ಭಟ್ಕಳ; ಉರ್ದು ನಾಮಫಲಕ ವಿವಾದಕ್ಕೆ ಜಿಲ್ಲಾಡಳಿತದ ತೆರೆ
ಕಾರವಾರ, ಜೂನ್ 30: ಭಟ್ಕಳ ಪುರಸಭೆಗೆ ಉರ್ದು ನಾಮಫಲಕ ಅಳವಡಿಸಿದ್ದರಿಂದ ಕಳೆದ ಕೆಲದಿನಗಳಿಂದ ಎದ್ದಿದ್ದ ಭಾಷಾ ವಿವಾದಕ್ಕೆ ಗುರುವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೆರೆಬಿದ್ದಿದೆ. ಸಂಬಂಧಪಟ್ಟವರ ವಾದ ವಿವಾದ ಆಲಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸರ್ಕಾರಿ ಕಚೇರಿಗಳಿಗೆ ಕನ್ನಡ, ಇಂಗ್ಲಿಶ್ ಹೊರತುಪಡಿಸಿ ಬೇರಾವುದೇ ಭಾಷೆ ಬಳಸದಂತೆ ಸೂಚಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಭಟ್ಕಳ ಪುರಸಭೆ ಕಟ್ಟಡಕ್ಕೆ ಹೊಸದಾಗಿ ಸುಣ್ಣಬಣ್ಣ ಬಳಿದು ಬಳಿಕ ಕಟ್ಟಡದ ಮುಂಭಾಗದಲ್ಲಿ ಪುರಸಭಾ ಕಚೇರಿ ಭಟ್ಕಳ ಎಂದು ಕನ್ನಡ, ಇಂಗ್ಲಿಷ್ ಜೊತೆಗೆ ಉರ್ದುವಿನಲ್ಲೂ ನಾಮಫಲಕ ಅಳವಡಿಸಲಾಗಿತ್ತು. ಆದರೆ ಇದಕ್ಕೆ ಸಾರ್ವಜನಿಕರು, ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಕೂಡಲೇ ಉರ್ದು ನಾಮಫಲಕ ತೆರವು ಮಾಡುವಂತೆ ಪುರಸಭೆಯೆದುರು ಪ್ರತಿಭಟನೆ ಮಾಡಲಾಗಿತ್ತು. ಇದರಿಂದ ಭಟ್ಕಳದಲ್ಲಿ ಬೂದಿ ಮುಚ್ಚಿದ ಕೆಂಡದಂತಾಗಿತ್ತು.
ಕಾರವಾರದಲ್ಲಿ ಮರಾಠಿ ಭಾಷೆಯಲ್ಲಿ ವಾರ್ಡ್ಗಳ ನಾಮಫಲಕ; ಕನ್ನಡಪರ ಸಂಘಟನೆಗಳ ಆಕ್ರೋಶ
ಅಧಿಕಾರಿಗಳು ಕನ್ನಡ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಅದನ್ನು ಅಳಿಸಲು ನಿರ್ಧರಿಸಿದ್ದರು. ಆಗ ವಿವಾದ ಭುಗಿಲೆದ್ದು, ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದರು. ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ನಾವು ಹಾಗೆ ಮಾಡಿದ್ದೇವೆ. ನಂತರ ಭಾರತೀಯ ಭಾಷೆಯಾದ ಉರ್ದು ಬೋರ್ಡ್ ಕೂಡ ಹಾಕಿದ್ದೇವೆ. ಇದು ಶತಮಾನಗಳಿಂದ ಬಳಕೆಯಲ್ಲಿದೆ. ಅದಕ್ಕೆ ಮಲತಾಯಿ ಧೋರಣೆ ಏಕೆ ಎಂದು ಪ್ರಶ್ನಿಸಿದ್ದರು. ಗುರುವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಸೇರಿ ಭಾಷಾ ಸಮಸ್ಯೆಗೆ ಪರಿಹರಿಸಲಾಗಿದೆ.
