ಒಕ್ಕಲಿಗರಿಂದಲೇ ಸೋತಿದ್ದರೆ ಸಂತೋಷ: ಗೌಡ್ರ ಹೇಳಿಕೆಯ ಹಿಂದೆ ಏನಿದು ಗೂಡಾರ್ಥ?
Recommended Video
ಬೆಂಗಳೂರು, ಜೂನ್ 29: ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ಆಘಾತದಿಂದ ಇನ್ನೂ ಹೊರಬರದ ಮೈತ್ರಿಪಕ್ಷದ ನಾಯಕರುಗಳು, ಆತ್ಮಾವಲೋಕನ ಸಭೆಯನ್ನು ನಡೆಸುತ್ತಲೇ ಬರುತ್ತಿದ್ದಾರೆ.
ಕಾಂಗ್ರೆಸ್ ಸೋಲಿಗೆ ಜೆಡಿಎಸ್ ಜೊತೆ ಮೈತ್ರಿ ಕಾರಣ ಎನ್ನುವ ಆರೋಪದ ಬಗ್ಗೆ ಜೆಡಿಎಸ್ ವರಿಷ್ಠ ದೇವೇಗೌಡ್ರು ಕಿಡಿಕಾರಿದ್ದು, ನಾವೇನು ನಿಮ್ಮ ಮನೆ ಬಾಗಿಲಿಗೆ ಬಂದಿದ್ವಾ ಎಂದು ಪುನರುಚ್ಚಿಸಿದ್ದಾರೆ.
ಪಕ್ಷದ ಪ್ರಧಾನ ಕಚೇರಿ ಜೆ ಪಿ ಭವನದಲ್ಲಿ ಮಾತನಾಡುತ್ತಿದ್ದ ಗೌಡ್ರು, ಎರಡೂ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳುವ ಸಮಯವಿದು. ಜೆಡಿಎಸ್ ರಾಜ್ಯಾಧ್ಯಕ್ಷರ ಹೆಸರನ್ನು ಪಕ್ಷದ ಬಹಿರಂಗ ಸಭೆಯಲ್ಲಿ ಪ್ರಕಟಿಸಿ, ಪಕ್ಷದ ಧ್ವಜವನ್ನು ಹಸ್ತಾಂತರಿಸಲಾಗುವುದು ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಮುಖ ನೋಡಲಾಗುತ್ತಿಲ್ಲ, ಬಿಜೆಪಿಯವರು ಯಾಕೆ ಹೀಗೆ: ದೇವೇಗೌಡ
ಮಲ್ಲಿಕಾರ್ಜುನ ಖರ್ಗೆ ಸೋಲಲು ಜೆಡಿಎಸ್ ಕಾರಣ ಎನ್ನುವ ಮಾತನ್ನು ಕಾಂಗ್ರೆಸ್ ಮುಖಂಡರು ಆಡಿದ್ದಾರೆ. ತುಮಕೂರಿನಲ್ಲಿ ಒಕ್ಕಲಿಗರ ಸಂಖ್ಯೆ ಹೆಚ್ಚಿದೆ, ಅವರಿಂದಲೇ ನಾನು ಸೋತಿದ್ದರೆ, ಸಂತೋಷ ಪಡುವೆ ಎಂದು ಮಾರ್ಮಿಕವಾಗಿ ಗೌಡ್ರು ಹೇಳಿದ್ದಾರೆ. ಕಾಂಗ್ರೆಸ್ ವಿರುದ್ದ ಹರಿಹಾಯ್ದ ಗೌಡ್ರು.
38ಸೀಟು ಬಂದ ನಾವು ಸಿಎಂ ಪದವಿ ಬಯಸುವುದು ಸರಿಯೇ?
37 ಸೀಟು ಬಂದ ನಾವು ಮುಖ್ಯಮಂತ್ರಿಯನ್ನು ಬಯಸುವುದು ಸರಿಯೇ? ನಾವು ಬೆಂಬಲ ನೀಡುತ್ತೇವೆ, ನಿಮ್ಮವರೇ ಮುಖ್ಯಮಂತ್ರಿಯಾಗಲಿ ಎಂದು ದೆಹಲಿಯಿಂದ ಬಂದಿದ್ದ ಗುಲಾಂನಬಿ ಆಜಾದ್ ಅವರಿಗೆ ಹೇಳಿದ್ದೆ. ಮಲ್ಲಿಕಾರ್ಜುನ ಖರ್ಗೆ, ಕೆ ಎಚ್ ಮುನಿಯಪ್ಪ ಸಿಎಂ ಆಗಲಿ ಎಂದು ನಾನೇ ಹೇಳಿದ್ದೆ. ಇಲ್ಲ, ಕುಮಾರಸ್ವಾಮಿಯೇ ಮುಖ್ಯಮಂತ್ರಿ ಆಗಬೇಕೆಂದು ಒತ್ತಾಯಿಸಿದವರು ಇದೇ ಕಾಂಗ್ರೆಸ್ ಮುಖಂಡರು - ದೇವೇಗೌಡ.
