ಸುಗಂಧರಾಜ ಬೆಲೆ ಭಾರೀ ಕುಸಿತ: ಕೆಜಿಗೆ 20-40 ರೂಗೆ ಮಾರಾಟ, ಹೂವಿಗೆ ಕಡಿಮೆಯಾಯಿತಾ ಬೇಡಿಕೆ?
ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಹೂವಿನ ಮಾರುಕಟ್ಟೆಗಳಲ್ಲಿ ಸರಬರಾಜು ಉತ್ತಮವಾಗಿದ್ದರೂ ಸಹಿತ ಹೂವಿನ ಬೆಲೆ ಕುಸಿತ ಕಂಡಿದೆ. ಕಾರ್ಯಕ್ರಮ, ಸಭೆ, ಸಮಾರಂಭಗಳಲ್ಲಿ ಹೆಚ್ಚು ಬಳಕೆ ಆಗುವ 'ಸುಗಂಧರಾಜ' ಹೂವಿನ ಬೆಲೆ ಪಾತಾಳ ಕಂಡಿದೆ. 1ಕೆಜಿಗೆ ನೂರಾರು ರೂಪಾಯಿ ಮಾರಾಟವಾಗುತ್ತಿದ್ದ 'ಸುಗಂಧರಾಜ' ದರವು ಇಂದು 20 ರಿಂದ 40 ರೂಪಾಯಿಗೆ ಮಾರಾಟವಾಗುತ್ತಿದೆ. ದಿಢೀರ್ ಇಳಿಕೆಗೆ ಕಾರಣವೇನು? ಮಾರುಕಟ್ಟೆಯಲ್ಲಿ ಸುಗಂಧರಾಜ, ಮಲ್ಲಿಗೆ, ಮಲ್ಲಿಗೆ ಮೊಗ್ಗು ಸೇರಿದಂತೆ ವಿವಿಧ ಹೂವುಗಳ ಬೆಲೆ ಎಷ್ಟಿದೆ? ಇಲ್ಲಿದೆ ಲೇಟೆಸ್ಟ್ ಮಾಹಿತಿ.
ಅಧಿಕ ಮಾಸ ಮೇ 17ರಿಂದ ಶುರುವಾಗಿದ್ದು ಜೂನ್ 15ರವರೆಗೂ ಇರಲಿದೆ. ಈ ಅವಧಿಯಲ್ಲಿ ಶುಭ ಸಮಾರಂಭಗಳು, ವಿವಾಹ ಕಾರ್ಯಕ್ರಮಗಳು ಜರುಗುವುದು ತೀರಾ ಕಡಿಮೆ. ಹೂವುಗಳ ಬೆಲೆ ಇಳಿಕೆಗೆ ಇದು ಪ್ರಮುಖ ಕಾರಣ ಎಂದು ಕೆ.ಆರ್.ಮಾರುಕಟ್ಟೆಯ ವರ್ತಕ ದಿವಾಕರ್ ಅವರು ತಿಳಿಸಿದ್ದಾರೆ. ಅವರ ಪ್ರಕಾರ, ಮಾರುಕಟ್ಟೆಗೆ ಹೂವಿನ ಸರಬರಾಜು ಸಾಮಾನ್ಯವಾಗಿದೆ. ಆದರೆ ಮದುವೆ ಇನ್ನಿತರ ಸಮಾರಂಭಗಳು ಕಡಿಮೆ ಆಗಿದ್ದರಿಂದ ಬೇಡಿಕೆ ಕಡಿಮೆ ಆಗಿ ಮಾರಾಟ ಕುಂಠಿತವಾಗಿದೆ. ಇದರಿಂದ ಬೆಲೆಯು ಸಹ ಕುಸಿದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಹಬ್ಬಗಳಲ್ಲಿ 300-500 ರೂ.ಗೆ ಸುಗಂಧರಾಜ ಮಾರಾಟ
ಮದುವೆ, ಶುಭ ಸಮಾರಂಭಗಳು, ಹಬ್ಬಗಳ ಸಮಯದಲ್ಲಿ ಸುಗಂಧರಾಜ ಹೂವಿಗೆ ಬೇಡಿಕೆ ಹೆಚ್ಚಿರುತ್ತದೆ. ಆಗ ಕೆಜಿ ದರ 300 ರೂಪಾಯಿ, ಸರಬರಾಜಿನಲ್ಲಿ ಏರಳಿತವಾದಾಗ ಕೆಜಿಗೆ ಸುಮಾರು 500 ರೂಪಾಯಿಗೂ ಮಾರಾಟ ಮಾಡಿದ್ದೇವೆ. ಆದರೆ ಇಂದು ಪರಿಸ್ಥಿತಿ ಬದಲಾಗಿದೆ ಬೆಳಗ್ಗೆ 40 ರೂಪಾಯಿ ಮಾರಾಟವಾದ ಸುಗಂಧರಾಜ ಸಂಜೆ ಹೊತ್ತಿಗೆ 20 ರೂ.ಗೆ ಬಿಕರಿಯಾಗುತ್ತಿದೆ ಎಂದು ವಿವರಿಸಿದರು.