ಕಾರವಾರದಲ್ಲಿ ಹಿಂದಿ ನಾಮಫಲಕಕ್ಕೆ ಮಸಿ ಬಳಿದ ಕರವೇ
ಕನ್ನಡ- ಇಂಗ್ಲಿಷ್ ಬಿಟ್ಟು ಬೇರೆ ಅವಕಾಶಗೆ ಅವಕಾಶವಿಲ್ಲ
ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ನಾ ಪೆನ್ನೇಕರ್ ಗುರುವಾರ ಬೆಳ್ಳಂಬೆಳಿಗ್ಗೆ ಭಟ್ಕಳಕ್ಕೆ ತೆರಳಿ ಸಂಬಂಧಪಟ್ಟವರೊಂದಿಗೆ ಸಭೆ ನಡೆಸಿದರು. ಸಾಕಷ್ಟು ಚರ್ಚೆ, ಪರ- ವಿರೋಧಗಳನ್ನು ಆಲಿಸಿದ ಜಿಲ್ಲಾಧಿಕಾರಿ ಅಂತಿಮವಾಗಿ ಪುರಸಭೆಗೆ ಆದೇಶವೊಂದನ್ನು ನೀಡಿದ್ದಾರೆ. ಕನ್ನಡ- ಇಂಗ್ಲಿಷ್ ಹೊರತುಪಡಿಸಿ ಬೇರೆ ಯಾವ ಭಾಷೆಗಳಲ್ಲೂ ನಾಮಫಲಕಗಳನ್ನು ಅಳವಡಿಸುವಂತಿಲ್ಲ. ಹಾಗೇನಾದರೂ ಅವಶ್ಯವಿದ್ದಲ್ಲಿ ಸರಕಾರಕ್ಕೆ ಪ್ರಸ್ತಾವ ಕಳುಹಿಸಿ, ಅಲ್ಲಿಂದ ಅಭಿಪ್ರಾಯ ಪಡೆದು ಅಳವಡಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಪೊಲೀಸ್ ಬಂದೋಬಸ್ತ್ನಲ್ಲಿ ಬೋರ್ಡ್ ತೆರವು
ಇನ್ನು ಈ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಪುರಸಭೆಗೆ ಅಳವಡಿಸಲಾಗಿದ್ದ ಉರ್ದು ನಾಮಫಲಕವನ್ನು ತೆರವು ಮಾಡಲಾಗಿದೆ. ಸದ್ಯ ಕನ್ನಡ ಹಾಗೂ ಇಂಗ್ಲಿಷ್ ಬರಹಗಳನ್ನು ಮಾತ್ರ ಉಳಿಸಲಾಗಿದೆ. ಇನ್ನು ಈ ಬಗ್ಗೆ ಸಭೆಯ ಬಳಿಕ ಪ್ರತಿಕ್ರಿಯೆ ನೀಡಿರುವ ಪುರಸಭೆಯ ಅಧ್ಯಕ್ಷ ಫರ್ವೇಜ್ ಕಾಶಿಂಜಿ, ಜಿಲ್ಲಾಧಿಕಾರಿಯವರ ಆದೇಶಕ್ಕೆ ಒಪ್ಪಿಗೆ ಸೂಚಿಸುತ್ತೆವೆ. ಅಲ್ಲದೇ ಈ ಬಗ್ಗೆ ಇಂದು ಸಂಜೆ ತುರ್ತು ಸಾಮಾನ್ಯ ಸಭೆ ನಡೆಸಿ ಚರ್ಚಿಸಲಾಗುವುದು ಅಲ್ಲಿ ಏನು ತಿರ್ಮಾನ ಆಗುವುದೋ ಹಾಗೆ ಮುಂದುವರಿಯಲಾಗುವುದು ಎಂದು ತಿಳಿಸಿದ್ದಾರೆ.
