ಕೋಲಾರ; ಆಲೂಗಡ್ಡೆಗೆ ಕಳ್ಳರ ಕಾಟ, ಕಾವಲು ಕೂತ ರೈತರು
ಕೋಲಾರ, ಡಿಸೆಂಬರ್ 16; ಕೋಲಾರ ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆಗೆ ಕಳ್ಳರ ಹಾವಳಿ ಹೆಚ್ಚಾಗಿದೆ. ಬೆಳೆ ಬೆಳೆದ ರೈತರು ರಾತ್ರಿ ಹೊಲದಲ್ಲಿಯೇ ಕಾವಲು ಕೂತಿದ್ದು, ರಕ್ಷಣೆ ನೀಡುವಂತೆ ಪೊಲೀಸರಿಗೆ ಸಹ ಮನವಿ ಮಾಡಿದ್ದಾರೆ.
ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಉಕ್ಕುಂದ ಗ್ರಾಮದ ರೈತ ಕೃಷ್ಣಪ್ಪಗೆ ಸೇರಿದ ತೋಟದಲ್ಲಿ 20 ಮೂಟೆ ಹಾಗೂ ಬೂದಿಕೋಟೆ ಗ್ರಾಮದ ರೈತ ವೆಂಕಟೇಶ್ ಶೆಟ್ಟಿಗೆ ಸೇರಿದ 15 ಮೂಟೆ ಆಲೂಗಡ್ಡೆಯನ್ನು ಕಳುವು ಮಾಡಲಾಗಿದೆ.
ಬಿತ್ತನೆ ಬಳಿಕ ಆಲೂಗಡ್ಡೆ ಬೆಳೆ ರಕ್ಷಣೆಗೆ ರೈತರಿಗೆ ಸಲಹೆಗಳು
ತೋಟದಲ್ಲಿದ್ದ 35 ಮೂಟೆಯಷ್ಟು ಆಲೂಗಡ್ಡೆ ಬೆಳೆಯನ್ನು ಕಳ್ಳರು ರಾತ್ರೋರಾತ್ರಿ ಕದ್ದಿದ್ದಾರೆ. ಕಷ್ಟಪಟ್ಟು ಬೆಳೆದ ಬೆಳೆ ಕಳ್ಳರ ಪಾಲುಗುತ್ತಿರುವುದನ್ನು ಕಂಡು ರೈತರು ಆತಂಕಗೊಂಡಿದ್ದು, ಬೆಳೆ ರಕ್ಷಿಸಿಕೊಳ್ಳಲು ಪರದಾಡುತ್ತಿದ್ದಾರೆ.
ಫಸಲ್ ಭೀಮಾ ಯೋಜನೆ; ಆಲೂಗಡ್ಡೆ ಬೆಳೆ ನೋಂದಣಿಗೆ ಅವಕಾಶ
ಕಳೆದ ವಾರ ಬಂಗಾರಪೇಟೆ ತಾಲೂಕಿನ ಗಾಜಗ ಗ್ರಾಮದ ಮಂಜುನಾಥ್ ರೆಡ್ಡಿ ಎಂಬ ರೈತರಿಗೆ ಸೇರಿದ ಆಲೂಗಡ್ಡೆ ಬೆಳೆಯನ್ನು ಕದಿಯಲಾಗಿತ್ತು. ಫಸಲು ಚೆನ್ನಾಗಿ ಬಂದು ಇನ್ನೇನೂ ಬೆಳೆ ಕೀಳುವ ಸಮಯದಲ್ಲಿ ಕಳ್ಳರು ಈ ರೀತಿಯ ದುರ್ಷ್ಕತ್ಯ ಮಾಡಿದ್ದರು.
ಅಂಗಮಾರಿ ರೋಗದಿಂದ ಆಲೂಗಡ್ಡೆ ಬೆಳೆ ಸಂರಕ್ಷಣೆ ಹೇಗೆ?
ರಾತ್ರಿ ತೋಟಕ್ಕೆ ನುಗ್ಗಿ ಆಲೂಗಡ್ಡೆ ಬೆಳೆಯನ್ನು ಆಗೆದು ಕದಿಯಲಾಗುತ್ತಿದೆ. ಸಾಲ ಮಾಡಿ ಬೆಳೆ ಬೆಳೆದಿದ್ದ ರೈತನಿಗೆ ಇದರಿಂದಾಗಿ ಆಘಾತವಾಗಿದೆ. ಬೆಳೆ ರಕ್ಷಣೆಗಾಗಿ ರಾತ್ರಿ ನಿದ್ದೆ ಬಿಟ್ಟು ಕಾವಲು ಕಾಯಬೇಕಿದೆ.
Recommended Video
ರೈತರು ಸ್ವತಃ ಬೆಳೆಗಳ ರಕ್ಷಣೆಗಾಗಿ ಹೊಲದಲ್ಲಿ ಕಾವಲು ಕಾಯುತ್ತಿದ್ದಾರೆ. ಬೆಳೆಗಳಿಗೆ ರಕ್ಷಣೆ ನೀಡುವಂತೆ ಪೋಲಿಸರಿಗೆ ಸಹ ಮನವಿ ಮಾಡಿದ್ದಾರೆ. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.