ಮಲ್ಲಿಗೆ ಮೊಗ್ಗಿಗೆ ಡಿಮ್ಯಾಂಡ್ ಕಡಿಮೆ
ತೀವ್ರ ಬಿಸಿಲು, ಮಳೆಗೆ ಕೆಲವು ಹೂವುಗಳು ಇಳುವರಿ ಕುಸಿಯುತ್ತದೆ. ಆಲಿಕಲ್ಲು ಮಳೆಗೆ ಗಿಡಗಳಿಗೆ ಹಾನಿ ಆಗುತ್ತದೆ. ಸದಾ ಡಿಮ್ಯಾಂಡ್ ಇರುವ ಮಲ್ಲಿಗೆ ಮೊಗ್ಗು ಮಾರಾಟವು ಮಳೆ ಕಾರಣದಿಂದಾಗಿ ಇಳಿಕೆ ಆಗಿದೆ. ಹೀಗಾದಾಗ ಸಾಮಾನ್ಯವಾಗಿ ಸುಗಂಧರಾಜ ಹೂವಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಈ ವರ್ಷ ಮೇ ಅಂತ್ಯ ಮತ್ತು ಜೂನ್ ಈವರೆಗೂ ಬೇಡಿಕೆ ಮತ್ತು ಬೆಲೆ ಅಷ್ಟಾಗಿ ಇಲ್ಲ. ಮುಂಬರುವ ಹಬ್ಬಗಳ ಹೊತ್ತಿಗೆ ಮತ್ತೆ ಬೇಡಿಕೆ ಸೃಷ್ಟಿಯಾಗುವ ಸಾಧ್ಯತೆ ಇದೆ.
ಪೂರೈಕೆ, ವ್ಯಾಪಾರದ ಮೇಲೆ ಪ್ರತಿಕೂಲ ಹವಾಮಾನ ಪ್ರಭಾವ
ಹೂವ ರೈತರಿಗೆ, ವರ್ತಕರಿಗೆ ಪ್ರತಿ ದಿನ ಆದಾಯ ತರುವ ಉತ್ಪನ್ನವಾಗಿದೆ. ಇದರಲ್ಲಿ ಮೋಸ ಆಗುವುದು ಕಡಿಮೆ. ಮುಂದೆ ಬರಲಿರುವ ಹಬ್ಬಗಳನ್ನು ನೋಡಿಕೊಂಡು, ಸೀಸನ್ ಗಮನಿಸಿ ರೈತರು ಹೂವುಗಳನ್ನು ಬೆಳೆಸುತ್ತಾರೆ. ಇಷ್ಟೆಲ್ಲ ಮಾಡಿದರೂ ಸಹಿತ ಈ ವರ್ಷ ಅಧಿಕ ಮಾಸ ಹಿನ್ನೆಲೆ ಹೂವುಗಳ ಬೆಲೆ ತಾತ್ಕಾಲಿಕವಾಗಿ ತಗ್ಗಿದೆ. ಕೆಲವೊಮ್ಮೆ ಹವಾಮಾನ ವೈಪರೀತ್ಯಗಳು, ಪ್ರತಿಕೂಲ ವಾತಾವರಣವು ಹೂವಿನ ಪೂರೈಕೆ ಮತ್ತು ಬೆಲೆಯನ್ನು ನಿರ್ಧರಿಸುತ್ತವೆ.
