ಡಿಕೆಶಿ ಪದಗ್ರಹಣ ಕಾರ್ಯಕ್ರಮದ ಹಿಂದೆ ರಾಜಕೀಯ ಷಡ್ಯಂತ್ರ: ಸಿದ್ದರಾಮಯ್ಯ
ಬೆಂಗಳೂರು, ಜೂ. 10: ಕೆಪಿಸಿಸಿ ಅಧ್ಯಕ್ಷ ಗಾದಿಗೆ ಏರಲು ಹಲವು ಆಕಾಂಕ್ಷಿಗಳು ಇನ್ನಿಲ್ಲದ ಪ್ರಯತ್ನ ನಡೆಸಿದ್ದರು. ಮೂಲ ಹಾಗೂ ವಲಸೆ ಕಾಂಗ್ರೆಸ್ ಎಂದು ಪ್ರತ್ಯೇಕ ಪ್ರಯತ್ನಗಳು ನಡೆಯುತ್ತಿರುವುದು ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೂ ಬಂದಿತ್ತು. ಕರ್ನಾಟಕದಲ್ಲಿ ನಾಯಕರನ್ನು ಒಗ್ಗೂಡಿಸುವ ಅನಿವಾರ್ಯತೆ ಕೂಡ ಕಾಂಗ್ರೆಸ್ ಪಕ್ಷಕ್ಕಿತ್ತು. ಹೀಗಾಗಿ ಒಮ್ಮತ ಮೂಡಿಸಲು ಹೈಕಮಾಂಡ್ ಆಪ್ತವಲಯದ ಗುಲಾಂ ನಬಿ ಆಜಾದ್ ಅವರು ಹಲವು ಬಾರಿ ಬೆಂಗಳೂರಿಗೆ ಭೇಟಿ ಕೊಟ್ಟಿದ್ದರು. ಕಾಂಗ್ರೆಸ್ ಪಕ್ಷದ ಪ್ರಮುಖ 9 ನಾಯಕರೊಂದಿಗೆ ಹಲವು ಸಭೆಗಳನ್ನು ನಡೆಸಿದ್ದರು.
Recommended Video
ಕೊರೊನಾ ವೈರಸ್ ಲಾಕ್ಡೌನ್ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ಡಿ.ಕೆ. ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಕೊರೊನಾ ವೈರಸ್ ತಂದಿದ್ದ ಆತಂಕದ ಸ್ಥಿತಿಯಲ್ಲಿ ಡಿಕೆಶಿ ರಾಜ್ಯ ಕಾಂಗ್ರೆಸ್ ಚುಕ್ಕಾಣಿ ಹಿಡಿದಿದ್ದರು. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಕೈಗೊಳ್ಳುತ್ತಿದ್ದ ನಿರ್ಧಾರಗಳ ಬಗ್ಗೆ ಮಾತನಾಡುವಂತಿರಲಿಲ್ಲ. ಈ ಮೊದಲು ಇಂತಹ ಸ್ಥಿತಿಯನ್ನು ನಿರ್ವಹಿಸಿದ್ದ ಅನುಭವ ಯಾರಿಗೂ ಅರಿವಿರಲಿಲ್ಲ. ಇದೀಗ ಪರಿಸ್ಥಿತಿ ಬದಲಾಗಿದೆ. ಒಂದೊಂದಾಗಿ ಲಾಕ್ಡೌನ್ ನಿಯಮಗಳು ಬದಲಾಗಿ ಅನ್ಲಾಕ್ ನಿಯಮಗಳು ಜಾರಿಗೆ ಬರುತ್ತಿವೆ. ಇದೇ ಸಂದರ್ಭದಲ್ಲಿ ಡಿಕೆಶಿ ಪದಗ್ರಹಣ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ, ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಡಿ.ಕೆ.ಶಿವಕುಮಾರ್ ಪದಗ್ರಹಣಕ್ಕೆ ಮೂರನೇ ಬಾರಿಯೂ ಎದುರಾದ ವಿಘ್ನ
ಮೂರನೇ ಬಾರಿ ಮುಂದಕ್ಕೆ!
ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅವರು ಪದಗ್ರಹಣ ಕಾರ್ಯಕ್ರಮ ಮೂರನೇ ಬಾರಿ ಮುಂದೂಡಲಾಗಿದೆ. ಮೊದಲ ಎರಡು ಸಲ ರಾಜ್ಯದಲ್ಲಿ ಲಾಕ್ಡೌನ್ ಮಾರ್ಗಸೂಚಿ ಅನ್ವಯ ರಾಜ್ಯ ಬಿಜೆಪಿ ಸರ್ಕಾರ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟಿರಲಿಲ್ಲ. ಆದರೆ ಈ ಬಾರಿ ಪದಗ್ರಹಣಕ್ಕೆ ಡಿಕೆಶಿ ಹೊಸ ಯೋಜನೆ ರೂಪಿಸಿಕೊಂಡಿದ್ದರು.
ಕಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಜೂನ್ 14 ರಂದು ಪದಗ್ರಹಣ ಕಾರ್ಯಕ್ರಮಕ್ಕೆ ಅನುಮತಿ ಕೊಡುವಂತೆ ಪತ್ರ ಬರೆದಿದ್ದರು. ಇದಕ್ಕೂ ಮೊದಲು ಮೇ 24 ಹಾಗೂ ಜೂನ್ 7 ರಂದು ಪದಗ್ರಹಣ ಕಾರ್ಯಕ್ರಮಕ್ಕೆ ಅನುಮತಿ ಕೊಡುವಂತೆ ಬರೆದಿದ್ದ ಪತ್ರಕ್ಕೂ ಸರ್ಕಾರ ನಿರಾಕರಿಸಿತ್ತು. ಈ ಬಾರಿ ಲಾಕ್ಡೌನ್ ಮಾರ್ಗಸೂಚಿ ಉಲ್ಲಂಘನೆ ಆಗದಂತೆ ಡಿಜಿಟಲ್ ತಂತ್ರಜ್ಞಾನಕ್ಕೆ ಮೊರೆ ಹೋಗಿದ್ದರು. ಆದರೂ ಜೂನ್ 14 ರಂದು ನಡೆಯಬೇಕಾಗಿದ್ದ ಪದಗ್ರಹಣ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ಕೊಟ್ಟಿಲ್ಲ.
ಡಿಕೆಶಿ ಪದಗ್ರಹಣಕ್ಕೆ ಮತ್ತೊಂದು ಮಹೂರ್ತ: ಈ ಬಾರಿಯಾದರೂ ಸರಕಾರ ಅನುಮತಿ ನೀಡುತ್ತಾ?
ಸಿದ್ದರಾಮಯ್ಯ ಕಿಡಿ!
ಪದಗ್ರಹಣ ಕಾರ್ಯಕ್ರಮದ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ ಎಂದು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಕೆಪಿಸಿಸಿಯ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಸಮಾರಂಭಕ್ಕೆ ಮತ್ತೆ ಅನುಮತಿ ನಿರಾಕರಿಸಿರುವ ಸರ್ಕಾರದ ಕ್ರಮವನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಸರ್ಕಾರದ ಈ ನಿರ್ದಾರ ರಾಜಕೀಯ ಪ್ರೇರಿತ. ಇದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪದಗ್ರಹಣ ಸಮಾರಂಭಕ್ಕೆ ಎರಡನೇ ಬಾರಿ ಸರ್ಕಾರ ಅನುಮತಿ ನಿರಾಕರಿಸಿದೆ. ಇದು ಪ್ರತಿಪಕ್ಷಗಳನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ಸರ್ಕಾರ ರಾಜಕೀಯ ದುರುದ್ದೇಶದಿಂದ ಈ ತೀರ್ಮಾನ ಕೈಗೊಂಡಿದೆ ಎಂದಿದ್ದಾರೆ.
ಅಮಿತ್ ಶಾ ಅವರಿಗೊಂದು ನಿಯಮ?
