ಕರಾವಳಿ ಪ್ರಕೃತಿ ವಿಕೋಪ ಹಾನಿಗೆ ಶಾಶ್ವತ ಪರಿಹಾರ ಕ್ರಮ: ಎಚ್ಡಿಕೆ ಭರವಸೆ
ಮಂಗಳೂರು, ಆಗಸ್ಟ್ 14: ಕರಾವಳಿ ಜಿಲ್ಲೆಯಲ್ಲಿ ಮಳೆಯಿಂದಾಗಿ ಭೂಕುಸಿತ, ಪ್ರಾಕೃತಿಕ ತೊಂದರೆಗಳು ಗಮನಕ್ಕೆ ಬಂದಿದ್ದು, ಇದಕ್ಕೆ ಶಾಶ್ವತ ಪರಿಹಾರ ನೀಡುವ ಕುರಿತು ಗಮನಹರಿಸುತ್ತೇವೆ ಎಂದು ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಭರವಸೆ ನೀಡಿದರು.
ಕುಕ್ಕೆ ಸುಬ್ರಮಣ್ಯ ಕ್ಷೇತ್ರದಲ್ಲಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕುಟುಂಬಸ್ಥರು ಮಂಗಳವಾರ ಸುಬ್ರಮಣ್ಯ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ, ಅಭಿಷೇಕ, ತುಲಾಭಾರ ಸೇವೆ ನೆರವೇರಿಸಿದರು. ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರಿಂದ ಆಶ್ಲೇಷ ಬಲಿ ಸೇವೆ ನೆರವೇರಿಸಿದರು.
ಬಳಿಕ ಮಾತನಾಡಿದ ಕುಮಾರಸ್ವಾಮಿರಾಜ್ಯದಲ್ಲಿ ಮಳೆಯ ಕೊರತೆ ಇಲ್ಲ, ಉತ್ತಮ ಮಳೆಯಿಂದಾಗಿ ಜಲಾಶಯಗಳು ತುಂಬಿ ಹರಿಯುತ್ತಿವೆ. ಲಿಂಗನಮಕ್ಕಿ ಹಣೆಕಟ್ಟಿನ 11 ಬಾಗಿಲುಗಳಲ್ಲಿ 9 ಬಾಗಿಲುಗಳನ್ನು ತೆರೆಯಲಾಗಿದ್ದು, ಈಗಿನ ಒಳ ಹರಿವು ಜಾಸ್ತಿಯಾಗಿದೆ.

ಈ ಮಧ್ಯೆ ನಿಗದಿತ ಪ್ರಮಾಣದಲ್ಲಿ ನೀರು ಬಿಡುವಂತೆ ತಮಿಳುನಾಡು ಸರಕಾರ ಖ್ಯಾತೆ ತೆಗಿದಿದೆ ಇದಕ್ಕೆ ಕಾನೂನು ಮೂಲಕ ರಾಜ್ಯ ಸರಕಾರ ಸೂಕ್ತ ಉತ್ತರ ನೀಡಲಿದೆ ಎಂದು ಅವರು ತಿಳಿಸಿದರು. ಮಹದಾಯಿ ತೀರ್ಪಿನಲ್ಲಿ ರಾಜ್ಯಕ್ಕೆ ಅನ್ಯಾಯವಾದರೆ ಕಾನೂನು ಮೂಲಕ ಪ್ರಶ್ನಿಸಲಾಗುವುದು ಎಂದರು.
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆ ನಿರಂತರ ಭಾರೀ ಮಳೆಯಾಗುವ ಸಂಭವವಿರುತ್ತದೆ ಎಂದು ಭಾರತ ಹವಾಮಾನ ಇಲಾಖೆ, ಬೆಂಗಳೂರು ಇವರಿಂದ ಜಿಲ್ಲಾಧಿಕಾರಿ ಕಚೇರಿಗೆ ಮಾಹಿತಿ ಬಂದಿದೆ. ಅದರಂತೆ ಮುಂದಿನ 24 ಗಂಟೆ ಕರಾವಳಿ ಪ್ರದೇಶದಲ್ಲಿ ಯಾವುದೇ ಮಿನುಗಾರರು ಮೀನುಗಾರಿಕೆಗಾಗಿ ಸಮುದ್ರಕ್ಕೆ ಅಥವಾ ನದಿ ಪಾತ್ರಕ್ಕೆ ತೆರಳದಂತೆ ಸೂಚಿಸಿದೆ.
ತಗ್ಗು ಪ್ರದೇಶದಲ್ಲಿ ಹಾಗೂ ನದಿ ತೀರದಲ್ಲಿ ವಾಸಿಸುವ ಸಾರ್ವಜನಿಕರು ಸಹ ತಗ್ಗು ಪ್ರದೇಶ/ ನದಿ ತೀರಕ್ಕೆ ತೆರಳದಂತೆ ಸೂಚಿಸಿದೆ. ಈಗಾಗಲೇ ಶಾಲಾ ಮಕ್ಕಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆಯನ್ನು ನೀಡಲಾಗಿದ್ದು ನೀರಿರುವ ತಗ್ಗು ಪ್ರದೆಶಗಳಿಗೆ ಹಾಗೂ ನದಿ ತೀರಗಳಿಗೆ ತೆರಳದಂತೆ ಪಾಲಕರು ಎಚ್ಚರಿಕೆವಹಿಸಲು ತಿಳಿಸಿದೆ.
ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 24x7 ಕಂಟ್ರೋಲ್ ರೂಂ ಸಂಖ್ಯೆ 1077 ಗೆ ಕರೆ ಮಾಡಿ ದೂರು ನೀಡಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications