ಬಿಜೆಪಿ ಜೈಲ್ ಭರೋ ಬಗ್ಗೆ ಗೃಹ ಸಚಿವರು ಹೇಳಿದ್ದು ಹೀಗೆ
ಮಂಗಳೂರು, ಜನವರಿ 12: ಸಿದ್ದರಾಮಯ್ಯ ಅವರು ಬಿಜೆಪಿ ಮತ್ತು ಆರ್ಎಸ್ಎಸ್ ಅನ್ನು ಉಗ್ರಗಾಮಿಗಳು ಎಂದು ಕರೆದಿದ್ದರ ವಿರುದ್ಧ ಜೈಲ್ ಭರೋ ಚಳವಳಿ ಮಾಡುತ್ತಿರುವ ಬಿಜೆಪಿ ಬಗ್ಗೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ವ್ಯಂಗ್ಯ ಮಾಡಿದ್ದಾರೆ.
'ಆರ್ಎಸ್ಎಸ್ ಹಾಗೂ ಬಿಜೆಪಿ ಯವರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿಲ್ಲ ಆ ಹೋರಾಟದಲ್ಲಿ ಜೈಲಿಗೂ ಹೋಗಲಿಲ್ಲ ಹಾಗಾಗಿ ಈಗ ಜೈಲ್ ಭರೋ ಮಾಡುತ್ತಿದ್ದಾರೆ' ಎಂದು ಅವರು ಕುಹುಕವಾಡಿದ್ದಾರೆ.
ಸಿದ್ದರಾಮಯ್ಯ 'ಉಗ್ರ' ಹೇಳಿಕೆಗೆ ಬಿಜೆಪಿ ವ್ಯಗ್ರ ಪ್ರತಿಕ್ರಿಯೆ
ಮಂಗಳೂರಿನಲ್ಲಿ ಇತ್ತೀಚೆಗೆ ಕೋಮು ದ್ವೇಷಕ್ಕೆ ಬಲಿಯಾದ ದೀಪಕ್ ರಾವ್ ಮತ್ತು ಬಶೀರ್ ಅವರ ಮನೆಗಳಿಗೆ ಭೇಟಿ ನೀಡಲೆಂದು ನಗರಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಿಷೇಧ ಮಾಡುವುದಾದರೆ, ಎರಡೂ ಕಡೆಗಳ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಪಿಎಫ್ಐ, ಎಸ್ಡಿಪಿಐ ಒಂದೆಡೆಯಾದರೆ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರೂ 9 ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದರು.
ಮುಖ್ಯಮಂತ್ರಿಗಳು ಪ್ರವಾಸದಲ್ಲಿದ್ದು ಅವರ ಪ್ರವಾಸ ಮುಕ್ತಾಯವಾದ ಬಳಿಕ ಸಂಘಟನೆಗಳ ನಿಷೇಧದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.
ಸಂಘಟನೆಗಳು ಸುಮ್ಮನಿದ್ದರೆ ಸರಿ ಹೋಗುತ್ತೆ
ರಾಜ್ಯದ 29 ಜಿಲ್ಲೆಗಳಲ್ಲಿ ಇರದೇ ಇರುವ ಕೋಮು ಸಂಘರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಹೆಚ್ಚಾಗಿದೆ. ಇದಕ್ಕೆ ಕೋಮುವಾದಿ ಸಂಘಟನೆಗಳೇ ಕಾರಣ. ಜನರಿಗೆ ಇದಾವುದೂ ಬೇಕಾಗಿಲ್ಲ. ಸಂಘಟನೆಗಳು ಸುಮ್ಮನಿದ್ದರೆ, ಇಂತಹ ಘಟನೆಗಳೂ ನಡೆಯುವುದಿಲ್ಲ ಎಂದು ಗೃಹ ಸಚಿವರು ಗುಡುಗಿದರು.
ಮೇಸ್ತ ಪ್ರಕರಣದಲ್ಲಿ ತೋರಿದ ಆಸ್ತೆ ಧನ್ಯಶ್ರೀಗೆ ಏಕಿಲ್ಲ
ಮೂಡಿಗೆರೆಯ ಧನ್ಯಶ್ರೀ ಪ್ರಕರಣದಲ್ಲಿ ಬಿಜೆಪಿಯವರ ದ್ವಂದ್ವ ನಿಲುವು ಬಯಲಾಗಿದೆ. ಪರೇಶ ಮೇಸ್ತ ಪ್ರಕರಣದಲ್ಲಿ ನಮ್ಮ ಕಾರ್ಯಕರ್ತನ ಕೊಲೆ ಅಗಿದೆ ಎಂದು ಬೊಬ್ಬೆ ಇಟ್ಟವರು, ಇಂದು ಅವರದ್ದೆ ಪಕ್ಷದ ಮುಖಂಡ ಮಾಡಿರುವ ಅಪರಾಧವನ್ನು ಖಂಡಿಸುವುದಕ್ಕೂ ಹೋಗಿಲ್ಲ ಎಂದು ಟೀಕಿಸಿದರು.
ಪೊಲೀಸರು ಒಳ್ಳೆ ಕೆಲಸ ಮಾಡಿದ್ದಾರೆ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರಿಗೆ ಇದೆ. ಆದರೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ನಡೆದುಕೊಳ್ಳಬೇಕು ಎಂದು ಹೇಳಿದ ಗೃಹ ಸಚಿವರು ಜಿಲ್ಲೆಯಲ್ಲಿ ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ. ಮೂರೂ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು.
ದೀಪಕ್ ರಾವ್, ಬಶೀರ್ ಮನೆಗೆ ಭೇಟಿ
ಇತ್ತೀಚೆಗೆ ಕೊಲೆಯಾದ ಕಾಟಿಪಳ್ಳದ ದೀಪಕ್ ರಾವ್ ಮನೆಗೆ ಭೇಟಿ ನೀಡಿ ದೀಪಕ್ ತಾಯಿ ಪ್ರೇಮಲತಾ ಮತ್ತು ತಮ್ಮ ಸತೀಶ್ ರಾವ್ ಅವರಿಗೆ ಸಾಂತ್ವಾನ ಹೇಳಿದರು. ಅಂದೇ ಹಲ್ಲೆಗೊಳಗಾಗಿ ನಿಧನರಾದ ಅಬ್ದುಲ್ ಬಶೀರ್ ಮನೆಗೂ ಭೇಟಿ ನೀಡಿದ ಸಚಿವರು ಅವರ ಕುಟುಂಬಕ್ಕೆ ಧೈರ್ಯ ತುಂಬಿದರು.