ಪ್ರಚಾರದಿಂದ ದೂರ ಸರಿದ ಕೆಎಚ್ ಮುನಿಯಪ್ಪ: ಕೈಯಲ್ಲಿಲ್ಲ ಕೋಲಾರ!
ಕೋಲಾರ ಏಪ್ರಿಲ್ 7: ಕೋಲಾರದಲ್ಲಿ ಬಂಡಾಯದ ಬಿಸಿ ಹೆಚ್ಚಾಗಿದೆ. ಲೋಕಸಭೆಗೆ ಕಾಂಗ್ರೆಸ್ ಕೋಲಾರದಿಂದ ಭರ್ಜರಿ ಪ್ರಚಾರ ಆರಂಭಿಸಿದ್ದು ಈ ಪ್ರಚಾರಕ್ಕೆ ಸಚಿವ ಕೆಎಚ್ ಮುನಿಯಪ್ಪ ಗೈರಾಗಿದ್ದು ಕಂಡು ಬಂದಿದೆ. ಇದರಿಂದಾಗಿ ಕೈ ಪಾಳಯದಲ್ಲಿ ಮನಸ್ತಾಪಗಳು ಬೂದಿ ಮುಚ್ಚಿದ ಕೆಂಡದಂತಿದ್ದು ಚುನಾವಣೆಗೆ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ.
ಲೋಕಸಭೆಗೆ ಕಾಂಗ್ರೆಸ್ ಕೋಲಾರದಿಂದ ಭರ್ಜರಿ ಪ್ರಚಾರ ಆರಂಭಿಸಿದೆ. ಕಳೆದ ದಿನ (ಏಪ್ರಿಲ್ 6) ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಕೋಲಾರದಿಂದ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗೆ ಪ್ರಚಾರ ಆರಂಭಿಸಿದರು. ಆದರೆ ಈ ಪ್ರಚಾರದಲ್ಲಿ ಸಚಿವ ಕೆಎಚ್ ಮುನಿಯಪ್ಪ ಹಾಗೂ ಅವರ ಪುತ್ರಿ ಶಾಸಕಿ ರೂಪಕಲಾ ಭಾಗವಹಿಸಿರಲಿಲ್ಲ.

ಕೆಎಚ್ ಮುನಿಯಪ್ಪ ಅವರು ತಮ್ಮ ಅಳಿಯ ಚಿಕ್ಕಪೆದ್ದಣ್ಣರಿಗೆ ಕಾಂಗ್ರೆಸ್ ಟಿಕೆಟ್ ಬಯಸಿದ್ದರು. ಅದು ಕೈತಪ್ಪಿದ್ದರಿಂದ ಅವರು ಮುನಿಸಿಕೊಂಡಿದ್ದಾರೆ. ಅವರ ಮುನಿಸು ಶಮನಕ್ಕೆ ಎಷ್ಟೇ ಪ್ರಯತ್ನಗಳು ನಡೆದರು ಫಲ ನೀಡಿಲ್ಲ. ಮಾತ್ರವಲ್ಲದೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ರಮೇಶ್ ಕುಮಾರ್ ಬಣ ಮೇಲುಗೈ ಸಾಧಿಸಿದೆ ಎಂಬ ಕೋಪವೂ ಕೆಎಚ್ ಮುನಿಯಪ್ಪ ಅವರಿಗಿದೆ. ಹೀಗಾಗಿ ಒತ್ತಾಯಕ್ಕೆ ಮಣಿದು ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದರೂ ಪ್ರಚಾರದ ವೇಳೆ ಮಾತ್ರ ಗೈರಾಗಿದ್ದಾರೆ.
ಅದಾಗ್ಯೂ ರಮೇಶ್ ಕುಮಾರ್ ಬಣಕ್ಕೆ ಟಿಕೆಟ್ ಸಿಕ್ಕಿದ್ದರಿಂದ ಕೆಎಚ್ ಮುನಿಯಪ್ಪ ಪ್ರಚಾರಕ್ಕೆ ಆಗಮಿಸಿದರೆ ಬಂಡಾಯ, ಗುಂಪುಗಾರಿಕೆ ಪ್ರದರ್ಶನ ಆಗುತ್ತದೆ. ಹೀಗಾಗಿ ಸಿಎಂ ಡಿಸಿಎಂ ಪ್ರಚಾರ ಕಾರ್ಯಕ್ರಮಕ್ಕೆ ಕೆಎಚ್ ಮುನಿಯಪ್ಪ ಅವರನ್ನು ಆಹ್ವಾನ ಮಾಡಿಲ್ಲ ಎನ್ನಲಾಗುತ್ತಿದೆ. ಅವಶ್ಯಕತೆ ಇದ್ದಾಗ ಅವರನ್ನು ಕರೆಸಿಕೊಳ್ಳುವ ಸಾಧ್ಯತೆ ಇದೆ.