ಹೂವುಗಳ ಬೇಡಿಕೆ ತಾತ್ಕಾಲಿಕ ಇಳಿಕೆ
ಫೆಬ್ರವರಿಯಲ್ಲಿ ಸೀಡ್ ಮಾಡಿದ ಹೂವುಗಳ ಮೇ ಹೊತ್ತಿಗೆ ಬರುತ್ತವೆ. ಆದರೆ ದಿಢೀರ್ ಆಲಿಕಲ್ಲು ಮಳೆಗೆ ಗಿಡಗಳಿಗೆ ಹಾನಿ ಆಗುತ್ತದೆ. ಸೇವಂತಿ ಹೂವು ಈ ಬಾರಿ ಮಳೆಗೆ ಸಿಲುಕಿದ್ದು, ರೈತರು ಕೊಂಚ ನಷ್ಟ ಎದುರಿಸುವಂತಾಗಿದೆ. ಎಂದಿನಂತೆ ಬೆಂಗಳೂರಿನ ಕೆಆರ್. ಮಾರುಕಟ್ಟೆ ಹೂವು ಮಾರಾಟ ನಡೆಯುತ್ತಿದೆ ಆದರೆ ಬೇಡಿಕೆ ಅಷ್ಟಾಗಿ ಬರುತ್ತಿಲ್ಲ ಎಂದು ಅವರು ಹೇಳಿದರು.
ಮೊದಲು ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯಲ್ಲಿ ಮಾತ್ರವೇ ಹೂವುಗಳನ್ನು ಖರೀದಿಸಬೇಕಿತ್ತು. ಇಂದು ಬದಲಾದ ಸಮಯದಲ್ಲಿ ಚಿಕ್ಕಬಳ್ಳಾಪುರದಲ್ಲಿ ಸೇವೆಂತಿ ಹೂವಿನ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಅಲ್ಲಿ ಮಾರುಕಟ್ಟೆ ತಲೆಎತ್ತಿದೆ. ಹೊಸ ಕೋಟೆಯಲ್ಲಿ ಹೂವಿನ ದೊಡ್ಡ ಮಾರುಕಟ್ಟೆ ಇದೆ. ಹೀಗಾಗಿ ರೈತರು ಪೂರೈಕೆ-ಮಾರಾಟಕ್ಕೆ ಹೆಚ್ಚಿನ ಅವಕಾಶ ಸಿಕ್ಕಂತಾಗಿದೆ.
ಬೆಂಗಳೂರಿನ ಮಾರುಕಟ್ಟೆಗೆ ಸುಗಂಧರಾಜ ಮತ್ತು ಕನಕಾಂಬರ ಶೇ. 80ರಷ್ಟು ಪೂರೈಕೆ ಗೌರಿ ಬಿದರನೂರಿನ ರೈತರಿಂದ ಆಗುತ್ತದೆ. ಶೇ. 20ರಷ್ಟು ತಮಿಳುನಾಡಿನಿಂದ ಬರುತ್ತದೆ. 10 ವರ್ಷಗಳ ಹಿಂದೆ ದೇವನಹಳ್ಳಿಯಿಂದ ಶೇ.10ರಷ್ಟು ವಿವಿಧ ಹೂವುಗಳು ಪೂರೈಕೆಗಳು ಆಗುತ್ತಿತ್ತು. ಆದರೆ ದೇವನಹಳ್ಳಿಯಲ್ಲಿ ಜಮೀನು ಕೈಗಾರಿಕೆ, ವಸತಿ ಪ್ರದೇಶವಾಗಿ ಬದಲಾದ ಹಿನ್ನೆಲೆ ಅಲ್ಲಿಂದ ಪೂರೈಕೆ ಆಗುತ್ತಿಲ್ಲ.
ಹೂವುಗಳ ಇಂದಿನ ಮಾರುಕಟ್ಟೆ ಬೆಲೆ (1kg ದರ ಪಟ್ಟಿ)
* ಸುಗಂಧರಾಜ: 20-40 ರೂಪಾಯಿ
* ಗುಲಾಬಿ: 40 ರೂಪಾಯಿ
* ಮಲ್ಲಿಗೆ: 600-800 ರೂಪಾಯಿ
* ಮಾರಿಗೋಲ್ಡ್ : 100 ರೂಪಾಯಿ
* ಕಮಲ: 15 ರೂಪಾಯಿ
* ಲಿಲಿ: 500-900 ರೂಪಾಯಿ
* ಗರ್ಬೇರಾ: 350 ರೂಪಾಯಿ
* ಕಾಕಡಾ: 230 ರೂಪಾಯಿ













Click it and Unblock the Notifications