ಧರ್ಮಸ್ಥಳ; ಬರಿಗಾಲಿನಲ್ಲಿ ನಡೆದ ರಾಜ್ಯಪಾಲ ಥಾವರ್ ಚಂದ್
ಮಂಗಳೂರು, ಡಿಸೆಂಬರ್ 02; ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ ಕಳೆಗಟ್ಟಿದೆ. ಲಕ್ಷದೀಪೋತ್ಸವದ ನಾಲ್ಕನೇ ದಿನದ ಅಂಗವಾಗಿ ಕ್ಷೇತ್ರದಲ್ಲಿ 89ನೇ ಸರ್ವಧರ್ಮ ಸಮ್ಮೇಳನ ನಡೆದಿದೆ. ಸಮ್ಮೇಳನವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟನೆ ಮಾಡಿದ್ದಾರೆ. ರಾಜ್ಯದ ಪ್ರಥಮ ಪ್ರಜೆ ಯಾದರೂ ಧರ್ಮಸ್ಥಳದಲ್ಲಿ ಸರಳತೆ ಮರೆದಿದ್ದಾರೆ.
ಸರ್ವಧರ್ಮ ಸಮ್ಮೇಳನದ ಉದ್ಘಾಟನೆಗೂ ಮುನ್ನ ದೇವಳದಿಂದ ಸಮ್ಮೇಳನ ನಡೆಯುವ ಅಮೃತವರ್ಷಿಣಿ ಸಭಾಭವನದವರೆಗೆ ಅತಿಥಿಗಳನ್ನು ಮೆರವಣಿಗೆಯಲ್ಲಿ ಕರೆತರೋದು ಕ್ಷೇತ್ರದ ವಾಡಿಕೆ. ಭಧ್ರತೆಯ ದೃಷ್ಟಿಯಿಂದ ರಾಜ್ಯಪಾಲರನ್ನು ಕಾರಿನಲ್ಲಿ ನೇರವಾಗಿ ಅಮೃತವರ್ಷಿಣಿ ಸಭಾ ಭವನಕ್ಕೆ ತೆರಳಲು ವಿನಂತಿಸಿದರೂ ಅದಕ್ಕೊಪ್ಪದ ರಾಜ್ಯಪಾಲರು ನಡೆದುಕೊಂಡೇ ಮೆರವಣಿಗೆಯಲ್ಲಿ ಸಾಗಿದ್ದಾರೆ.
ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳ ಭಕ್ತಾದಿಗಳಿಗೆ ಸಿಹಿಸುದ್ದಿ
ಈ ವೇಳೆ ಚಪ್ಪಲಿ ಧರಿಸಲೂ ಸಹ ರಾಜ್ಯಪಾಲರು ನಿರಾಕರಿಸಿದ್ದಾರೆ. ರಾಜ್ಯಪಾಲರ ಈ ಸರಳತೆಯ ಬಗ್ಗೆ ಸ್ವಾಗತ ಭಾಷಣದಲ್ಲಿ ಉಲ್ಲೇಖ ಮಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, "ಕ್ಷೇತ್ರದಲ್ಲಿ ಲಕ್ಷದೀಪೋತ್ಸವದ ಸಂಭ್ರಮದ ಹಿನ್ನಲೆಯಲ್ಲಿ ಜನಸಂದಣಿ ಕೂಡಾ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯಪಾಲರನ್ನು ಕಾರಿನಲ್ಲಿ ಅಮೃತವರ್ಷಿಣಿ ಸಭಾಭವನಕ್ಕೆ ತೆರಳಲು ಸೂಚಿಸಿದೆ. ಆದರೆ ರಾಜ್ಯಪಾಲರು ಒಪ್ಪಲಿಲ್ಲ" ಎಂದರು.
