ನಗರ, ಪುರಸಭೆ, ಪಟ್ಟಣ ಪಂಚಾಯಿತಿ ನಾಮನಿರ್ದೇಶಿತರ ನೇಮಕಾತಿ ರದ್ದು
ಬೆಂಗಳೂರು, ಜುಲೈ 01: ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ್ದ ಯಡಿಯೂರಪ್ಪ ಅವರು, 'ದ್ವೇಷ ರಾಜಕಾಣ ಮಾಡುವುದಿಲ್ಲ' ಎಂದು ಹೇಳಿದ್ದರು, ಆದರೆ ಹಳೆಯ ಸರ್ಕಾರ ನೇಮಿಸಿದ್ದ ಬಹುತೇಕ ಅಕಾಡೆಮಿ ಅಧ್ಯಕ್ಷರು, ಬೋರ್ಡು, ಮಂಡಳಿಗಳ ಅಧ್ಯಕ್ಷರುಗಳನ್ನು ಯಡಿಯೂರಪ್ಪ ಅವರು ವಜಾ ಮಾಡಿದ್ದಾರೆ, ಇದು ಇನ್ನೂ ಮುಂದುವರೆದಿದೆ.
ರಾಜ್ಯದ ಎಲ್ಲಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ನೇಮಿಸಲಾಗಿದ್ದ ನಾಮನಿರ್ದೇಶಿತ ಸದಸ್ಯರ ನೇಮಕಾತಿಯನ್ನು ರದ್ದು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ಪುರಸಭೆ ಕಾಯ್ದೆ 1964 ರ ಕಲಂ 18(1)(ಬಿ) ದಲ್ಲಿ ಪ್ರಸ್ತಾಪವಾಗಿರುವ ಅಧಿಕಾರವನ್ನು ಚಲಾಯಿಸಿ ತಕ್ಷಣದಿಂದ ಜಾರಿ ಬರುವಂತೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ನಾಮನಿರ್ದೇಶಿತ ಸದಸ್ಯರ ನೇಮಕಾತಿಯನ್ನು ರದ್ದು ಮಾಡಲಾಗಿದೆ.

ಎಲ್ಲಾ ಬೋರ್ಡು, ಮಂಡಳಿಗಳ ಅಧ್ಯಕ್ಷರು ಸದಸ್ಯರನ್ನು ಕೆಲವು ದಿನಗಳ ಹಿಂದೆಯಷ್ಟೆ ಸರ್ಕಾರ ವಜಾ ಮಾಡಿತ್ತು, ನಂತರ ಕನ್ನಡ ಸಂಸ್ಕೃತಿ ಇಲಾಖೆ ಅಡಿಯಲ್ಲಿ ಬರುವ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರು ಇನ್ನಿತರೆ ಪ್ರಮುಖ ಹುದ್ದೆಗಳಲ್ಲಿರುವವರನ್ನು ಸರ್ಕಾರವು ವಜಾ ಮಾಡಿತ್ತು. ಈಗ ನಾಮನಿರ್ದೇಶಿತ ಸದಸ್ಯರನ್ನು ವಜಾ ಮಾಡಲಾಗಿದೆ.
ಇಂದು ಹಲವು ಐಪಿಎಸ್ ಅಧಿಕಾರಿಗಳನ್ನು ಸಹ ಯಡಿಯೂರಪ್ಪ ಅವರು ವರ್ಗಾವಣೆ ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ಐಎಎಸ್ ಅಧಿಕಾರಿಗಳನ್ನೂ ವರ್ಗಾವಣೆ ಮಾಡುವ ಎಲ್ಲಾ ಸಾಧ್ಯೆಗಳೂ ಇವೆ. ಒಟ್ಟಿನಲ್ಲಿ ಅಧಿಕಾರಕ್ಕೆ ಏರಿದಂದಿನಿಂದಲೂ ಆಯಕಟ್ಟಿನ ಜಾಗಕ್ಕೆ ಅನೂಕೂಲಸ್ಥರನ್ನು ನೇಮಿಸಿಕೊಳ್ಳುವಲ್ಲಿ ಯಡಿಯೂರಪ್ಪ ಅವರು ನೇಮಿಸಿಕೊಳ್ಳುವುದರಲ್ಲಿ ಬ್ಯುಸಿಯಾದಂತಿದೆ.












Click it and Unblock the Notifications