ಮಗನಿಗೆ ಹೆಣ್ಣು ನೋಡಲು ಹೋಗಿ, ಅಪ್ಪನೇ ಮದುವೆಯಾದಂತೆ: ಡಿ ಕೆ ಶಿವಕುಮಾರ್ ಹೀಗೆ ಹೇಳಿದ್ದು ಯಾರಿಗೆ?
ಮಂಡ್ಯ, ಏಪ್ರಿಲ್ 21: ಸಾರಾ ಮಹೇಶ್, ಪುಟ್ಟರಾಜು, ತಮ್ಮಣ್ಣ ಅವರಿಗೆ ಚಾಕಲೇಟ್ ಕೊಟ್ಟು ಕುಮಾರಸ್ವಾಮಿ ಅವರೇ ಮಂಡ್ಯಗೆ ಬಂದು ನಿಂತಿದ್ದಾರೆ. ಚೆಲುವರಾಯಸ್ವಾಮಿ ಒಂದು ಗಾದೆ ಮಾತು ಹೇಳಿದರು. ಮಗನಿಗೆ ಹೆಣ್ಣು ನೋಡಲು ಹೋಗಿ, ಅಪ್ಪನೇ ಮದುವೆಯಾದಂತೆ. ಅದೇ ರೀತಿ ಕುಮಾರಸ್ವಾಮಿ ಅವರು ಇಲ್ಲಿ ಬಂದು ನಿಂತಿದ್ದಾರೆ ಎಂದು ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ಈ ಕುರಿತು ಡಿ ಕೆ ಶಿವಕುಮಾರ್ ಮಾತನಾಡಿ, ಈಗ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂದು ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರನ್ನು ರಾಮನಗರದ ಜನ ಸಂಸದರಾಗಿ, ಶಾಸಕರಾಗಿ, ಮುಖ್ಯಮಂತ್ರಿಯಾಗಿ ಮಾಡಿದರು. ಅವರ ಪತ್ನಿಯನ್ನು ಶಾಸಕಿಯರನ್ನಾಗಿ ಮಾಡಿದರು. ನಿಮ್ಮನ್ನು ಬೆಂಬಲಿಸಿದ ಸ್ವಂತ ಜನರನ್ನೇ ನಂಬದೇ, ನಿಮ್ಮ ಪಕ್ಷದ ಚಿಹ್ನೆಯನ್ನು ಬಿಟ್ಟು, ನಿಮ್ಮ ಭಾವನನ್ನು ಬಿಜೆಪಿ ಮೂಲಕ ನಿಲ್ಲಿಸಿದ್ದೀರಿ. ನೀವು ಇಲ್ಲಿಗೆ ಬಂದು ಸ್ಪರ್ಧೆ ಮಾಡಿದ್ದೀರಿ. ಈ ಜೆಡಿಎಸ್ ಕಾರ್ಯಕರ್ತರ ಭವಿಷ್ಯ ಏನಾಗಬೇಕು? ಕುಮಾರಸ್ವಾಮಿ ಬೆಂಗಳೂರು ಗ್ರಾಮಾಂತರದಲ್ಲೇ ಅವರು ಸ್ಪರ್ಧೆ ಮಾಡಬಹುದಾಗಿತ್ತು. ಆದರೆ ಇಂದು ಮಂಡ್ಯಕ್ಕೆ ಬಂದಿದ್ದಾರೆ ಎಂದರು.

