ಕಾರವಾರ- ಬೆಂಗಳೂರು ಸೂಪರ್ಫಾಸ್ಟ್ ರೈಲು ಇನ್ನು ಪಂಚಗಂಗಾ ಎಕ್ಸ್ಪ್ರೆಸ್
ಉಡುಪಿ, ಜುಲೈ 3: ಕರಾವಳಿಯ ಜೀವನಾಡಿಯಾದ ಕಾರವಾರ- ಬೆಂಗಳೂರು ವಯಾ ಪಡೀಲ್ ಬೈಪಾಸ್ ಸೂಪರ್ಫಾಸ್ಟ್ ರೈಲಿಗೆ 'ಪಂಚಗಂಗಾ ಎಕ್ಸ್ಪ್ರೆಸ್' ಎಂದು ನಾಮಕರಣ ಮಾಡಿ ರೈಲ್ವೆ ಸಚಿವಾಲಯ ಆದೇಶ ಹೊರಡಿಸಿದೆ.
ಉಡುಪಿ ಜಿಲ್ಲೆಯ ಐದು ಪ್ರಮುಖ ನದಿಗಳು ಸಂಗಮಿಸಿ ಸೃಷ್ಟಿಯಾಗುವ ಪ್ರಾಕೃತಿಕ ಅಚ್ಚರಿ 'ಪಂಚ ಗಂಗಾವಳಿ' ನದಿಯ ಹೆಸರಿನಿಂದ ಆಯ್ದ 'ಪಂಚಗಂಗಾ ಎಕ್ಸ್ಪ್ರೆಸ್' ಎಂದು ಕೇಂದ್ರ ರೈಲ್ವೆ ಸಚಿವಾಲಯ ನಾಮಕರಣ ಮಾಡಿ ಆದೇಶಿಸಿದೆ.
ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಕ್ಷೇತ್ರದ ಜನರ ಅಪೇಕ್ಷೆಯಂತೆ ಹಿಂದಿನ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿಯವರನ್ನು ಭೇಟಿಯಾಗಿ ಮನವಿ ಮಾಡಿದ್ದರು.
ಕರಾವಳಿಯ ಬಹುಮುಖ್ಯ ಪುಣ್ಯ ಕ್ಷೇತ್ರಗಳ ಮೂಲಕ ಹರಿಯುವ ಪಂಚಗಂಗಾ, ಉಡುಪಿ ಜಿಲ್ಲೆಯ ತೀರ್ಥ ಕ್ಷೇತ್ರಗಳು, ಪ್ರವಾಸೊದ್ಯಮ, ಮೀನುಗಾರಿಕೆ, ಕೃಷಿ ಹಾಗೂ ಜನಜೀವನಕ್ಕೆ ಆಧಾರವಾಗಿದೆ. ಈ ಕಾರಣದಿಂದ ನೂತನ ಬೆಂಗಳೂರು- ಕಾರವಾರ ರೈಲಿಗೆ ಪಂಚಗಂಗಾ ಎನ್ನುವ ಹೆಸರಿಡಬೇಕು ಎಂದು ಕೇಳಿಕೊಂಡಿದ್ದರು.
Recommended Video
ಜನರ ಅಪೇಕ್ಷೆಯನ್ನು ಗೌರವಿಸಿ, ಉಡುಪಿ ಜಿಲ್ಲೆಯ ಸಂಸ್ಕೃತಿಯನ್ನು ಬಿಂಬಿಸುವ "ಪಂಚಗಂಗಾ ಎಕ್ಸ್ಪ್ರೆಸ್' ಎಂಬ ಹೆಸರನ್ನು ಕರಾವಳಿಯ ಜೀವನಾಡಿಯದ ಬೆಂಗಳೂರು- ಕಾರವಾರ ರೈಲಿಗೆ ಇಟ್ಟಿರುವ ಕೇಂದ್ರ ಸರಕಾರಕ್ಕೆ ಹಾಗೂ ರೈಲ್ವೆ ಸಚಿವಾಲಯಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಕೃತಜ್ಞತೆ ಸಲ್ಲಿಸಿದ್ದಾರೆ.