ಉರ್ದು ಬೋರ್ಡ್ ತೆಗೆಸಿದ್ದಕ್ಕೆ ಅಸಮಾಧಾನ
ಸದ್ಯ ಈವರೆಗೆ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಭಟ್ಕಳದಲ್ಲಿ ಕಾನೂನು ಸುವ್ಯವಸ್ಥೆ ಕಾಯ್ದುಕೊಂಡು ಭಾಷಾ ವಿವಾದಕ್ಕೆ ಜಿಲ್ಲಾಡಳಿತ ತೆರೆ ಎಳೆದಿದೆ. ಆದರೂ ಮತ್ತೊಂದು ಕಡೆ ಈ ವಿವಾದ ಇಲ್ಲಿ ಬೂದಿಮುಚ್ಚಿದ ಕೆಂಡದಂತೆ ಕಾಣಿಸುತ್ತಿದೆ. ಹೀಗಾಗಿ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ. ಉರ್ದು ಬೋರ್ಡ್ ತೆಗೆಯಿಸಿದ್ದಕ್ಕೆ ಅಸಮಾಧಾನಗೊಂಡಿರುವ ಮುಸ್ಲಿಮರು ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡುತ್ತಿದ್ದು, ಪುರಸಭೆಯ ತುರ್ತು ಸಾಮಾನ್ಯ ಸಭೆಯ ಬಳಿಕ ಮುಂದೇನಾಗಲಿದೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಎರಡು ದಿನಗಳ ಹಿಂದೆ ಪ್ರತಿಭಟನೆ
ಉರ್ದುವಿನಲ್ಲಿ ನಾಮಫಲಕ ಹಾಕಿರುವುದನ್ನು ವಿರೋಧಿಸಿ ಎರಡು ದಿನಗಳ ಹಿಂದೆ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಕಚೇರಿಗೆ ನುಗ್ಗಲು ಪ್ರಯತ್ನಿಸಿದ್ದರು. ಸ್ಥಳೀಯ ಭಾಷೆಯಲ್ಲಿ ನಾಮಫಲಕಕ್ಕೆ ಎಲ್ಲಿಯೂ ಅವಕಾಶವಿಲ್ಲ. ರಾಜ್ಯದಾದ್ಯಂತ ನಾಮಫಲಕಗಳನ್ನು ಕನ್ನಡ ಇಂಗ್ಲಿಷ್ ಮತ್ತು ಹಿಂದಿ ಈ ಮೂರು ಭಾಷೆಗಳಿಗೆ ಆದ್ಯತೆ ಬಿಟ್ಟು ಬೇರೆ ಯಾವುದೇ ಭಾಷೆಗಳಿಗೆ ಅವಕಾಶ ನೀಡಲಾಗುವುದಿಲ್ಲ. ಈ ನಡುವೆ ಪ್ರಾದೇಶಿಕ ಭಾಷೆಗೆ ತಕ್ಕಂತೆ ನಾಮಫಲಕಗಳನ್ನು ಅಳವಡಿಸಿಕೊಂಡು ಹೋದರೆ, ಕೊಂಕಣಿ, ಮರಾಠಿ, ಉರ್ದು ಹೀಗೆ ಹತ್ತು ಹಲವು ಬಾಷೆಗಳಿಗೆ ಆದ್ಯತೆ ನೀಡಬೇಕಾಗುತ್ತದೆ.
ಅಲ್ಲದೆ ಇದನ್ನು ನೋಡಿ ಪ್ರತಿಯೊಂದು ಬೇರೆ ಬೇರೆ ಭಾಷೆಯವರು ಪಟ್ಟು ಹಿಡಿದು ತಾವು ಮಾತನಾಡುವ ಭಾಷೆಯಲ್ಲಿ ನಾಮಫಲಕಗಳಿಗೆ ಬೇಡಿಕೆಯಿಡುತ್ತಾರೆ. ಆಗ ಕರ್ನಾಟಕದ ಕನ್ನಡಕ್ಕೆ ಭಾಷೆಗೆ ಬೆಲೆ ಇಲ್ಲದಂತಾಗುತ್ತದೆ ಹೋರಾಟಗಾರರು ಎಂದು ಅಸಮಾಧಾನ ಪಡಿಸಿದ್ದರು.