ದೇಶದ ಗೃಹ ಸಚಿವ ಅಮಿತ್ ಶಾ ಅವರು ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ವರ್ಚುವಲ್ ರ್ಯಾಲಿ ನಡೆಸುವಾಗ ಅನ್ವಯವಾಗದ ನಿಯಮಗಳು ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಪದಗ್ರಹಣ ಸಮಾರಂಭಕ್ಕೆ ಹೇಗೆ ಅನ್ವಯ ಆಗುತ್ತವೆ ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ. ಜೊತೆಗೆ ಸರ್ಕಾರ ಕೂಡಲೇ ಪದಗ್ರಹಣ ಸಮಾರಂಭಕ್ಕೆ ಅನುಮತಿ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಸರ್ಕಾರ ಏನೇ ದಮನಕಾರಿ ಪ್ರವೃತ್ತಿ ತೋರಿಸಿದರೂ ನಾವು ಕಾರ್ಯಕ್ರಮ ಮಾಡುತ್ತೇವೆ. ನಾವು ಕಾನೂನು ಗೌರವಿಸುವವರೇ ಹೊರತು ಕಾನೂನು ಭಂಗ ಮಾಡುವವರಲ್ಲ. ಕಾನೂನಿನ ಅಡಿಯಲ್ಲೇ ನಾವು ಕಾರ್ಯಕ್ರಮ ಮಾಡಲಿದ್ದೇವೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
'ಬಾಡಿ ಲಾಂಗ್ವೇಜ್ ನೋಡಿದ್ರೆ ಗೊತ್ತಾಗುತ್ತೆ ಯಾರು ಮೆಂಟಲ್ ಅಂತಾ'
ರಾಜಕೀಯ ಪ್ರೇರಿತ: ಖರ್ಗೆ
ಡಿ.ಕೆ. ಶಿವಕುಮಾರ್ ಪದಗ್ರಹಣ ಕಾರ್ಯಕ್ರಮದಲ್ಲಿ ಲಾಕ್ಡೌನ್ ಮಾರ್ಗಸೂಚಿಗಳನ್ನ ಕಡ್ಡಾಯವಾಗಿ ಪಾಲಿಸ್ತೇವೆ ಎಂದು ಮಾಜಿ ಸಂಸದೀಯ ನಾಯಕ ಮಲ್ಲಿಕರ್ಜುನ್ ಖರ್ಗೆ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿರುವ ಅವರು, ಪದಗ್ರಹಣ ಕಾರ್ಯಕ್ರಮ ಮಾಡುತ್ತೇವೆ ಅಂದರೂ ಅನುಮತಿ ಕೊಟ್ಟಿಲ್ಲ. ಒಬ್ಬರಿಗೊಂದು, ಮತ್ತೊಬ್ಬರಿಗೊಂದು ನ್ಯಾಯವೇ? ಪಶ್ಚಿಮಬಂಗಾಳದಲ್ಲಿ ಅಮಿತ್ ಶಾ ಕಾರ್ಯಕ್ರಮ ಮಾಡಬಹುದು. ಆದ್ರೆ ನಾವು ಮಾಡುವಂತಿಲ್ಲ ಅಂದ್ರೆ ಹೇಗೆ? ಇದು ಪ್ರಜಾಪ್ರಭುತ್ವದ ವಿರೋಧಿ ಧೋರಣೆ ಎಂದಿದ್ದಾರೆ.
ಬಿಜೆಪಿ ನಾಯಕರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲ. ನಂಬಿಕೆ ಇದ್ದರೆ ಪದಗ್ರಹಣಕ್ಕೆ ಅವಕಾಶ ಕೊಡಬೇಕು. ಅವಕಾಶ ನಿರಾಕರಣೆ ನೋಡಿದ್ರೆ ಇದು ರಾಜಕೀಯ ಪ್ರೇರಿತ ಎನ್ನಿಸುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಕೊಟ್ಟಿದ್ದಾರೆ.