ಕನ್ನಡ ಭಾಷೆ ಕಲಿಕೆ ಹಾದಿಯಲ್ಲಿ ಹೊರಟ ರಾಜ್ಯಪಾಲ ಥಾವರ್ಚಂದ್
"ಮೆರವಣಿಯಲ್ಲಿ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಕಾಲಿಗೆ ಚಪ್ಪಲಿ ಧರಿಸಲು ಮನವಿ ಮಾಡಿದೆ. ಅದಕ್ಕೂ ರಾಜ್ಯಪಾಲರು ಒಪ್ಪಲಿಲ್ಲ. ನೀವು ಚಪ್ಪಲಿ ಹಾಕದಿದ್ದರೆ ನಾನೂ ಚಪ್ಪಲಿ ಧರಿಸೋದಿಲ್ಲ ಆಂತಾ ಹೇಳಿದೆ. ಕೊನೆಗೂ ರಾಜ್ಯಪಾಲರು ತಮ್ಮ ಸರಳತೆಯನ್ನು ಬಿಟ್ಟು ಕೊಡಲಿಲ್ಲ. ಇಬ್ಬರೂ ಬರಿಗಾಲಿನಲ್ಲಿ ನಡೆದುಕೊಂಡೇ ಸಭಾಭವನವನ್ನು ಸೇರಿದೆವು" ಅಂತಾ ರಾಜ್ಯಪಾಲರು ಸರಳತೆಯನ್ನು ಗುಣಗಾಣ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ರಾಜ್ಯಪಾಲರು; ಜೋಗ ಜಲಪಾತಕ್ಕೆ ಭೇಟಿ
ಸರ್ವ ಧರ್ಮ ಸಮ್ಮೇಳನದುದ್ದಕ್ಕೂ ರಾಜ್ಯಪಾಲರು ಕಾಲಿಗೆ ಪಾದರಕ್ಷೆ ಧರಿಸದೇ ಭಾಗವಹಿಸಿದ್ದು ವಿಶೇಷವಾಗಿತ್ತು. 89ನೇ ಸರ್ವಧರ್ಮ ಸಮ್ಮೇಳನ ಅಧಿವೇಶನವನ್ನು ಉದ್ಘಾಟಿಸಿದ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, "ಮಂಜುನಾಥ ಸ್ವಾಮಿಯ ದರ್ಶನ ಮಾಡಿರೋದು ನನ್ನ ಸೌಭಾಗ್ಯ. ದಕ್ಷಿಣ ಭಾರತ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಧರ್ಮಸ್ಥಳವಾಗಿದೆ" ಎಂದರು.
"ಧರ್ಮಸ್ಥಳವನ್ನು ವೀರೇಂದ್ರ ಹೆಗ್ಗಡೆಯವರು ದೇವಧೂತರಂತೆ ಬಂದು ಅಭಿವೃದ್ಧಿಗೊಳಿಸಿದರು. ಧಾರ್ಮಿಕ, ಸಾಹಿತ್ಯ, ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ, ಶಿಕ್ಷಣ ಕ್ಷೇತ್ರದಲ್ಲಿ ಧರ್ಮಸ್ಥಳದ ಸೇವೆ ಅವರ್ಣನೀಯವಾಗಿದೆ. ಎಲ್ಲಾ ಧರ್ಮ ಸರ್ವ ಗೌರವಕ್ಕೆ ಅರ್ಹ. ಎಲ್ಲಾ ಧರ್ಮವನ್ನು ಪ್ರೀತಿಯನ್ನು ಹಂಚಲು ಹೇಳುತ್ತದೆ. ವಸುಧೈವ ಕುಟುಂಬಿಕಂ ಎನ್ನೋದು ನಮ್ಮ ದೇಶ ಹೆಮ್ಮೆ" ಎಂದು ರಾಜ್ಯಪಾಲರು ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳದ ಪರವಾಗಿ ಸಮ್ಮೇಳನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸನ್ಮಾನಿಸಿದ್ದಾರೆ. ಇನ್ನೂ ಸರ್ವಧರ್ಮ ಸಮ್ಮೇಳನದ ಅಧ್ಯಕ್ಷತೆಯನ್ನು ಬೆಂಗಳೂರಿನ ಎಸ್. ವ್ಯಾಸ ಯೋಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ರಾಮಚಂದ್ರ ಜಿ. ಭಟ್ಟ ವಹಿಸಿದ್ದರು.
