37 ಸೀಟು ತಗೊಂಡು ಸಿಎಂ ಆಗಿ ಅಂದ್ರೆ ಯಾವ ಧರ್ಮ?: ದೇವೇಗೌಡ
ಬೆಂಗಳೂರು, ಜೂನ್ 28: ಮಲ್ಲಿಕಾರ್ಜುನ ಖರ್ಗೆ ಅಥವಾ ಮುನಿಯಪ್ಪ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಕಾಂಗ್ರೆಸ್ ಹೈಕಮಾಂಡ್ಗೆ ಹೇಳಿದ್ದೆ. ಕುಮಾರಸ್ವಾಮಿ ಅವರನ್ನು ಸಿಎಂ ಮಾಡುವಂತೆ ಕೇಳಿರಲಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ ಹೇಳಿದರು.
ಬಹಳ ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿ ಎಂದು ನಾನು ಕೇಳಲಿಲ್ಲ. 37 ಸೀಟುಗಳನ್ನು ತೆಗೆದುಕೊಂಡು ಮುಖ್ಯಮಂತ್ರಿ ಆಗು ಎಂದರೆ ಯಾವ ಧರ್ಮ ಹೇಳಿ? ಆದರೆ ದೆಹಲಿಯ ಹೈಕಮಾಂಡ್ ಬಂದು ಕುಮಾರಸ್ವಾಮಿ ಅವರೇ ಸಿಎಂ ಆಗಲಿ ಎಂದು ಒತ್ತಾಯಿಸಿದರು ಎಂಬುದಾಗಿ ಅವರು ತಿಳಿಸಿದರು.
ನಗರದ ಜೆಪಿ ಭವನದಲ್ಲಿ ಹಿಂದುಳಿದ ವರ್ಗಗಳ ಸಭೆಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ರಚನೆಯ ಪರಿಸ್ಥಿತಿ ಬಂದಾಗ 2008ರಲ್ಲಿ ಉಂಟಾದ ಸಮಸ್ಯೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಜತೆ ಚರ್ಚಿಸಿದ್ದೆ. ಹೀಗಾಗಿ ಮಲ್ಲಿಕಾರ್ಜು ಖರ್ಗೆ ಅಥವಾ ಮುನಿಯಪ್ಪ ಯಾರನ್ನಾದರೂ ಮುಖ್ಯಮಂತ್ರಿ ಮಾಡಿ ಎಂದು ಸಲಹೆ ನೀಡಿದ್ದೆ. ಆದರೂ ಅವರು ಕುಮಾರಸ್ವಾಮಿ ಹೆಸರನ್ನು ಹೇಳಿದರು ಎಂದರು.

ಈಗ ಕೆಲವು ನಾಯಕರು ಮುಖ್ಯಮಂತ್ರಿ ಹುದ್ದೆ ಬಗ್ಗೆ ಹೈಕಮಾಂಡ್ ಜತೆ ಮಾತನಾಡಿದ್ದಾರೆ. ಅದು ಮಾಧ್ಯಮದವರಿಗೂ ತಿಳಿದಿದೆ. ಲೋಕಸಭೆ ಚುನಾವಣೆ ಬಳಿಕ ಜೆಡಿಎಸ್ ಜತೆ ಮೈತ್ರಿಯಿಂದ ಸೋಲು ಉಂಟಾಯಿತು, ಅವರು ಬೆನ್ನಿಗೆ ಚೂರಿ ಹಾಕಿದರು ಎಂದೆಲ್ಲಾ ಹೇಳಿದರು ಎಂದು ಹೇಳಿದರು.
ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಬಿಜೆಪಿಯವರು ಏನೆಲ್ಲ ಮಾಡಿದರು ಎಂಬುದನ್ನು ನೀವು ನೋಡಿದ್ದೀರಿ. ಬಿಜೆಪಿಯವರು ರಾಷ್ಟ್ರೀಯ ಪಕ್ಷವಾಗಿ ಹಾಗೆ ಮಾಡಬಾರದು. ಪ್ರತಿಭಟನಾಕಾರರು ಮನವಿ ಕೊಟ್ಟು ಕಷ್ಟ ಹೇಳಿಕೊಳ್ಳಬೇಕಿತ್ತು. ಜನತಾದರ್ಶನಕ್ಕೆ ಸಾವಿರಾರು ಮಂದಿ ಕಾಯುತ್ತಿದ್ದರು. ಕುಮಾರಸ್ವಾಮಿ ಮೃದುವಾಗಿ ಹೇಳಿದರೂ ಪ್ರತಿಭಟನೆ ಮಾಡುವವರು ಕೇಳಲಿಲ್ಲ. ತಾಳ್ಮೆಗೂ ಒಂದು ಮಿತಿ ಇರುತ್ತದೆ ಅಲ್ಲವೇ? ಎಂದರು.
ಯಾರನ್ನು ಯಾರು ಸೋಲಿಸಿದರು ಎಂದು ಜನರೇ ಮಾತನಾಡಿಕೊಳ್ಳುತ್ತಿದ್ದಾರೆ. ಖರ್ಗೆ, ದೇವೇಗೌಡರ ಸೋಲಬಾರದಿತ್ತು ಎಂದು ಹೇಳುತ್ತಿದ್ದಾರೆ. ಕೋಲಾರದಲ್ಲಿ ಮುನಿಯಪ್ಪ ಅವರ ಸೋಲಿಗೆ ನಾವು ಕಾರಣರೇ? ಖರ್ಗೆ ಸೋಲಿಗೆ ಒಕ್ಕಲಿಗರು ಕಾರಣರೇ? ಜೆಡಿಎಸ್ ಸಹವಾಸದಿಂದ ಸೋಲು ಆಯ್ತಂತೆ. ಇಂತಹ ಮಾತುಗಳಿಂದ ಪ್ರತಿ ಕ್ಷಣ ಎಷ್ಟು ನೋವು ಅನುಭವಿಸುತ್ತಿದ್ದೇನೆ ಎನ್ನುವುದು ನನಗೆ ಗೊತ್ತು. ಕುಮಾರಸ್ವಾಮಿ ಎಷ್ಟು ಕಷ್ಟದಲ್ಲಿ ಸರ್ಕಾರ ನಡೆಸುತ್ತಿದ್ದಾರೆ ಎನ್ನುವುದೂ ಗೊತ್ತು ಎಂದು ಹೇಳಿದರು.












Click it and Unblock the Notifications