ಸ್ಮಶಾನ ಜಾಗದಲ್ಲಿ ನೌಕಾನೆಲೆ ಕಾಮಗಾರಿ ವಿಸ್ತರಣೆ: ಶವಸಂಸ್ಕಾರಕ್ಕೆ ಪರದಾಡಿದ ಗ್ರಾಮಸ್ಥರು
ಕಾರವಾರ, ನವೆಂಬರ್ 27: ನೌಕಾನೆಲೆಯಿಂದ ಸ್ಮಶಾನಕ್ಕೆ ತೆರಳುವ ರಸ್ತೆಯಲ್ಲಿ ಆಳೆತ್ತರದ ಕಂದಕ ನಿರ್ಮಾಣ ಮಾಡಲಾಗಿದ್ದು, ಶವ ಸಂಸ್ಕಾರಕ್ಕೆ ಜನ ಪರದಾಡಿರುವ ಘಟನೆ ಕಾರವಾರದ ತಾಲೂಕಿನ ತೋಡುರು ಗ್ರಾಮದಲ್ಲಿ ನಡೆದಿದೆ.
ತೋಡುರು ಗ್ರಾಮದ ಯುವಕ ರವಿಕಾಂತ ಗೌಡ ಎಂಬಾತ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಮೃತನ ಶವಸಂಸ್ಕಾರ ಮಾಡಲು ಊರವರು ತಯಾರಿ ಮಾಡಿಕೊಂಡಿದ್ದರು. ಆದರೆ ಕಟ್ಟಿಗೆಗಳನ್ನು ಸ್ಮಶಾನಕ್ಕೆ ಸಾಗಿಸಲು ಮುಂದಾದಾಗ ರಸ್ತೆ ಇಲ್ಲದಿರುವುದನ್ನು ಕಂಡು ಗ್ರಾಮಸ್ಥರು ಕಂಗಾಲಾಗಿದ್ದಾರೆ. ಕೊನೆಗೆ ರಾತ್ರಿ ಕಳೆಯುವವರೆಗೂ ಮೃತದೇಹವನ್ನು ಮನೆಯಲ್ಲೇ ಇರಿಸಿಕೊಂಡಿದ್ದಾರೆ.
ಕಾರವಾರ ತೀರದಲ್ಲಿ ಡಾಲ್ಫಿನ್ಗಳ ಚೆಲ್ಲಾಟ: ಯೋಜನೆ ಜಾರಿಗೆ ಒತ್ತಾಯ
ಸೀಬರ್ಡ್ ನೌಕಾನೆಲೆ ಯೋಜನೆಯ ಎರಡನೇ ಹಂತದ ಕಾಮಗಾರಿ ನಡೆಸುತ್ತಿರುವ ಕಾರಣ ಕಾರವಾರ ತಾಲೂಕಿನ ಅಲಿಗದ್ದಾದಿಂದ ಅಂಕೋಲಾ ತಾಲೂಕಿನ ಬೇಲೇಕೇರಿಯವರೆಗೆ ಬೃಹತ್ ಕಂದಕದ ಕಾಲುವೆ ನಿರ್ಮಿಸಲಾಗುತ್ತಿದೆ. ನಿತ್ಯವೂ ಜೆಸಿಬಿ ಮೂಲಕ ಕಂದಕ ನಿರ್ಮಾಣ ಮಾಡಿ ಬೇಲಿ ನಿರ್ಮಾಣ ಮಾಡಲಾಗುತ್ತಿದೆ ಎನ್ನಲಾಗಿದೆ.