ಕೋಲಾರದಲ್ಲಿ ಕೆಎಚ್ ಮುನಿಯಪ್ಪ ಅಳಿಯನಿಗೆ ಟಿಕೆಟ್ ಬಯಸಿದ್ದು ಮಾತ್ರವಲ್ಲದೆ ರಮೇಶ್ ಕುಮಾರ್ ಬಣಕ್ಕೆ ಟಿಕೆಟ್ ನೀಡುವುದನ್ನು ಬಯಸಿರಲಿಲ್ಲ. ಆದರೆ ಕಾಂಗ್ರೆಸ್ ಹೈಕಮಾಂಡ್ ರಮೇಶ್ ಕುಮಾರ್ ಬಣದ ಕೆ.ವಿ.ಗೌತಮ್ ಅವರಿಗೆ ಟಿಕೆಟ್ ನೀಡಿದೆ. ಇದರಿಂದ ಕೋಪಗೊಂಡ ಮುನಿಯಪ್ಪ ಕಾಂಗ್ರೆಸ್ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಶನಿವಾರ ಪ್ರಚಾರದ ವೇಳೆ ರಮೆಶ್ ಕುಮಾರ್ ಇರುತ್ತಾರೆ ಎನ್ನುವ ಕಾರಣಕ್ಕಾಗಿ ಅವರು ಪ್ರಚಾರಕ್ಕೆ ಬಂದಿಲ್ಲ ಎನ್ನಲಾಗುತ್ತಿದೆ. ಇದರಿಂದ ಮುನಿಯಪ್ಪ ಮುನಿಸು ತಣ್ಣಗಾಗದೇ ಇರುವುದು ಸ್ಪಷ್ಟವಾಗಿದೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕುರುಡುಮಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜೊತೆ ಶನಿವಾರ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ, 'ಪ್ರಜಾಧ್ವಿ 2.0'ಕ್ಕೆ ಚಾಲನೆ ನೀಡುವ ಮೂಲಕ ಕಾಂಗ್ರೆಸ್ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಬಳಿಕ, ತಮ್ಮ ಪ್ರಚಾರ ಭಾಷಣದುದ್ದಕ್ಕೂ ಬಿಜೆಪಿ, ಪ್ರಧಾನಿ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದ ಸಿಎಂ, ಬಿಜೆಪಿಯವರು ಹೇಳಿದಂತೆ ನಡೆದುಕೊಂಡಿದ್ದಾರಾ? ಮೋದಿ ಹತ್ತು ವರ್ಷಗಳಲ್ಲಿ ನುಡಿದಂತೆ ನಡೆದುಕೊಂಡರಾ? ರೈತರ ಆದಾಯವನ್ನು ದುಪ್ಪಟ್ಟು ಮಾಡುವುದಾಗಿ ಹೇಳಿದ್ದರು. ವರ್ಷಕ್ಕೆ ಎರಡು ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು ಮಾಡಿದ್ರಾ? ಎಂದು ಸಿಎಂ ಪ್ರಶ್ನೆ ಮಾಡಿದರು.
ಕೋಲಾರದಲ್ಲಿ ಬಿಜೆಪಿ ಮಲ್ಲೇಶ್ ಬಾಬು ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ವಿರುದ್ಧ ಕಮಲ ಪಡೆ ಗೆಲ್ಲಲು ತೊಡೆ ತಟ್ಟಿ ನಿಂತಿದೆ. ಕೆಎಚ್ ಮುನಿಯಪ್ಪ ಲಾಭವನ್ನು ಬಿಜೆಪಿ ಪಡೆದುಕೊಳ್ಳು ಸಾಧ್ಯತೆಗಳು ಇವೆ.












Click it and Unblock the Notifications