ಡಿ.ಕೆ.ಶಿವಕುಮಾರ್ ಪದಗ್ರಹಣಕ್ಕೆ ಮೂರನೇ ಬಾರಿಯೂ ಎದುರಾದ ವಿಘ್ನ
ಬೆಂಗಳೂರು, ಜೂನ್ 9: ನಿಯೋಜಿತರಾದವರು, ಅಧಿಕೃತವಾಗಿ ಕೆಪಿಸಿಸಿ ಅಧ್ಯಕ್ಷರಾಗಲು ಡಿ.ಕೆ.ಶಿವಕುಮಾರ್ ಅವರಿಗೆ ಸಮಯವೇ ಕೂಡಿ ಬರುತ್ತಿಲ್ಲ. ಮತ್ತೆ, ಅವರ ಪದಗ್ರಹಣಕ್ಕೆ ಅನುಮತಿ ನಿರಾಕರಿಸಲಾಗಿದೆ.
Recommended Video
ಇದೇ ಬರುವ ಭಾನುವಾರ, ಜೂನ್ 14ರಂದು ಪದಗ್ರಹಣಕ್ಕೆ ಅನುಮತಿ ಕೋರಿ ಡಿಕೆಶಿ, ಸರಕಾರ, ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದಿದ್ದರು. ಆದರೆ, ಜೂನ್ 30ರವರೆಗೆ ಲಾಕ್ ಡೌನ್ ಇದೆ ಎನ್ನುವ ಕಾರಣಕ್ಕಾಗಿ ಸರಕಾರ ಅನುಮತಿಯನ್ನು ನೀಡಿಲ್ಲ.
ಕೇಂದ್ರದ ಮಾರ್ಗಸೂಚಿಯನ್ನು ಸರಕಾರ ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ರಾಜಕೀಯ ಕಾರ್ಯಕ್ರಮಗಳಿಗೆ ಜೂನ್ 30ರವರೆಗೆ ಕೇಂದ್ರ ಸರಕಾರ ನಿರ್ಬಂಧ ಹೇರಿದೆ. ಹಾಗಾಗಿ, ಅನುಮತಿಯನ್ನು ನೀಡಲು ಸಾಧ್ಯವಿಲ್ಲ ಎಂದು ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ವಿಭಾಗ, ಅನುಮತಿ ನಿರಾಕರಿಸಿದೆ.

ಕಂದಾಯ ಇಲಾಖೆಯ ಕಾರ್ಯದರ್ಶಿಗಳು, ಡಿಕೆಶಿಗೆ ಬರೆದ ಪತ್ರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅನುಮೋದನೆ ನೀಡಿದ್ದಾರೆ. ಇದು, ಮೂರನೇ ಬಾರಿ ಡಿಕೆಶಿ ಪದಗ್ರಹಣಕ್ಕೆ ಅನುಮತಿ ನಿರಾಕರಣೆಯಾಗಿರುವುದು.
ಮೊದಲು, ಮೇ 24ಕ್ಕೆ ಪ್ರಮಾಣವಚನ ಸ್ವೀಕರಿಸಲು ನಿರ್ಧರಿಸಿದ್ದರು. ಆದರೆ, ಭಾನುವಾರದ ಕರ್ಫ್ಯೂ ಇದ್ದಿದ್ದರಿಂದ ಇದು ರದ್ದಾಗಿತ್ತು. ಇದಾದ ನಂತರ, ಜೂನ್ ಏಳರಂದು ಪದಗ್ರಹಣ ಮಾಡಬೇಕಿತ್ತು. ಆದರೆ, ಜೂನ್ ಎಂಟರವರೆಗೆ, ರಾಜಕೀಯ ಸಭೆ ನಡೆಸಲು ಕೇಂದ್ರದ ಅನುಮತಿ ಇಲ್ಲ ಎನ್ನುವ ಕಾರಣಕ್ಕಾಗಿ ಇದು ಕ್ಯಾನ್ಸಲ್ ಆಗಿತ್ತು.
ಈಗ ಜೂನ್ ಹದಿನಾಲ್ಕರ ದಿನಕ್ಕೂ ರಾಜ್ಯ ಸರಕಾರ ಅನುಮತಿಯನ್ನು ನಿರಾಕರಿಸಿದೆ. ಕೆಪಿಸಿಸಿ ಕಚೇರಿಯಲ್ಲಿ ಸರಳ ಕಾರ್ಯಕ್ರಮದಲ್ಲಿ 150 ಜನರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಸಲು ನಿಶ್ಚಿಯಿಸಲಾಗಿತ್ತು. ಜೊತೆಗೆ, ರಾಜ್ಯದ ಪ್ರತೀ ಗ್ರಾಮ ಪಂಚಾಯತಿ, ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನೇರ ಪ್ರಸಾರ ಮಾಡಲು ನಿರ್ಧರಿಸಲಾಗಿತ್ತು.












Click it and Unblock the Notifications