ಆದರೆ ಕಂದಕ ನಿರ್ಮಾಣ ಮಾಡಿದ ತೊಡೂರು ವ್ಯಾಪ್ತಿಯ ಗುಡ್ಡದ ಮೇಲೆ ಸ್ಮಶಾನ ಭೂಮಿ ಇದ್ದು ಅನಾದಿಕಾಲದಿಂದಲೂ ಊರಿನಲ್ಲಿ ಯಾರೇ ಸಾವನ್ನಪ್ಪಿದ್ದರು ಇಲ್ಲಿಯೇ ಶವ ಸಂಸ್ಕಾರ ಮಾಡಲಾಗುತ್ತದೆ. ಆದರೆ ಈ ಬಾರಿ ನೌಕಾನೆಲಯವರು ಕಂದಕ ನಿರ್ಮಾಣ ಮಾಡಿದ ಪರಿಣಾಮ ಸ್ಮಶಾನ ಹಾಗೂ ತೊಡೂರು ಗ್ರಾಮ ಬೇರೆ ಬೇರೆಯಾಗಿದೆ. ಸ್ಮಶಾನಕ್ಕೆ ಶವ ಸಂಸ್ಕಾರಕ್ಕೆ ತೆರಳಬೇಕೆಂದರೆ ಆಳೆತ್ತರದ ಕಂದಕ ದಾಟಿ ಹರಸಾಹಸಪಟ್ಟು ತೆರಳಬೇಕಿದೆ.
ಅನಾದಿ ಕಾಲದಿಂದ ಊರ ಪಕ್ಕದಲ್ಲಿ ಸ್ಮಶಾನ ಭೂಮಿ ಇದ್ದು, 36 ಗುಂಟೆ ಜಾಗಕ್ಕೆ 2016- 17ರಲ್ಲಿ ಹಕ್ಕುಪತ್ರ ನೀಡಲಾಗಿದೆ. ಆದರೆ ಇದೇ ಭೂಮಿಯನ್ನು ಆವರಿಸಿ ನೌಕಾನೆಲೆ ಟ್ರೆಂಚ್ ನಿರ್ಮಿಸಿಕೊಂಡಿದ್ದು, ಶವ ಸಂಸ್ಕಾರಕ್ಕೆ ಸಮಸ್ಯೆಯಾಗಿದೆ. ಈ ಬಗ್ಗೆ ನೌಕಾನೆಲೆಯ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಮುಂದೆ ಇಲ್ಲಿ ಬೇಲಿಯನ್ನೂ ಅಳವಡಿಸುವುದಾಗಿ ತಿಳಿಸಿದ್ದು, ಗ್ರಾಮಸ್ಥರಲ್ಲಿ ಮುಂದೆ ಶವಸಂಸ್ಕಾರ ಎಲ್ಲಿ ಮಾಡಬೇಕೆಂಬ ಗೊಂದಲ ಮೂಡಿಸಿದೆ.
ಶನಿವಾರ ಬೆಳಗ್ಗೆ ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಾಗ ಸ್ಥಳಕ್ಕೆ ಧಾವಿಸಿದ ಕಾರವಾರ ತಹಶೀಲ್ದಾರ್ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ತಾತ್ಕಾಲಿಕವಾಗಿ ಶವ ಸಂಸ್ಕಾರ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಹಶೀಲ್ದಾರ್ ಎನ್.ಎಫ್.ನರೋನಾ, "ಸ್ಮಶಾನ ಭೂಮಿಗೆ ಸಾಗಲು ಗ್ರಾಮಸ್ಥರಿಗೆ ತೊಂದರೆಯಾಗಿರುವ ಬಗ್ಗೆ ನಮ್ಮ ಗಮನಕ್ಕೆ ಬಂದು ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿಸಲಾಗಿದೆ. ಸ್ಮಶಾನ ಭೂಮಿ ಇರುವ ಜಾಗವನ್ನು ನೌಕಾನೆಲೆಗೆ 1986- 87ರಲ್ಲಿ ಅರಣ್ಯ ಇಲಾಖೆಯಿಂದ ಲಾಗಣಿ ನೀಡಲಾಗಿತ್ತು. ಸದ್ಯ ಯೋಜನೆ ವಿಸ್ತರಣೆಗೊಳ್ಳುತ್ತಿರುವುದರಿಂದ ಈಗ ಬೇಲಿ ನಿರ್ಮಿಸಿಕೊಳ್ಳಲು ಅವರು ಮುಂದಾಗಿದ್ದಾರೆ. ಆದರೆ ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.