ಮಲ್ಲಿಕಾರ್ಜುನ ಖರ್ಗೆ, ಕೆ ಎಚ್ ಮುನಿಯಪ್ಪ ಸೋಲಿಗೆ ಜೆಡಿಎಸ್ ಕಾರಣ?
ಮಲ್ಲಿಕಾರ್ಜುನ ಖರ್ಗೆ, ಕೆ ಎಚ್ ಮುನಿಯಪ್ಪ ಸೋಲಿಗೆ ಜೆಡಿಎಸ್ ಕಾರಣ ಎಂದು ಹೇಳುತ್ತಾರೆ. ಕಲಬುರಗಿಯಲ್ಲಿ ಒಕ್ಕಲಿಗರ ಸಂಖ್ಯೆ ಎಷ್ಟು? ನಾವು ಹೇಗೆ ಸೋಲಿಸಲು ಸಾಧ್ಯ? ತುಮಕೂರಿನಲ್ಲಿ ಒಕ್ಕಲಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಿದ್ದಾಗ, ನನ್ನ ಸೋಲು ಒಕ್ಕಲಿಗರಿಂದಾಯಿತು ಎಂದಾದರೆ ಅದಕ್ಕೆ ಸಂತೋಷ ಪಡುತ್ತೇನೆ ಎಂದು ಗೌಡ್ರು ವ್ಯಂಗ್ಯವಾಗಿ ನುಡಿದಿದ್ದಾರೆ.
37 ಸೀಟು ತಗೊಂಡು ಸಿಎಂ ಆಗಿ ಅಂದ್ರೆ ಯಾವ ಧರ್ಮ?: ದೇವೇಗೌಡ
ಸೋಲು ಗೆಲುವು ಚುನಾವಣೆಯಲ್ಲಿ ಸಹಜ
ಸೋಲು ಗೆಲುವು ಚುನಾವಣೆಯಲ್ಲಿ ಸಹಜ. ನಾನೆಂದೂ ನನ್ನ ಸೋಲನ್ನು ಕಾಂಗ್ರೆಸ್ ಹಣೆಗೆ ಕಟ್ಟಿಲ್ಲ. ಲೋಕಸಭಾ ಚುನಾವಣೆಯಲ್ಲಿನ ಸೋಲಿನ ನಂತರ ಮೈತ್ರಿಪಕ್ಷದ ಮುಖಂಡರ ಹೇಳಿಕೆ ಮನಸ್ಸಿಗೆ ನೋವು ತಂದಿದೆ. ಜೆಡಿಎಸ್ ನವರು ಬೆನ್ನಿಗೆ ಚೂರಿ ಹಾಕಿದರು ಎನ್ನುವ ಕಾಂಗ್ರೆಸ್ ಮುಖಂಡರ ಹೇಳಿಕೆಯಿಂದ ಪ್ರತೀ ಕ್ಷಣವೂ ನೋವು ಅನುಭವಿಸುತ್ತಿದ್ದೇನೆ.
ಯಾರಿಂದ ಯಾರಿಗೆ ಸೋಲಾಯಿತು ಎನ್ನುವುದನ್ನು ಜನರು ಮಾತನಾಡಿಕೊಳ್ಳುತ್ತಿದ್ದಾರೆ
ಯಾರಿಂದ ಯಾರಿಗೆ ಸೋಲಾಯಿತು ಎನ್ನುವುದನ್ನು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ನನ್ನ ಪಕ್ಷದ ಮೇಲೆ ಗೂಬೆ ಕೂರಿಸುವ ಕಾಂಗ್ರೆಸ್ ನವರು ಅಂಬೇಡ್ಕರ್ ಅವರನ್ನು ಎರಡು ಬಾರಿ ಸೋಲಿಸಲಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿರುವ ಗೌಡ್ರು, ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದೆ, ಹಾಗಾಗಿ ಹೇಳಿಕೆ ನೀಡುವಾಗ ತೂಕವಾಗಿ ಮಾತನಾಡಬೇಕಿದೆ.
ದೇವೇಗೌಡ್ರ ಹೇಳಿಕೆ, ಹೊಸ ಚರ್ಚೆಗೆ ಕಾರಣವಾಗಿದೆ
ಎರಡು ಪಕ್ಷಗಳ ಮುಖಂಡರ ಬಹಿರಂಗ ಹೇಳಿಕೆಗಳು ತಣ್ಣಗಾಯಿತು ಎನ್ನುವಷ್ಟರಲ್ಲಿ ದೇವೇಗೌಡ್ರ ಹೇಳಿಕೆ, ಹೊಸ ಚರ್ಚೆಗೆ ಕಾರಣವಾಗಿದ್ದು, ಕುತೂಹಲವನ್ನೂ ಹುಟ್ಟುಹಾಕಿದೆ. ಗೌಡ್ರ ಈ ಹೇಳಿಕೆಗಳಿಗೆ ಕಾಂಗ್ರೆಸ್ ಮುಖಂಡರು ಯಾವರೀತಿ ಪ್ರತ್ಯುತ್ತರ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.