Namma Metro: ಮೆಟ್ರೋ 3ನೇ ಹಂತದ 'ಆರೆಂಜ್ ಲೈನ್' ಕಾಮಗಾರಿ ವಿಳಂಬ, ಅಂದಾಜು ವೆಚ್ಚ ಏರಿಕೆ
ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ 3ನೇ ಹಂತದ ಯೋಜನೆಗಳಲ್ಲಿ ಪ್ರಮುಖವಾದ ಕಿತ್ತಳೆ ಮಾರ್ಗ (Metro Orange Line) ಪ್ರಧಾನಿ ಮೋದಿಯವರ ಶಂಕುಸ್ಥಾಪನೆ ಹಾಗೂ ಕೇಂದ್ರ ಸರ್ಕಾರದ ಅನುಮೋದನೆ ಹೊರತಾಗಿಯು ಕಾಮಗಾರಿ ಆರಂಭವಾಗದೇ ವಿಳಂಬವಾಗುತ್ತಿದೆ. ಕನಿಷ್ಠ ಕೆಲಸಗಳು ಶುರುವಾಗಿಲ್ಲ. ವಿಳಂಬವಾದಷ್ಟು ವೆಚ್ಚ ಹೆಚ್ಚಾಗುವ ಮಾಹಿತಿ ಸಿಕ್ಕಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಮೂಲಕ ಮತ್ತಷ್ಟು ಸಂಚಾರ ಒತ್ತಡ ಸೃಷ್ಟಿಯಾಗಲಿದೆ.
ರಾಜ್ಯ ಸರ್ಕಾರ ಸಲ್ಲಿಸಿದ್ದ ಆರೆಂಜ್ ಲೈನ್ ಮೆಟ್ರೋ ಯೋಜನೆಗೆ 2024ರ ಆಗಸ್ಟ್ನಲ್ಲಿ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಅಲ್ಲಿಂದ ಸುಮಾರು ಒಂದು ವರ್ಷಕ್ಕೂ ಅಧಿಕ ಸಮಯವಾದರೂ ಕಾಮಗಾರಿಗೆ ಟೆಂಡರ್ ಕರೆಯುವಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ವಿಫಲವಾಗಿದೆ. ವಿಳಂಬವಾದಷ್ಟು ಯೋಜನೆಯ ಅಂದಾಜು ವೆಚ್ಚದಲ್ಲಿ ನಿತ್ಯ ಸುಮಾರು ₹2 ಕೋಟಿ ವೆಚ್ಚ ಹೆಚ್ಚಳವಾಗಲಿದೆ ಎಂದು ಊಹಿಸಲಾಗಿದೆ.

ಬೆಂಗಳೂರು ಪಶ್ಚಿಮ ಭಾಗದ ಪ್ರದೇಶಗಳಿಗೆ ಸಂಪರ್ಕ ಸುಧಾರಿಸುವ ಒಟ್ಟು 44.65 ಕಿ.ಮೀ ಉದ್ದದ ಮೆಟ್ರೋ ಜಾಲ ಇದಾಗಿದೆ. ಜೆಪಿ ನಗರದಿಂದ ಕೆಂಪಾಪುರ (ಕಾರಿಡಾರ್ 1) ಹಾಗೂ ಹೊಸಹಳ್ಳಿ-ಕಡಬಗೆರೆ ವರೆಗೆ (ಕಾರಿಡಾರ್ 2) ಒಟ್ಟು ಎರಡು ಎತ್ತರಿಸಿದ ಕಾರಿಡಾರ್ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ವಸತಿ ಸಮುಚ್ಚಯ, ಕೈಗಾರಿಕೆಗಳು, ಹೊರ ವರ್ತುಲ ರಸ್ತೆಗೆ ಈ ಮೆಟ್ರೋ ಸಂಪರ್ಕ ಕಲ್ಪಿಸುತ್ತದೆ.
ಎರಡು ಕಾರಿಡಾರ್ಗಳ ಸಂಪರ್ಕ, ದಟ್ಟಣೆ ಇಳಿಕೆ
ಕಾರಿಡಾರ್ 1 ಮೆಟ್ರೋ ಮಾರ್ಗವು ಹೊರವರ್ತುಲ ರಸ್ತೆಯ ಪಶ್ಚಿಮ ಭಾಗದಲ್ಲಿ ತಲೆ ಎತ್ತಲಿದೆ. ಕೆಂಪಾಪುರಕ್ಕೆ ಸಂಪರ್ಕ ಸಾಧಿಸಲಿದೆ. ಅಲ್ಲದೇ ಹಾಲಿ ಮೆಟ್ರೋ ಮಾರ್ಗಗಳನ್ನು ಇದು ಸಂಧಿಸುತ್ತದೆ. ಜೆಪಿ ನಗರ 4 ನೇ ಹಂತವು ಮುಂಬರುವ ಗುಲಾಬಿ ಮಾರ್ಗವನ್ನು ಕೂಡಿಕೊಳ್ಳಲುತ್ತದೆ. ಮೈಸೂರು ರಸ್ತೆಯಲ್ಲಿ ನೇರಳೆ ಮಾರ್ಗದೊಂದಿಗೆ ಸಂಪರ್ಕ ಹೊಂದಲಿದೆ. ಸುಮನಹಳ್ಳಿ ಕ್ರಾಸ್ ಮೂಲಕ ಸಾಗಿ ಪೀಣ್ಯದಲ್ಲಿ ಹಸಿರು ಮಾರ್ಗದಲ್ಲಿ ಕೂಡಿಕೊಳ್ಳಲಿದೆ. ಅಲ್ಲಿ ಇಂಟರ್ಚೇಂಜ್ ನಿಲ್ದಾಣ ಸ್ಥಾಪನೆ ಆಗಲಿದೆ. ಈ ಮಾರ್ಗವು ಒಟ್ಟಾರೆ ಹೊರ ವರ್ತುಲ ರಸ್ತೆ ದಟ್ಟಣೆ ಕಡಿಮೆ ಮಾಡುವ ಉದ್ದೇಶ ಹೊಂದಿದೆ.
ಕಾರಿಡಾರ್ 2 ಕಡಬಗೆರೆವರೆಗೆ ಮಾಗಡಿ ರಸ್ತೆಯ ಉದ್ದಕ್ಕೂ ನಿರ್ಮಾಣವಾಗಲಿದೆ. ಇದು ನಗರದ ಪಶ್ಚಿಮ ಭಾಗದಲ್ಲಿದ್ದ ಸಂಚಾರ ದಟ್ಟಣೆ ನಿವಾರಿಸಿ ಆಧುನಿಕ ಸಾರಿಗೆ ಸೇವೆ ಒದಗಿಸುತ್ತದೆ. ಈ ಕಾರಿಡಾರ್ ಹೊಸಹಳ್ಳಿಯಲ್ಲಿ ನೇರಳೆ ಮಾರ್ಗದಿಂದಲೇ ಆರಂಭವಾಗುತ್ತದೆ. ಕೆಎಚ್ಬಿ ಕಾಲೋನಿ, ಕಾಮಾಕ್ಷಿಪಾಳ್ಯ, ಸುಂಕದಕಟ್ಟೆ, ಹೇರೋಹಳ್ಳಿ, ಬ್ಯಾಡರಹಳ್ಳಿ ಮತ್ತು ಕಾಮತ್ ಬಡಾವಣೆಗಳ ಮೂಲಕ ಸಾಗಲಿದೆ. ಈ ಭಾಗದ ಜನದಟ್ಟಣೆಯ ಪ್ರದೇಶಗಳ ಜನರಿಗೆ ಈ ಮಾರ್ಗ ವರದಾನವಾಗಲಿದೆ. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದೆ.