ದೇಶದ ಪ್ರತಿಷ್ಠಿತ ವಿದ್ವಾಂಸರಲ್ಲಿ ಓರ್ವರೆಂದು ಗುರುತಿಸಿಕೊಂಡಿರುವ ಪ್ರೊ. ರಾಮಚಂದ್ರ ಭಟ್ ಯೋಗ, ಆಧ್ಯಾತ್ಮ, ವೇದ ವಿಜ್ಞಾನದ ಬಗ್ಗೆ ತಮ್ಮ ಜ್ಞಾನವನ್ನು ಸಮ್ಮೇಳನವನ್ನು ಹಂಚಿಕೊಂಡಿದ್ದಾರೆ. ಮತಾಂತರ ದಿಂದ ವ್ಯಕ್ತಿಗಳನ್ನು ಬದಲಿಸಲು ಸಾಧ್ಯವಿಲ್ಲ. ಎಲ್ಲಾ ಧರ್ಮಗಳು ಶ್ರೇಷ್ಠತೆಯನ್ನೇ ತಿಳಿಸುತ್ತದೆ. ಧರ್ಮವನ್ನು ಅರಿತುಕೊಂಡವನು ಧರ್ಮ ಬದಲಿಸಲು ಸಾಧ್ಯವಿಲ್ಲ ಅಂತಾ ಹೇಳಿದ್ದಾರೆ.
ಇನ್ನು ಸರ್ವಧರ್ಮ ಸಮ್ಮೇಳನದಲ್ಲಿ ಭಾರತೀಯ ಧರ್ಮಗಳು ಎಂಬ ವಿಚಾರವಾಗಿ ಕನ್ನಡ ಪ್ರಾಧ್ಯಾಪಕರು ಮತ್ತು ಪರಸ್ಪರ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಡಾ. ಸರ್ಫ್ರಾಜ್ ಚಂದ್ರಗತ್ತಿಯವರು ಉಪನ್ಯಾಸ ನೀಡಿದ್ದಾರೆ. ಇನ್ನು ಜೈನಧರ್ಮದ ಮೌಲಿಕತೆ ಮತ್ತು ಮಹತ್ವದ ಕುರಿತು ಮೈಸೂರು ವಿಶ್ವವಿದ್ಯಾನಿಲಯದ ಜೈನ ಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ. ಎಂ. ಎಸ್. ಪದ್ಮ ಉಪನ್ಯಾಸ ನೀಡಿದ್ದಾರೆ. ಇನ್ನು ಧರ್ಮ ಮತ್ತು ಸಾಮಾಜಿಕ ಸ್ವಾಸ್ಥ್ಯ ಎಂಬ ವಿಚಾರವಾಗಿ ಉಪನ್ಯಾಸಕರಾದ ವಂದನೀಯ ಫಾದರ್ ವೀರೇಶ್ ವಿ.ಮೊರಾಸ್ ಉಪನ್ಯಾಸ ನೀಡಿದ್ದಾರೆ.
ಡಿಸೆಂಬರ್ 3ರಂದು ಅಮೃತವರ್ಷಿಣಿ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟನೆ ಮಾಡಲಿದ್ದಾರೆ. ಡಿಸೆಂಬರ್ 4ರಂದು ಧರ್ಮಸ್ಥಳದ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ಮತ್ತು ಮಂಜುನಾಥ ಸ್ವಾಮಿಯ ರಥೋತ್ಸವದ ಬಳಿಕ ಸಂಭ್ರಮದ ಲಕ್ಷದೀಪೋತ್ಸವ ತೆರೆಕಾಣಲಿದೆ.