ಅಂಕೋಲಾದಲ್ಲಿ ಲೋಕಾಯುಕ್ತ ದಾಳಿ: 15 ಸಾವಿರ ಲಂಚ ಪಡೆಯುತ್ತಿದ್ದ ಸರ್ವೆ ಅಧಿಕಾರಿ ವಶಕ್ಕೆ
ಕಾರವಾರ, ಜನವರಿ, 06: ಸರ್ವೆ ಅಧಿಕಾರಿಯೊಬ್ಬ ಜಾಗ ಪೋಡಿ ಮಾಡಿಕೊಡಲು 50 ಸಾವಿರ ರೂಪಾಯಿ ಕೊಡುವಂತೆ ಬೇಡಿಕೆ ಇಟ್ಟಿದ್ದ. ಇದೇ ವೇಳೆಯಲ್ಲಿ ರಮೇಶ್ ಬಳಿ 15 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಸರ್ವೆ ಅಧಿಕಾರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು, ಆತನನ್ನು ವಶಕ್ಕೆ ಪಡೆದಿರುವ ಘಟನೆ ಅಂಕೋಲಾದಲ್ಲಿ ನಡೆದಿದೆ.
ಸರ್ವೆ ಅಧಿಕಾರಿ ಪುಟ್ಟುಸ್ವಾಮಿ ಸಿಕ್ಕಿಬಿದ್ದ ಆರೋಪಿಯಾಗಿದ್ದಾನೆ. ಅಂಕೋಲಾದ ರಮೇಶ್ ಎಂಬುವವರಿಂದ ಜಮೀನಿನ ಜಾಗವನ್ನು ಪೋಡಿ ಮಾಡಿಕೊಡಲು 50 ಸಾವಿರ ಲಂಚದ ಬೇಡಿಕೆ ಇಟ್ಟು ಈ ಹಿಂದೆ 5 ಸಾವಿರ ಪಡೆದಿದ್ದ ಎನ್ನಲಾಗಿದೆ. ಶುಕ್ರವಾರವೂ (ಜನವರಿ 06) ಕೂಡ ಉಳಿದ ಹಣದ ಪೈಕಿ 15 ಸಾವಿರ ಹಣವನ್ನು ಅಂಕೋಲಾ ಬಳಿ ಖಾಸಗಿ ಹೊಟೇಲ್ ಒಂದರಲ್ಲಿ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ದಾಳಿ ನಡೆಸಿದೆ.
ಕೋಟಿ ಕೋಟಿ ತೆರಿಗೆ ಬಾಕಿ ಉಳಿಸಿಕೊಂಡ ಕಾರವಾರ ಸರ್ಕಾರಿ ಕಚೇರಿಗಳು
ಡಿವೈಎಸ್ಪಿ ರಾಜು ನೇತೃತ್ವದಲ್ಲಿ ದಾಳಿ
ದಾಳಿ ನಡೆಸಿದ ಡಿ.ವೈ.ಎಸ್.ಪಿ ರಾಜು ನೇತೃತ್ವದ ತಂಡ ಆರೋಪಿಯನ್ನು ನಗದು ಸಹಿತ ವಶಕ್ಕೆ ಪಡೆದಿದೆ. ಬಳಿಕ ಹೊಟೇಲ್ನಿಂದ ಅವರನ್ನು ತಹಶೀಲ್ದಾರ್ ಕಾರ್ಯಾಲಯದ ಮೇಲ್ಮಹಡಿಯಲ್ಲಿರುವ ಭೂದಾಖಲೆಗಳ ಕಛೇರಿಗೆ ಕರೆತಂದು ವಿಚಾರಣೆ ಮುಂದುವರೆಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೆ ಪುಟ್ಟುಸ್ವಾಮಿ ಪದೋನ್ನತಿ ಹೊಂದಿ ಅಂಕೋಲಾಕ್ಕೆ ವರ್ಗಾವಣೆಗೊಂಡಿದ್ದರು ಎಂದು ತಿಳಿದುಬಂದಿದೆ.
ಬಳ್ಳಾರಿಯಲ್ಲೂ ಲೋಕಾಯುಕ್ತ ದಾಳಿ
ಇತ್ತೀಚೆಗಷ್ಟೇ ಬಳ್ಳಾರಿ ನಗರದ ಐದು ಜನ ಗುಟ್ಕಾ ಉದ್ಯಮಿಗಳ ಮನೆ ಮತ್ತು ಏಜೆನ್ಸಿ ಮಳಿಗೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ತೆರಿಗೆ ವಂಚನೆ ಮಾಡಿ ಕೋಟಿಗಟ್ಟಲೇ ವ್ಯವಹಾರ ಮಾಡ್ತಿದ್ದಾರೆ ಎಂಬ ಆರೋಪದ ಮೇಲೆ ಲೋಕಾಯುಕ್ತ ದಾಳಿ ನಡೆಸಿತ್ತು. ನಗರದಲ್ಲಿ ಸ್ಟಾರ್, ವಿಮಲ್, ಹೀರಾ, ಸೂಪರ್ ಸೇರಿದಂತೆ ವಿವಿಧ ಗುಟ್ಕಾ ಮಾರಾಟ ಮಾಡುತ್ತಿದ್ದ ಆರ್ಎಕೆ ಎಂಟರ್ರ್ಪ್ರೈಸಸ್, ಭರತ್ ಟ್ರೂ ವ್ಯಾಲ್ಯೂಸ್, ಚೌದ್ರಿ ಎಂಟರ್ರ್ಪ್ರೈಸಸ್, ಶ್ರೀ ಮಂಜುನಾಥ ಏಜೆನ್ಸಿ, ಲಕ್ಷ್ಮಿ ಟ್ರೇಡರ್ಸ್ ಮೇಲೆ ದಾಳಿ ನಡೆದಿತ್ತು. ಅಲ್ಲದೆ ಈ ಏಜೆನ್ಸಿಗಳ ಮಾಲೀಕರ ಮನೆ ಮತ್ತು ಕಚೇರಿ ಮೇಲೆ ಸಹ ಏಕಕಾಲದಲ್ಲಿ ದಾಳಿ ನಡೆದಿತ್ತು. ಕೊಪ್ಪಳ ಮತ್ತು ಬೆಂಗಳೂರಿನ ಲೋಕಾಯುಕ್ತ ಅಧಿಕಾರಿಗಳು ಈ ದಾಳಿಯಲ್ಲಿ ಪಾಲ್ಗೊಂಡಿದ್ದರು.