ಆರಂಜ್ ಲೈನ್ ಯೋಜನೆ ವಿಳಂಬ ಏಕೆ?
ಈ ಆರೆಂಜ್ ಲೈನ್ ಎತ್ತರಿಸಿದ ಎರಡು ಕಾರಿಡಾರ್ ಹೊಂದಿರಲಿದೆ. ರಾಜ್ಯ ಸರ್ಕಾರದ ಉದ್ದೇಶದಂತೆ ಈ ಮೆಟ್ರೋ ಮಾರ್ಗಗಳ ಜೊತೆಗೆ ಡಬಲ್ ಡೆಕ್ಕರ್ ಮೇಲ್ಸೇತುವೆ ಸಹಿತ ನಿರ್ಮಿಸಬೇಕಿದೆ. ಇದು ಯೋಜನೆ ವಿಳಂಬವಾಗಲು ಪ್ರಮುಖ ಕಾರಣವಾಗಿದೆ. ಸಂಚಾರ ದಟ್ಟಣೆ ಕಡಿವಾಣ ಹಾಕಲು ಹಾಗೂ ಒಂದೇ ಮಾರ್ಗದಲ್ಲಿ ಎರಡು ಯೋಜನೆ ಸಾಕಾರಗೊಳಿಸುವ ಉದ್ದೇಶವೇನೋ ಸರಿ ಇದೆ. ಆದರೆ ಯೋಜನೆಯ ಅಧಿಕ ವೆಚ್ಚಗಳು ಮತ್ತು ವಿನ್ಯಾಸದ ಅವಶ್ಯಕತೆ, ಭೂಮಿ ಸ್ವಾಧೀನದಂತಹ ಸವಾಲುಗಳು ಎದುರಾಗಿವೆ. ತಾಂತ್ರಿಕ ಅಂಶಗಳನ್ನು ಮರು ಪರಿಶೀಲಿಸುವಂತೆ ಒತ್ತಾಯ ವ್ಯಕ್ತವಾಗಿದೆ.
ಬೆಂಗಳೂರು-ತುಮಕೂರು ಮೆಟ್ರೋ ವಿಸ್ತರಣೆಗೆ ಡಿಪಿಆರ್ ತಯಾರಿಕೆಗೆ ಟೆಂಡರ್ ಆಹ್ವಾನಿಸಿರುವ ಮೆಟ್ರೋ ಅಧಿಕಾರಿಗಳು ಈ ಆರೆಂಜ್ ಮಾರ್ಗಕ್ಕೆ ಟೆಂಡರ್ ಯಾವಾಗ ಕರೆಯಲಾಗುತ್ತದೆ ಎಂಬ ಮಾಹಿತಿ ನೀಡಿಲ್ಲ. ಅತಿ ಮುಖ್ಯವಾಗಿರುವ ಈ ಮೆಟ್ರೊ ಮಾರ್ಗ ನಿರ್ಮಾಣದ ಅಗತ್ಯತೆ ಇದೆ. ಈ ಭಾಗದ ಪ್ರಯಾಣಿಕರು ಸುಗಮ ಸಂಚಾರ ವ್ಯವಸ್ಥೆಯನ್ನು ಎದುರು ನೋಡುತ್ತಿದ್ದಾರೆ.












Click it and Unblock the Notifications