Vande Bharat Express: ದಾಖಲೆ ಬರೆದ ಬೆಂಗಳೂರು–ಬೆಳಗಾವಿ ರೈಲು, ಜನರಿಂದ ಭರ್ಜರಿ ಸ್ಪಂದನೆ, ಇಲ್ಲಿದೆ ಅಂಕಿ-ಸಂಖ್ಯೆ
ಬೆಂಗಳೂರು: ಮುಂದಿನ ತಿಂಗಳ ಆಗಸ್ಟ್ 2026ಕ್ಕೆ ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆ ಬೆಳಗಾವಿ ಮಧ್ಯೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (Vande Bharat Express Train) ಆರಂಭವಾಗಿ ಒಂದು ವರ್ಷ ಕಳೆಯುತ್ತದೆ. ಆ ಪೈಕಿ ಕೇವಲ ಹತ್ತು ತಿಂಗಳ ಅವಧಿಯಲ್ಲಿ ಈ ಮಾರ್ಗದ ಎರಡು ದಿಕ್ಕಿನಲ್ಲಿ ಬರೋಬ್ಬರಿ 02 ಲಕ್ಷಕ್ಕೂ ಅಧಿಕ ಮಂದಿ ಪ್ರಯಾಣ ಮಾಡಿದ್ದಾರೆ. ಈ ಮೂಲಕ ಉತ್ತರ ಕರ್ನಾಟಕಕ್ಕೆ ಇದ್ದ ವಂದೇ ಭಾರತ್ ರೈಲಿನ ಅಗತ್ಯತೆಯನ್ನು ಎತ್ತಿ ತೋರಿಸಿದ್ದಾರೆ. ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ನೀಡಿದ ಮಾಹಿತಿಯಲ್ಲಿ ಯಾವ ಭಾಗದಲ್ಲಿ ಹೆಚ್ಚು ಪ್ರಯಾಣಿಕರು ಹತ್ತಿ-ಇಳಿದಿದ್ದಾರೆ ಎಂಬ ಅಂಕಿಸಂಖ್ಯೆ ಮುಂದಿದೆ.
ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (SBC-BGM 26751/26752) 2025ರ ಆಗಸ್ಟ್ 11ರಿಂದ ಪ್ರಧಾನಿಯವರಿಂದ ಹಸಿರು ನಿಶಾನೆ ಪಡೆಯುವುದರೊಂದಿಗೆ ತನ್ನ ಅಧಿಕೃತ ವಾಣಿಜ್ಯ ಕಾರ್ಯಾಚರಣೆ ಆರಂಭಿಸಿತ್ತು. ಅಂದಿನಿಂದ ವಂದೇ ಭಾರತ್ ಎಕ್ಸ್ಪ್ರೆಸ್ನ ಎಷ್ಟು ಪ್ರಯಾಣಿಕರು ಓಡಾಡಿದ್ದಾರೆ ಎಂಬುದರ ಕುರಿತು ಎಂಜಿನಿಯರ್ ವರುಣ್ ರಾವ್ ಎಂಬುವವರು RTI (ಮಾಹಿತಿ ಹಕ್ಕು) ಅಡಿ ಕೋರಿದ್ದ ಪ್ರಶ್ನೆಗಳಿಗೆ ರೈಲ್ವೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಅದರಲ್ಲಿ ಮಹತ್ವದ ಅಂಕಿ-ಅಂಶಗಳು ಬಯಲಾಗಿದ್ದು, ಉತ್ತರ ಕರ್ನಾಟಕದ ಜನರಿಂದ ವಂದೇ ಭಾರತ್ ರೈಲಿಗೆ ವ್ಯಾಪಕ ಸ್ಪಂದನೆ ಸಿಕ್ಕಿದ್ದು ಗೊತ್ತಾಗಿದೆ. ಈ ಮಾಹಿತಿಯನ್ನು ವರುಣ್ ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

10 ತಿಂಗಳಲ್ಲಿ 2.10 ಲಕ್ಷ ಮಂದಿ ಸಂಚಾರ
ಬೆಂಗಳೂರು-ಬೆಳಗಾವಿ-ಬೆಂಗಳೂರು ವಂದೇ ಭಾರತ್ ರೈಲಿನಲ್ಲಿ ಆಗಸ್ಟ್ 11, 2025 ರಿಂದ (ಮೊದಲ ವಾಣಿಜ್ಯ ಸಂಚಾರ ಆರಂಭದಿಂದ) 2026 ಮೇ ತಿಂಗಳವರೆಗೆ ಹತ್ತು ತಿಂಗಳಲ್ಲಿ ಬರೋಬ್ಬರಿ 2,10,842 ಮಂದಿ ಸಂಚಾರ ಮಾಡಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ.
