ಗುಜರಾತ್ ಕೇಶುಭಾಯಿ ಪಟೇಲ್ ರೀತಿ ಕರ್ನಾಟಕ ಸಿಎಂ ಪಟ್ಟದಿಂದ ಯಡಿಯೂರಪ್ಪ ಔಟ್!
ಬೆಂಗಳೂರು, ಜು. 20: ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಸುವ ಬಿರುಸಿನ ಚಟುವಟಿಕೆ ನಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಅಡಿಯೋ ಬಾಂಬ್ ಸ್ಫೋಟಗೊಂಡ ಬಳಿಕ ಯಡಿಯೂರಪ್ಪ ನಿದ್ದೆ ಮಾಡುತ್ತಿಲ್ಲ. ಕಟೀಲ್ ಕೇಂದ್ರ ಟೀಮ್ನ ಮರ್ಮದ ನಡುವೆ ಇದೀಗ ಹೊಸ ವಿಚಾರ ಗರಿಗೆದರಿದೆ. ಗುಜರಾತ್ನಲ್ಲಿ ಪ್ರಭಾವಿ ಸಿಎಂ ಎನಿಸಿಕೊಂಡಿದ್ದ ಕೇಶವಬಾಯಿ ಪಾಟೀಲ್ ಅವರನ್ನು ಇಳಿಸಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾದ ಮಾದರಿಯಲ್ಲಿಯೇ ರಾಜ್ಯದಲ್ಲೂ ಯಡಿಯೂರಪ್ಪ ಅವರನ್ನು ಕೆಳಗೆ ಇಳಿಸಿ ಪಕ್ಷದ ನಿಷ್ಠಾವಂತರಿಗೆ ಸಿಎಂ ಪಟ್ಟ ಕಟ್ಟಲಾಗುತ್ತಿದೆ ಎಂಬ ಮಾತು ಬಿಜೆಪಿ ಪಾಳಯಲ್ಲಿ ಚರ್ಚೆ ಶುರುವಾಗಿದೆ. ಆ ಲೆಕ್ಕಾಚಾರದಲ್ಲಿ ನೋಡಿದ್ರೆ ಆರ್ಎಸ್ಎಸ್ ನಿಷ್ಠಾವಂತ ನಾಯಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮೋದಿ ರೀತಿಯಲ್ಲಿ ಕರ್ನಾಟಕ ಸಿಎಂ ಆಗಲಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ.
Recommended Video
2001ರಲ್ಲಿ ಕೇಶುಭಾಯಿ ಪಟೇಲ್ ಗುಜರಾತ್ ಸಿಎಂ ಆಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಕೇಶುಭಾಯಿ ಪಟೇಲ್ ಆಡಳಿತ ಅವಧಿಯಲ್ಲಿ ನಡೆದ ಸಂಸತ್ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲನ್ನಪ್ಪಿತ್ತು. ಇದೇ ಸಮಯದಲ್ಲಿ ಭ್ರಷ್ಟಾಚಾರ, ಅದಕ್ಷ ಆಡಳಿತ ಮಾತು ಕೇಳಿ ಬಂದಿತ್ತು. 2001 ರಲ್ಲಿ ಭುಜ್ನಲ್ಲಿ ಸಂಭವಿಸಿದ ಭೀಕರ ಭೂಕಂಪ ನಿರ್ವಹಣೆ ಮಾಡದೇ ವಿಪುಲವಾಗಿತ್ತು. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸೋಲುವ ಆತಂಕ ಎದುರಾಗಿತ್ತು. ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದ ನರೇಂದ್ರ ಮೋದಿ. ಕೇಶುಭಾಯಿ ಪಟೇಲ್ ಆಡಳಿತದಲ್ಲಿ ಉಪ ಮುಖ್ಯಮಂತ್ರಿ ಸ್ಥಾನವನ್ನು ನಿರಾಕರಿಸಿದ್ದರು. ಕೇಂದ್ರ ಬಿಜೆಪಿ ನಾಯಕರು ಸಿಎಂನ್ನು ಬದಲಾವಣೆ ಮಾಡುವ ತೀರ್ಮಾನ ತೆಗೆದುಕೊಂಡಿದ್ದರು. ಅದೇ ಸಮಯದಲ್ಲಿ ನರೇಂದ್ರ ಮೋದಿ ಅವರನ್ನು ಸಿಎಂಯನ್ನಾಗಿ ನೇಮಿಸಲಾಯಿತು. ಕೇಂದ್ರದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಅರ್ಎಸ್ಎಸ್ ಹಿನ್ನೆಲೆಯುಳ್ಳ ಮೋದಿ ರಾತ್ರೋ ರಾತ್ರಿ ಗುಜರಾತ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡರು. ವಿಶೇಷ ಅಂದರೆ ರಾಜ್ಯದಲ್ಲಿ ಅದೇ ಸ್ಥಿತಿ ಮರುಕಳಿಸುವ ಮುನ್ಸೂಚನೆ ಕಾಣುತ್ತಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೇಲ್ನೋಟಕ್ಕೆ ಲವಲವಿಕೆಯಿಂದ ಓಡಾಟ ಮಾಡುತ್ತಿದ್ದಾರೆ. ವಾಸ್ತವದಲ್ಲಿ ಅವರು ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ರಾಜ್ಯದಲ್ಲಿ ಕೊರೊನಾ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾದ ಆರೋಪಗಳಿವೆ. ಯಡಿಯೂರಪ್ಪ ಕುಟುಂಬ ಸದಸ್ಯರ ಹಸ್ತಕ್ಷೇಪದಿಂದ ಆ ಪಕ್ಷದ ಶಾಸಕರೇ ಬೇಸತ್ತು ದಿನಕ್ಕೊಂದು ಬಾಂಬ್ ಸಿಡಿಸುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಡಿಯೋ ಬಾಂಬ್ ಕೋಲಾಹಲ ಎಬ್ಬಿಸಿದೆ. ಪ್ರತಿ ದಿನವೂ ಬಸವನಗೌಡ ಪಾಟೀಲ್ ಯತ್ನಾಳ್ ನಿರಂತರ ಹೇಳಿಕೆ, ಸಚಿವ ಸ್ಥಾನ ತ್ಯಾಗ ಮಾಡಿರುವ ರಮೇಶ್ ಜಾರಕಿಹೊಳಿ, ಹೀಗೆ ಸರದಿ ಸಾಲಲ್ಲಿ ನಿಂತಿದ್ದರೆ ಇನ್ನೂ ಕೆಲವರು ತೆರೆ ಮರೆಯಲ್ಲಿ ಸಿಎಂ ಬದಲಾವಣೆ ಕಸರತ್ತು ನಡೆಸುತ್ತಿದ್ದಾರೆ.