ನಾನು ಕಳೆದ 20-30 ವರ್ಷಗಳಿಂದ ಈ ಕ್ಷೇತ್ರಕ್ಕೆ ಬರುತ್ತಿದ್ದೇನೆ. ನನ್ನ ಅನುಭವದಲ್ಲಿ ಇದೇ ಅತ್ಯಂತ ದೊಡ್ಡ ಸಭೆಯಾಗಿದೆ. ಈ ಸಭೆ ಮೂಲಕ ಇಲ್ಲಿ ವೆಂಕಟರಮಣೇಗೌಡ ಅವರು ಸಂಸದರಾಗಿ ಆಯ್ಕೆಯಾಗುವ ವಿಶ್ವಾಸ ಮೂಡುತ್ತಿದೆ. ಕೆ.ಆರ್ ಪೇಟೆಯಲ್ಲಿ ಈ ಬಾರಿ ಯಾರು ತಮ್ಮ ತಮ್ಮ ಬೂತ್ ಗಳಲ್ಲಿ ಲೀಡ್ ತಂದುಕೊಡುತ್ತಾರೋ ಅವರೇ ನಮ್ಮ ಮುಂದಿನ ನಾಯಕರು. ಲೀಡ್ ತಂದುಕೊಟ್ಟರಷ್ಟೇ ನೀವು ನಮ್ಮ ಹತ್ತಿರ ಬನ್ನಿ, ಇಲ್ಲದಿದ್ದರೆ ಖಾದಿ ಬಟ್ಟೆ ಬಿಟ್ಟುಬಿಡಿ. ಬೂತ್ ನಲ್ಲಿ ಲೀಡ್ ಕೊಡದಿದ್ದ ಮೇಲೆ ಅವರು ಯಾವ ನಾಯಕರು? ಎಂದು ಪ್ರಶ್ನಿಸಿದರು.
ಈ ಬಾರಿ ಚುನಾವಣೆಯಲ್ಲಿ ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ ಹಾಗೂ ರಾಜ್ಯಕ್ಕೆ ಹೊಸ ದಿಕ್ಕನ್ನು ನೀಡುವ ಚುನಾವಣೆ. ಕಿಂಗ್ ಮೇಕರ್ ಎನ್ನುತ್ತಿದ್ದ ಜೆಡಿಎಸ್ ಪಕ್ಷ 18 ಕ್ಷೇತ್ರಕ್ಕೆ ತೃಪ್ತಿಪಟ್ಟಿತು. ಅವರ ಸಹವಾಸ ಬೇಡ ಎಂದು ನಮ್ಮ ಕಾಲ ಮೇಲೆ ನಿಂತು ನಾವು ಸರ್ಕಾರ ರಚಿಸುವ ಶಕ್ತಿ ನೀಡಿ ಎಂದು ಮತದಾರ ದೇವರಲ್ಲಿ ಪ್ರಾರ್ಥಿಸಿದೆವು. ನಾವು 136 ಸೀಟು ಗೆಲ್ಲುತ್ತೇವೆ ಎಂದು ನಾನು ಚುನಾವಣೆಗೂ ಮುಂಚೆಯೇ ಹೇಳಿದ್ದೆ. ಅದರಂತೆ ನಾವು ಚುನಾವಣೆ ಗೆದ್ದಿದ್ದೇವೆ. ಇಲ್ಲಿ ದೇವರಾಜ್ ಗೆಲ್ಲುವ ವಿಶ್ವಾಸವಿತ್ತು. ಆದರೆ ಸೋತಿದ್ದಾರೆ ಎಂದರು.
ಈ ಚುನಾವಣೆ ಮೂಲಕ ನಿಮ್ಮ ಮುಂದೆ ಸುವರ್ಣಾವಕಾಶ ಬಂದಿದೆ. ಈ ಹಿಂದೆ ಜೆಡಿಎಸ್ 8ಕ್ಕೆ 8 ಕ್ಷೇತ್ರ ಗೆದ್ದಿದ್ದರು. ನಾನು ಕುಮಾರಸ್ವಾಮಿ ಮಗನಿಗೆ ಮತ ನೀಡುವಂತೆ ಮನವಿ ಮಾಡಿದೆ. ಆತ ಗೆಲ್ಲುವ ವಿಶ್ವಾಸವಿತ್ತು. ಆದರೆ ಜನ ಅದನ್ನು ತಿರಸ್ಕರಿಸಿದರು. ಮಂಡ್ಯದ ಜನ, ನಮ್ಮ ಅಧಿಕಾರವನ್ನು ಸ್ಥಳೀಯರಾದ ಅಂಬರೀಶ್ ಅವರ ಧರ್ಮಪತ್ನಿಗೆ ನೀಡುತ್ತೇವೆ ಎಂದು ನಿರ್ಧಾರ ಮಾಡಿದರು.