ಬೆಳಗಾವಿ-ಬೆಂಗಳೂರು ದಿಕ್ಕಿನ ಸಂಚಾರ ವಿವರ
ವಿಶೇಷವೆಂದರೆ ಹುಬ್ಬಳ್ಳಿ ಮತ್ತು ಬೆಂಗಳೂರು ನಡುವೆ ಅತ್ಯಧಿಕ 24,187 ಮಂದಿ ಪ್ರಯಾಣಿಕರು ಸಂಚಾರ ಮಾಡಿದ್ದಾರೆ. ಇದರಲ್ಲಿ ಬೆಳಗಾವಿಯಿಂದ ಬೆಂಗಳೂರಿಗೆ ತೆರಳಿದವರ ಸಂಖ್ಯೆ 20,379. ಇನ್ನೂ ಧಾರವಾಡ-ಬೆಂಗಳೂರು ಮಧ್ಯೆ 14,143 ಮಂದಿ ಪ್ರಯಾಣಿಕರು ಓಡಾಡಿದರೆ, 9706 ಪ್ರಯಾಣಿಕರು ದಾವಣಗೆರೆ-ಬೆಂಗಳೂರು ನಡುವೆ ಸಂಚಾರ ಮಾಡಿದ್ದಾರೆ.
ಬೆಂಗಳೂರು-ಹುಬ್ಬಳ್ಳಿ ದಿಕ್ಕಿನ ಸಂಚಾರ ಮಾಹಿತಿ
ಅದೇ ರೀತಿ ಯಶವಂತಪುರ-ಹುಬ್ಬಳ್ಳಿಗೆ 3054 ಪ್ರಯಾಣಿಕರು, ಹುಬ್ಬಳ್ಳಿ ಮತ್ತು ದಾವಣಗೆರೆ ಮಧ್ಯ 2996, ಬೆಳಗಾವಿ-ದಾವಣಗೆರೆ 2394, ಬೆಳಗಾವಿ-ಯಶವಂತಪುರ ಮಧ್ಯೆ 2150 ಮಂದಿ ಪ್ರಯಾಣಿಸಿದ್ದಾರೆ. ಅದೇ ರೀತಿ ಹಾವೇರಿ ಮತ್ತು ಬೆಂಗಳೂರು ಮಧ್ಯೆ 2552 ಮಂದಿ, ದಾವಣಗೆರೆ-ಯಶವಂತಪುರವರೆಗೆ 2896 ಜನರು ಹಾಗೂ ದಾವಣಗೆರೆ-ಯಶವಂತಪುರ ನಿಲ್ದಾಣವರೆಗೆ ಬರೋಬ್ಬರಿ 2896 ಮಂದಿ ಸಂಚಾರ ಮಾಡಿದ್ದಾರೆ ಎಂದು ಆರ್ಟಿಐ ನಲ್ಲಿ ರೈಲ್ವೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ಒಟ್ಟಾರೆಯಾಗಿ ಬೆಂಗಳೂರು-ಬೆಳಗಾವಿ- ಮಧ್ಯೆ ಅಂದರೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಆರಂಭದ ನಿಲ್ದಾಣದಿಂದ ಅಂತಿಮ ನಿಲ್ದಾಣದವರೆಗೆ 1,19,052 ಮಂದಿ ಪ್ರಯಾಣಿಕರು ಸಂಚಾರ ಮಾಡಿದ್ದಾರೆ. ವಂದೇ ಭಾರತ್ ರೈಲಿನಲ್ಲಿ ಹೆಚ್ಚು ಸಂಚಾರ ಮಾಡುವ ಮೂಲಕ ಈ ಭಾಗದ ಜನರು ರೈಲ್ವೆ ಇಲಾಖೆಗೆ ಅಭಿನಂದನೆ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಮಾರ್ಗದ ಎರಡು ದಿಕ್ಕಿನಲ್ಲಿ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಗಳು ಇವೆ. ಅದರಲ್ಲೂ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ದಾವಣಗೆರೆ ಮಾರ್ಗದಲ್ಲಿ ಜನ ಸಂಚಾರ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.













Click it and Unblock the Notifications