೀಕೃತವಾಗಿ ಆದೇಶ ಮಾಡುತ್ತೇವೆ ಅಂತಲೂ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಗಮನ ದ್ವಾರದ ಬಳಿ ಪೊಲೀಸರು ಗೌರವ ವಂದನೆ ವ್ಯವಸ್ಥೆ ಮಾಡಿದ್ದು, ಜಾಗ ತೀರಾ ಇಕ್ಕಟ್ಟಿನಲ್ಲಿದೆ. ವಿಮಾನ ನಿಲ್ದಾಣಕ್ಕೆ ಬರುವ ವಾಹನಗಳಿಗೆ ಇದರಿಂದ ಅಡಚಣೆಯಾಗುತ್ತಿತ್ತು ಮತ್ತು ಮುಖ್ಯಮಂತ್ರಿ ವಿಮಾನ ನಿಲ್ದಾದಿಂದ ಹೊರ ಹೋಗುವರೆಗೂ ವಿಮಾನ ನಿಲ್ದಾಣಕ್ಕೆ ಬರುವ ಜನರಿಗೆ ತೊಂದರೆಯಾಗುತ್ತಿತ್ತು. ಈಗ ಸಿಎಂ ಬಸವರಾಜ ಬೊಮ್ಮಾಯಿ ಈ ಆದೇಶ ಮಾಡಿರುವುದು ಜನರಿಗೂ ಖುಷಿಯಾಗಿದೆ. ಸಿಎಂ ಬೊಮ್ಮಾಯಿ ಆದೇಶ ಸ್ವಾಗತಾರ್ಹ ಎಂದು ಜನ ಹೇಳಿದ್ದಾರೆ.
ಝೀರೋ ಟ್ರಾಫಿಕ್ ವ್ಯವಸ್ಥೆ ಬೇಡ ಎಂದ ಗೃಹ ಸಚಿವ
ಅಧಿಕಾರ ಸ್ವೀಕರಿಸಿದ ಬಳಿಕ ಮಾದರಿ ಆದೇಶ ಮಾಡುತ್ತಲೇ ಇರುವ ಸಿಎಂ ಬಸವರಾಜ ಬೊಮ್ಮಾಯಿ, ಈ ಹಿಂದೆ ಸರ್ಕಾರಿ ಸಭೆ, ಸಮಾರಂಭ, ಕಾರ್ಯಕ್ರಮಗಳಲ್ಲಿ ಹೂಗುಚ್ಚ, ಹಾರ- ತುರಾಯಿಗೆ ಅನಗತ್ಯ ಖರ್ಚು ಮಾಡುವುದನ್ನು ನಿಲ್ಲಿಸಿ, ಅದಕ್ಕೆ ಪ್ರತಿಯಾಗಿ ಪುಸ್ತಕ ನೀಡಬೇಕೆಂದು ಆದೇಶ ನೀಡಿದ್ದರು.
ಗೃಹ ಸಚಿವ ಆರಗ ಜ್ಞಾನೇಂದ್ರ ತನಗಿನ್ನು ಝೀರೋ ಟ್ರಾಫಿಕ್ ವ್ಯವಸ್ಥೆ ಬೇಡ ಅಂತಾ ಹೇಳಿದ್ದರು. ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡುವುದರಿಂದ ಸಾರ್ವಜನಿಕರ ವಾಹನಗ ಸಂಚಾರಕ್ಕೆ ತೊಂದರೆಯಾಗುತ್ತದೆ. ಆದುದರಿಂದ ಇನ್ಮುಂದೆ ಝೀರೋ ಟ್ರಾಫಿಕ್ ವ್ಯವಸ್ಥೆ ಬೇಡ ಅಂತಾ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಹಾರ ಹಾಕುವ ಬದಲು ಕನ್ನಡ ಪುಸ್ತಕ ಕೊಡಿ
ಇನ್ನು ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಕೂಡಾ ತನಗೆ ಅಭಿನಂದಿಸಲು ಬರುವ ಜನರು ಹಾರ ಹಾಕುವ ಬದಲು ಕನ್ನಡ ಪುಸ್ತಕ ಕೊಡಿ, ಅದನ್ನು ಕಾರ್ಕಳ ಗ್ರಂಥಾಲಯಕ್ಕೆ ನೀಡುತ್ತೇವೆ ಅಂತಾ ತನ್ನ ಬೆಂಬಲಿಗರಿಗೆ ಹೇಳಿದ್ದರು.
ಏನೇ ಆಗಲಿ, ಸರ್ಕಾರದ ಅನಗತ್ಯ ಖರ್ಚು- ವೆಚ್ಚಗಳಿಗೆ ಕಡಿವಾಣ ಹಾಕಿ ಕೋವಿಡ್ ಸಮಯದಲ್ಲಿ ಸರ್ಕಾರಕ್ಕೆ ಹೊರೆ ಕಡಿಮೆಯಾಗಬೇಕಿದೆ. ಇಂತಹ ಆದೇಶಗಳಿಂದ ರಾಜ್ಯದ ಬೊಕ್ಕಸಕ್ಕೂ ಉಳಿತಾಯವಾಗಲಿದೆ. ಅದೇ ರೀತಿ ಸಾರ್ವಜನಿಕರು ತೊಂದರೆ ಅನುಭವಿಸುವುದು ಕಡಿಮೆಯಾಗಲಿದೆ.