ಜಾತ್ಯಾತೀತರು ಅಪ್ಪ- ಅಮ್ಮನ ರಕ್ತದ ಗುರುತಿಲ್ಲದವರು: ಅನಂತಕುಮಾರ್ ಹೆಗಡೆ
ಕೊಪ್ಪಳ, ಡಿಸೆಂಬರ್ 24: "ನಾನೊಬ್ಬ ಮುಸ್ಲಿಂ, ಕ್ರೈಸ್ತ, ಲಿಂಗಾಯತ ಸೇರಿ ಯಾವುದೇ ಜಾತಿ ಹೆಸರು ಹೇಳಲಿ ನನ್ನ ತಕರಾರಿಲ್ಲ. ಆದರೆ ಜಾತ್ಯಾತೀತರಂತೆ ಕರೆದುಕೊಳ್ಳುವವರು ಅಪ್ಪ- ಅಮ್ಮನ ರಕ್ತದ ಗುರುತು ಇಲ್ಲದವರು. ಜಾತ್ಯಾತೀತರು ಇತಿಹಾಸ ಗೊತ್ತಿಲ್ಲದ ಮೂರ್ಖರು," ಅಂತ ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕುಕನೂರಿನಲ್ಲಿ ಬ್ರಾಹ್ಮಣ ಮಹಾಸಭಾದ ಯುವ ಸಮಾವೇಶ ಉದ್ದೇಶಿಸಿ ಮಾತನಾಡಿದ ಅನಂತ್ ಕುಮಾರ್ ಹೆಗಡೆ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

"ಜಾತಿ ಹೆಸರು ಹೇಳಿದರೆ ನನಗೆ ಖುಷಿ ಅನ್ಸುತ್ತೆ. ಆದರೆ ಜ್ಯಾತ್ಯಾತೀತರು ಅಂತ ಕರಕೊಂಡ್ರೆ ಅಪ್ಪ - ಅಮ್ಮನ ರಕ್ತ ಗೊತ್ತಿಲ್ಲ ಅಂತ ಅನ್ಸುತ್ತೆ. ಆದ್ರೂ ಈ ನನ್ನ ಮಕ್ಕಳು ವಿಚಾರವಾದಿಗಳೆಂದು ಕರೆದುಕೊಳ್ಳುತ್ತಾರೆ. ಅವರ ರಕ್ತದ ಬಗ್ಗೆ ನನಗೆ ಅನುಮಾನ ಬರುತ್ತೆ," ಎಂದು ಅನಂತ್ ಕುಮಾರ್ ಹೆಗಡೆ ಭಾಷಣ ಬಿಗಿದಿದ್ದಾರೆ.
"ಇಸ್ಲಾಂನ ಖಡ್ಗ ಜಗತ್ತು ಗೆದ್ದು ಭಾರತಕ್ಕೆ ಬಂದಾಗ ದಿಗ್ಭ್ರಮೆಯಾಗಿ ಗಂಗೆಯಲ್ಲಿ ತೊಳೆದು ಹೋಗಿತ್ತು. ಸುಮಾರು 800 ವರ್ಷಗಳ ಆಕ್ರಮಣದಿಂದ ಇಡೀ ಏಷ್ಯಾ ಆಕ್ರಮಿಸಿದರೂ ಇಸ್ಲಾಂ ಪುಟಗೋಸಿಗಳಿಗೆ ಇನ್ನು ತಲೆಯೆತ್ತಿ ನಿಲ್ಲಲಿಕ್ಕೆ ಆಗಲಿಲ್ಲ," ಎಂದು ಅವರು ವಿವಾದಾತ್ಮಕ ಭಾಷಣ ಮಾಡಿದ್ದಾರೆ.
"ಹಿಂದೂ ಒಂದು ಸಮಾಜದ ಸ್ವತ್ತಲ್ಲ. ಕಾಲ, ಕಾಲಕ್ಕೆ ಸಂವಿಧಾನ ಬದಲಾಗಬೇಕು; ಬದಲಾಗುತ್ತದೆ. ಸಂವಿಧಾನ ಬದಲಾಯಿಸುವುದಕ್ಕೆ ನಾವು ಬಂದಿರುವುದು," ಎಂದು ತಮ್ಮ ಎಂದಿನ ದಾಟಿಯ ಹೇಳಿಕೆಯನ್ನು ಅನಂತ ಕುಮಾರ್ ಹೆಗಡೆ ನೀಡಿದ್ದಾರೆ.












Click it and Unblock the Notifications