'ಜೆ.ಆರ್. ಲೋಬೋ ಸಾಧನೆಯ ಹಾದಿಯಲ್ಲಿ ಪುಸ್ತಕ ಸುಳ್ಳಿನ ಕಂತೆ'
ಮಂಗಳೂರು, ಮೇ 03: ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್. ಲೋಬೋ ಅವರು ಚುನಾವಣೆಯ ಸಂದರ್ಭದಲ್ಲಿ ಹೊರ ತಂದಿರುವ 'ಸಾಧನೆಯ ಹಾದಿಯಲ್ಲಿ' ಪುಸ್ತಕದ ತುಂಬಾ ಸುಳ್ಳಿನ ಕಂತೆಗಳೇ ತುಂಬಿವೆ ಎಂದು ಬಿಜೆಪಿ ನಾಯಕಿ ರೂಪಾ ಡಿ. ಬಂಗೇರಾ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, "ಶಾಸಕ ಜೆ.ಆರ್ ಲೋಬೊ ಸಾಧನೆಯ ಹಾದಿ ಪುಸ್ತಕದಲ್ಲಿ ನಮೂದಿಸಿರುವ ಅಭಿವೃದ್ಧಿ ಕಾರ್ಯಗಳು ವಾಸ್ತವಕ್ಕಿಂತ ಸಾಕಷ್ಟು ದೂರ ಇವೆ," ಎಂದು ಆರೋಪಿಸಿದರು.
"ಸುಳ್ಳಿನ ಕಂತೆಯನ್ನು ಪುಸ್ತಕದಲ್ಲಿ ನಮೋದಿಸಿ ಜನರಿಗೆ ತಾವು ತುಂಬಾ ಅಭಿವೃದ್ಧಿ ಮಾಡಿದ್ದೇವೆ ಎಂಬ ಭ್ರಮೆ ಮೂಡಿಸಿದ್ದಾರೆ," ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, "ನಗರದಲ್ಲಿ ಹೆಚ್ಚುತ್ತಿರುವ ವಾಹನಗಳ ದಟ್ಟಣೆ, ತ್ಯಾಜ್ಯ ಸಂಗ್ರಹಣೆ, ಕುಡಿಯುವ ನೀರಿನ ಸೋರಿಕೆ, ಒಳಚರಂಡಿ ವ್ಯವಸ್ಥೆ ಬಗ್ಗೆ ಶಾಸಕ ಲೋಬೋ ಏನೂ ಮಾಡಿಲ್ಲ. ತಮ್ಮ ಪುಸ್ತಕದಲ್ಲಿ ಕೆಲವೇ ಕೆಲವು ಕೆಲಸಗಳನ್ನೇ ತಮ್ಮ ಸಾಧನೆ ಎಂದು ಬಿಂಬಿಸಿದ್ದಾರೆ," ಎಂದು ಕಿಡಿಕಾರಿದರು.
ಪುಣಾಣಿ ಮಕ್ಕಳ ರೈಲನ್ನು ಇನ್ನೂ ಕದ್ರಿ ಪಾರ್ಕಿನಲ್ಲಿ ಒಡಿಸಲಾಗದ ಲೋಬೋ ಅವರು ಮಕ್ಕಳಿಗೆ ವಂಚಿಸಿದ್ದಾರೆ. ಪುಟಾಣಿ ರೈಲನ್ನು ತಮ್ಮ ಸಾಧನೆ ಎಂದು ಎಂದು ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಕೆಲವು ಅನುದಾನಗಳು ಕೇಂದ್ರದ್ದು ಆಗಿದ್ದರೂ, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಇವರ ಪಾತ್ರ ಏನೂ ಇಲ್ಲದಿದ್ದರೂ ಅದನ್ನು ಕೂಡ ಸಾಧನೆ ಎಂಬುದಾಗಿ ನಮೂದಿಸಿದ್ದಾರೆ ಎಂದು ಅವರು ಕಿಡಿಕಾರಿದರು .