ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಸೇರ್ಪಡೆ ಪರ್ವ
ಮಂಗಳೂರು, ಮೇ 03: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪ್ರಚಾರ ಬಿರುಸಿನಿಂದ ಸಾಗಿದೆ. ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಪರ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ನಗರದ ಪ್ರತಿ ವಾರ್ಡ್ ಗಳಿಗೆ ತೆರಳಿ ಜನರಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಪತಿ ವೇದವ್ಯಾಸ್ ಕಾಮತ್ ಪರ ಪತ್ನಿ ವೃಂದ ಅವರು ಕೂಡ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ಮಧ್ಯೆ, ಕಾಂಗ್ರೆಸ್ ಮುಖಂಡ ಶಶಿರಾಜ್ ಶೆಟ್ಟಿ ಕೊಳಂಬೆ ಸೇರಿದಂತೆ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಬಿಜೆಪಿಗೆ ಸೇರ್ಪಡೆ ಗೊಂಡರು. ಉತ್ತರ ಪ್ರದೇಶದ ಗ್ರಾಮೀಣ ಆಭಿವೃದ್ಧಿ ಸಚಿವ ಮಹೇಂದ್ರ ಸಿಂಗ್ , ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಬರಮಾಡಿಕೊಳ್ಳಲಾಯಿತು. ಮಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಡಿ. ವೇದವ್ಯಾಸ ಕಾಮತ್ ಸೇರಿದಂತೆ ಮತ್ತಿತರ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

ಇದೇ ಸಂದರ್ಭದಲ್ಲಿ ಕಾರ್ಕಳ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಮಂಗಳೂರಿಗೆ ಆಗಮಿಸಿ ಡಿ. ವೇದವ್ಯಾಸ ಕಾಮತ್ ಅವರ ಪರ ಭರ್ಜರಿ ಪ್ರಚಾರ ನಡೆಸಿದರು. ನಗರದ ನೂಜಿಯಿಂದ ಜಪ್ಪಿನಮೊಗರುವರೆಗೆ ಪಾದಯಾತ್ರೆ ನಡೆಸಿದ ಸುನೀಲ್ ಕುಮಾರ್ ವೇದವ್ಯಾಸ ಕಾಮತ್ ಪರ ಪ್ರಚಾರ ನಡೆಸಿದರು.

ಉಜ್ಜೋಡಿಯಲ್ಲಿ ಸುನಿಲ್ ಕುಮಾರ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, "ಕರಾವಳಿಯಲ್ಲಿ ಈ ಬಾರಿ ಅತ್ಯಧಿಕ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಿದ್ಧರಾಮಯ್ಯ ಸರಕಾರದ ದುರಾಡಳಿತದಿಂದ ಹೆಚ್ಚು ನೊಂದವರು ಕರಾವಳಿ ಜಿಲ್ಲೆಯವರು. ಹಾಗಾಗಿಯೇ ಇಲ್ಲಿನ ಮತದಾರ ಬಾಂಧವರು ಕಾಂಗ್ರೆಸ್ ಆಡಳಿತವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ," ಎಂದು ಹೇಳಿದರು.












Click it and Unblock the Notifications