ಜೆಡಿಎಸ್ ಪಕ್ಷ ಇರುವುದು, ನೀತಿ, ಸಿದ್ಧಾಂತ, ಕಾರ್ಯಕರ್ತರಿಗಾಗಿ ಅಲ್ಲ. ಈ ಪಕ್ಷ ಇರುವುದು ಕೇವಲ ಒಂದು ಕುಟುಂಬದ ಅಧಿಕಾರಕ್ಕಾಗಿ. ಇದನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು. ನಮ್ಮ ಪಕ್ಷ ನಾಗಮಂಗಲದ ವೆಂಕಟರಮಣೇಗೌಡರನ್ನು ಕಣಕ್ಕಿಳಿಸಿದೆ. ದೇವೇಗೌಡರೇ, ಕುಮಾರಸ್ವಾಮಿ ಅವರೇ ನೀವು ಮಂಡ್ಯವನ್ನು ನನ್ನ ಜಿಲ್ಲೆ ಎಂದು ಹೇಳುತ್ತಿದ್ದಿರಿ. ಈ ಮಂಡ್ಯ ಜಿಲ್ಲೆಗೆ ನೀವು ಏನು ಮಾಡಿದ್ದೀರಿ ಎಂಬುದನ್ನು ಬಿಡಿಸಿ ಹೇಳಬೇಕು. ಇಲ್ಲಿನ ಅಂತರ್ಜಲ ಹೆಚ್ಚಳಕ್ಕೆ ಏನು ಮಾಡಿದ್ದೀರಿ? ರೈತನ ಮಗ ಎಂದು ಖಾಲಿ ಮಾತು ಆಡಿದರೆ ಪ್ರಯೋಜನವಿಲ್ಲ ಎಂದು ಹೇಳಿದರು.
ರಾಜ್ಯದ ಜನ ನಮಗೆ ಕಳೆದ ಚುನಾವಣೆಯಲ್ಲಿ ಆಶೀರ್ವಾದ ಮಾಡಿದರು. ನಾವು ಈ ರಾಜ್ಯದ ಬಡವರ ಕಷ್ಟಕ್ಕೆ ಸ್ಪಂದಿಸಿದ್ದೇವೆ. ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಮಹಿಳೆಯರ ರಕ್ಷಣೆಗೆ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿತು. ಗೃಹಲಕ್ಷ್ಮಿ ಯೋಜನೆ ಮೂಲಕ ಬಡ ಕುಟುಂಬದ ಮನೆಯೊಡತಿಯರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡಿತು. ಈ ಯೋಜನೆಯಲ್ಲಿ ಯಾವುದೇ ಮೀಡಿಯೇಟರ್ ಗಳಿಲ್ಲ, ಇದಕ್ಕೆ ಸಾರಾ ಮಹೇಶ್ ಹಾಗೂ ಕುಮಾರಸ್ವಾಮಿ ಅವರಿಲ್ಲದೆ, ನೇರವಾಗಿ ಮನೆಯೊಡತಿಯರ ಖಾತೆಗೆ ಹಣ ರವಾನೆಯಾಗುತ್ತಿದೆ.
ಇನ್ನು ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ತಿಂಗಳು 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇನ್ನು ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಬಸ್ ಪ್ರಯಾಣ ಮಾಡಲಾಯಿತು. ಹಸಿವು ಮುಕ್ತ ರಾಜ್ಯ ಮಾಡಲು ಅನ್ನಭಾಗ್ಯ ಯೋಜನೆ ಮೂಲಕ 10 ಕೆ.ಜಿ ಅಕ್ಕಿ ಪೈಕಿ 5 ಕೆ.ಜಿ ಅಕ್ಕಿ ಹಾಗೂ ಉಳಿದ 5 ಕೆ.ಜಿಯ ಹಣ ನೀಡಲಾಗುತ್ತಿದೆ. ನಿರುದ್ಯೋಗ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ.












Click it and Unblock the Notifications