ಯಶೋಮಾರ್ಗ ಕಾರ್ಯ ಯಶಸ್ವಿ: ಯಶ್ ಕಾರ್ಯಕ್ಕೆ ತಲ್ಲೂರು ಗ್ರಾಮಸ್ಥರ ಅಭಿನಂದನೆ
ಕೊಪ್ಪಳ, ಅಕ್ಟೋಬರ್ 02: ತಮ್ಮ ಅಭಿನಯದಿಂದ ಗಮನ ಸೆಳೆದಿರುವ ಚಿತ್ರನಟ ಯಶ್ ರೈತರಿಗೆ ಅನುಕೂಲಕ್ಕಾಗಿ ಕೈಗೊಂಡಿರುವ ಕಾರ್ಯ ಇದೀಗ ಆಕರ್ಷಣೆಯ ಕೇಂದ್ರವಾಗಿದೆ. ಯಶ್ ಅವರ ಯಶೋಮಾರ್ಗದಿಂದ ಕಾರ್ಯ ಇದೀಗ ಯಶಸ್ಸು ಕಂಡಿದ್ದು, ಯಶ್ ಸಮಾಜಮುಖಿ ಕಾರ್ಯಕ್ಕೆ ರೈತರು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಕಳೆದ 14 ವರ್ಷದ ನಂತರ ಯಲಬುರ್ಗಾ ತಾಲೂಕಿನ ತಲ್ಲೂರು ಗ್ರಾಮದಲ್ಲಿರುವ ಕೆರೆಯ ಕೋಡಿ ಬಿದ್ದಿದ್ದು, ಕೆರೆಯಿಂದ ನೀರು ಹರಿಯುತ್ತಿರುವುದು ರೈತರಿಗೆ ಸಂತಸ ತಂದಿದೆ.
ಚಿತ್ರನಟ ಯಶ್ 2016ರಲ್ಲಿ ಏನಾದರೂ ಸಾಮಾಜಿಕ ಕಾರ್ಯ ಮಾಡಬೇಕು ಅಂದುಕೊಂಡಿದ್ದರು. ಈ ಸಂದರ್ಭದಲ್ಲಿ ರೈತರಿಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕೆ ಕೆರೆ ಅಭಿವೃದ್ಧಿ ಪಡಿಸಿದರು.
ಅವರ ಯಶೋಮಾರ್ಗ ಫೌಂಡೇಶನ್ನಿಂದ ಕೆರೆ ಅಭಿವೃದ್ದಿಗೆ ಚಾಲನೆ ನೀಡಿದ್ದು, ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಲ್ಲೂರು ಗ್ರಾಮದಲ್ಲಿರುವ ಕೆರೆಯ ಕೋಡಿ ಬಿದ್ದಿದೆ. ಈ ಭಾಗದಲ್ಲಿ ಹೆಚ್ಚಾಗಿ ಒಣ ಭೂಮಿ ಪ್ರದೇಶವಾಗಿತ್ತು. ಅಂತರ್ಜಲ ಮಟ್ಟ ತುಂಬಾ ಕೆಳಹಂತಕ್ಕೆ ಕುಸಿದಿತ್ತು. ಈ ಸಂದರ್ಭದಲ್ಲಿ ಯಶ್ ಈ ಕೆರೆಯನ್ನು ಅಭಿವೃದ್ದಿಪಡಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ಕಾರ್ಯವನ್ನು ಮಾಡಿದ್ಧರು.

ಸ್ಥಳೀಯರು, ಜಲಮೂಲ ಸಂರಕ್ಷಣಾ ಮುಖಂಡರೊಂದಿಗೆ 2017ರಲ್ಲಿ ತಲ್ಲೂರು ಕೆರೆಯನ್ನು 4 ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೆಯನ್ನು ಅಭಿವೃದ್ದಿಪಡಿಸಿದ್ದಾರೆ. 96 ಎಕರೆ ವಿಸ್ತಾರ ಇರುವ ತಲ್ಲೂರು ಕೆರೆಯು 1,038 ಎಕರೆ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ.
ರೈತರ ಬದುಕಿಗೆ ಆಸರೆ ಆದ ಯಶೋಮಾರ್ಗ
ಇಲ್ಲಿರುವ ಕೆರೆಯಲ್ಲಿ ಅಪಾರ ಪ್ರಮಾಣದಲ್ಲಿ ಹೂಳು ತುಂಬಿತ್ತು. ಸುತ್ತಲಿನ 14 ಗ್ರಾಮಗಳಲ್ಲಿ ಅಂತರ್ಜಲ ಮಟ್ಟವೂ ಕುಸಿದಿತ್ತು. ಕೆರೆ ಅಭಿವೃದ್ದಿಪಡಿಸಿದ ನಂತರ ಈಗ ಅಂತರ್ಜಲ ಮಟ್ಟ ಹೆಚ್ಚಳ ಆಗಿದೆ. ಈ ಮಧ್ಯೆ ಇದೇ ಕೆರೆಯು ಭರ್ತಿಯಾಗಿ ಕೊಡಿ ಬಿದ್ದಿದೆ. ಇದರಿಂದ ರೈತರು ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಕೆರೆಯು 2008ರಲ್ಲಿ ಭರ್ತಿಯಾಗಿ ಕೊಡಿ ಬಿದ್ದಿತ್ತು. ಅದರ ನಂತರ ಯಶ್ ಕೆರೆ ಅಭಿವೃದ್ದಿ ಪಡಿಸಿದ್ದರು. ಇದೇ ವೇಳೆ ಕಳೆದು ಮೂರು ನಾಲ್ಕು ವರ್ಷದಿಂದ ಉತ್ತಮ ಮಳೆಯಾಗುತ್ತಿದೆ. ಭಾರಿ ಮಳೆ ಸುರಿದಿದ್ದು, ಕೆರೆ ಭರ್ತಿ ಆಗಿತ್ತು, ಆದರೆ ಕೋಡಿ ಬಿದ್ದಿರಲಿಲ್ಲ. ಇದೀಗ ಮತ್ತೆ ಮಳೆರಾಯನ ಆರ್ಭಟದಿಂದ ಕೆರೆ ಕೋಡಿ ಬಿದ್ದಿದೆ. ಇದರಿಂದ ತಲ್ಲೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಯಶ್ ಅವರ ಸಮಾಜಮುಖಿ ಕಾರ್ಯಕ್ಕೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ನೂರಾರು ಜನ ಕೆರೆ ಪ್ರದೇಶಕ್ಕೆ ಭೇಟಿ ನೀಡಿ ದೃಶ್ಯವನ್ನು ನೋಡಿ ಆನಂದಿಸುತ್ತಿದ್ದಾರೆ. ಒಟ್ಟಿನಲ್ಲಿ ಯಶೋಮಾರ್ಗದ ಮೂಲಕ ನಟ ಯಶ್ ಅವರ ಸಂಕಲ್ಪಕ್ಕೆ ಇದೀಗ ಫಲ ಸಿಕ್ಕಂತಾಗಿದೆ. ಇದರ ಮೂಲಕ ಹತ್ತರು ಗ್ರಾಮಗಳ ರೈತರ ಬದುಕಿಗೆ ಆಸರೆ ಆಗಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು.












Click it and Unblock the Notifications