ಇದನ್ನು ಅವಲೋಕಿಸಿದರೆ ಅರ್ಎಸ್ಎಸ್ ಹಿನ್ನೆಲೆಯುಳ್ಳ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಸಿಎಂರನ್ನಾಗಿ ಕೇಂದ್ರ ಬಿಜೆಪಿ ವರಿಷ್ಠರು ಘೋಷಣೆ ಮಾಡಿದರೂ ಅಚ್ಚರಿ ಪಡಬೇಕಿಲ್ಲ. ಅರ್ಎಸ್ಎಸ್ ಹಿನ್ನೆಲೆಯುಳ್ಳವರು ಬಿ.ಎಲ್. ಸಂತೋಷ್. ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಯಡಿಯೂರಪ್ಪ ಆಡಳಿತ ಮುಂದುವರೆದರೆ ಮುಂದಿನ ಚುನಾವಣೆಯಲ್ಲಿ ಪಕ್ಷ ನೆಲ ಕಚ್ಚುವುದು ಗ್ಯಾರೆಂಟಿ. ಇನ್ನು ಕೊರೊನಾ ನಿರ್ವಹಣೆಯಲ್ಲಿ ನಡೆದ ಭ್ರಷ್ಟಾಚಾರ ಕೇಂದ್ರ ವರಿಷ್ಠರನ್ನು ನಿದ್ದೆ ಗೆಡಿಸಿದೆ. ಹೀಗಾಗಿ ಬಿ.ಎಲ್. ಸಂತೋಷ್ ಸಿಎಂ ಆಗುತ್ತಾರೆ ಎಂಬ ಹಳೇ ವಿಚಾರ ಬಿಜೆಪಿ ಪಾಳಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಕಟೀಲುಮಾತಿನ ಮರ್ಮ: ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಮಾತಿನ ಮರ್ಮ ನೋಡಿದರೆ ಬಿ.ಎಲ್. ಸಂತೋಷ್ಗೆ ಅದೃಷ್ಟ ಒಲಿದು ಬಂದರೂ ಅಚ್ಚರಿ ಪಡಬೇಕಿಲ್ಲ. ಕಟೀಲು ಹೇಳುವ ಪ್ರಕಾರ ಕೇಂದ್ರದಲ್ಲಿ ಇರುವ ನಾಯಕರು ಸಿಎಂ ಆಗುವರು ಎಂದರೆ ಮೊದಲ ಸಾಲಿನಲ್ಲಿ ಕೇಳಿ ಬರುತ್ತಿರುವುದು ಪ್ರಹ್ಲಾದ್ ಜೋಷಿ. ಆನಂತರ ಬಿ.ಎಲ್. ಸಂತೋಷ್ ಇಲ್ಲವೇ ಸಿ.ಟಿ. ರವಿ. ಪಕ್ಷ ಸಿದ್ದಾಂತ, ಪಕ್ಷ ಸಂಘಟನೆಗೆ ಒತ್ತು ನೀಡುವ ನಿಟ್ಟಿನಲ್ಲಿ ದಶಕಗಳಿಂದ ಸೇವೆ ಮಾಡಿರುವ ಬಿ.ಎಲ್. ಸಂತೋಷ್ಗೆ ಸಿಎಂ ಪಟ್ಟ ಒಲಿದು ಬಂದರೂ ಅಚ್ಚರಿಪಡಬೇಕಿಲ್ಲ. ಬೇರೆ ಯಾರನ್ನೇ ಮಾಡಿದರು ಪಕ್ಷದಲ್ಲಿ ಆಂತರಿಕ ಕಚ್ಚಾಟ ಸಾಮಾನ್ಯ. ಅರ್ಎಸ್ಎಸ್ ಹಿನ್ನೆಲೆಯುಳ್ಳ ಸಂತೋಷ್ ಅವರನ್ನು ಮಾಡಿದರೆ ಆಂತರಿಕ ಭಿನ್ನಮತ ಶಮನಗೊಳಿಸಲು ಅವಕಾಶ ಎಂಬುದು ಕೇಂದ್ರ ಲೆಕ್ಕಾಚಾರ ಇರಬಹುದು.