Viral: 31 ಕಿ.ಮೀಗೆ 2.5 ಗಂಟೆ! ಬೆಂಗಳೂರು ಟ್ರಾಫಿಕ್ ವಿರುದ್ಧ ಇನ್ಫೋಸಿಸ್ ಸಹ-ಸಂಸ್ಥಾಪಕ ಕೃಷ್ ಗೋಪಾಲಕೃಷ್ಣನ್ ಆಕ್ರೋಶ
ಬೆಂಗಳೂರು: ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಬರುವಂತೆ ಕಾಣುತ್ತಿಲ್ಲ. ಹೆಚ್ಚುತ್ತಿರುವ ಸಂಚಾರ ದಟ್ಟಣೆ ಜನರ ತಾಳ್ಮೆಯನ್ನು ಪರೀಕ್ಷಿಸುತ್ತಿದೆ. ನಿತ್ಯ ಪ್ರಯಾಣಿಕರು, ಸವಾರರು ಗಂಟೆಗಟ್ಟಲೇ ಟ್ರಾಫಿಕ್ ರಸ್ತೆಗಳಲ್ಲಿ ನಿಧಾನವಾಗಿ ತೆವಳುತ್ತಾ ಸಾಗಬೇಕಾದ ಸ್ಥಿತಿ ಇದೆ. ಇಂತಹ ಅನೇಕ ಘಟನೆಗಳು ಈಗಾಗಲೇ ವರದಿ ಆಗಿವೆ ಇದೀಗ ಅಂತದ್ದೇ ಕಹಿ ಅನುಭವವನ್ನು ಇನ್ಫೋಸಿಸ್ ಸಹ-ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಅನುಭವಿಸಿದ್ದಾರೆ. ಆ ಬಗೆಗಿನ ಮಾಹಿತಿಯನ್ನು ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಟ್ರಾಫಿಕ್ನಲ್ಲಿ ನಿತ್ಯ ಲಕ್ಷಾಂತರ ಸಿಲುಕುತ್ತಾರೆ. ಆಮೇಲೆ ಹತಾಶ ಭಾವನೆ ವ್ಯಕ್ತಪಡಿಸುತ್ತಾರೆ. ಅದೆಷ್ಟೋ ಸಮಸ್ಯೆ ತಂದೊಡ್ಡಿದರೂ ಅನಿವಾರ್ಯವೆಂಬ ಒಂದು ಕಾರಣಕ್ಕೆ ಜನರು ಗಂಟೆಗಟ್ಟಲೇ ಟ್ರಾಫಿಕ್ನಲ್ಲಿ ಕಳೆಯುವುದನ್ನು ರೂಢಿ ಮಾಡಿಕೊಂಡು ಬಿಟ್ಟಿದ್ದಾರೆ ಎನ್ನಬಹುದು. ಸಭೆ, ಸಮಾರಂಭ, ತುರ್ತು ಸನ್ನಿವೇಶ, ವಿಮಾನ ನಿಲ್ದಾಣಕ್ಕೆ ತೆರಳುವ ಸಂದರ್ಭದಲ್ಲಿ ಈ ಮಿತಿ ಮೀರಿ ಟ್ರಾಫಿಕ್ ತಲೆನೋವಾಗಿ ಬಿಡುತ್ತದೆ.

31 ಕಿಮೀ ಸಂಚಾರಕ್ಕೆ ಬೇಕು 2.5ಗಂಟೆ!
ಇಂಥದ್ದೇ ಪರಿಸ್ಥಿತಿಯನ್ನು ಇನ್ಫೋಸಿಸ್ ಸಹ-ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಎದುರಿಸಿದ್ದು, ಅವರು ಕೇವಲ 31 ಕಿಲೋ ಮೀಟರ್ ಪ್ರಯಾಣವನ್ನು ಕ್ರಮಿಸುವ ಬರೋಬ್ಬರಿ 2.5ಗಂಟೆ ತೆಗೆದುಕೊಂಡಿದ್ದಾರೆ. ಈ ಮಾಹಿತಿಯನ್ನು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಬೆಂಗಳೂರಿನ ಸಂಚಾರ ದಟ್ಟಣೆಯ ಸಮಸ್ಯೆ ಕುರಿತು ಬೆಳಕು ಚೆಲ್ಲಿದ್ದಾರೆ. ನಗರದಲ್ಲಿ ಸುಗಮ ಸಾರಿಗೆ ಸಂಚಾರವಿಲ್ಲ ಎಂದು ಅವರು ಬೇಸರ ಹೊರ ಹಾಕಿದ್ದಾರೆ. ಇದು 'ಬರೀ ಸಂಚಾರ ಸಮಸ್ಯೆ ಮಾತ್ರವಲ್ಲದೇ, ಕಳಪೆ ರಸ್ತೆಗಳು ಸಂಚಾರವನ್ನು ಮತ್ತಷ್ಟು ನಿಧಾನಗೊಳಿಸುತ್ತವೆ, ಕಳಪೆ ಶಿಸ್ತು' ಎಂದು ಅವರು ಆರೋಪಿಸಿದ್ದಾರೆ.
ಇಂಟರ್ನೆಟ್ನಲ್ಲಿ ಟ್ರಾಫಿಕ್ನದ್ದೆ ಚರ್ಚೆ
ಪೋಸ್ಟ್ ಮಾಡಿದ ಕೆಲವೇ ಹೊತ್ತಿನಲ್ಲಿ ಈ ವಿಷಯ ಇಂಟರ್ನೆಟ್ನಲ್ಲಿ ಹೆಚ್ಚು ಚರ್ಚೆಯಾಗಿದೆ. ನೋಡ ನೋಡುತ್ತಿದ್ದಂತೆ ವೈರಲ್ ಆಗಿದೆ. 'ಬೆಂಗಳೂರಿನಲ್ಲಿ ನಿತ್ಯವು ಬಹುತೇಕರು ಇದೇರೀತಿಯ ವಿಳಂಬ ಸಂಚಾರ, ರಸ್ತೆ ಸಮಸ್ಯೆ ಅನುಭವಿಸುತ್ತೇವೆ' ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ತಾವು ದೂರ ಪ್ರಯಾಣಿಸುವಾಗ ಆಗುವ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಒಬ್ಬ ಬಳಕೆದಾರರು 'ಬೆಂಗಳೂರಿನ ಸಂಚಾರ ಇತ್ತೀಚೆಗೆ ದುಃಸ್ವಪ್ನವಾಗಿ ಬದಲಾಗುತ್ತಿದೆ. ಕಳೆದ ವಾರ ನನ್ನ 28 ಕಿಮೀ ಪ್ರಯಾಣವು 3 ಗಂಟೆಗಳನ್ನು ತೆಗೆದುಕೊಂಡಿತು' ಎಂದು ಹೇಳಿದ್ದಾರೆ. ಮತ್ತೊಬ್ಬರು 'ನಗರದ ಮೂಲಸೌಕರ್ಯ ಸುಧಾರಿಸುವವರೆಗೆ ಮತ್ತು ಸಂಚಾರ ನಿರ್ವಹಣೆ ಹೆಚ್ಚು ಪರಿಣಾಮಕಾರಿ ಆಗುವವರಿಗೆ ಕಂಪನಿಗಳು ವರ್ಕ್ ಫ್ರಂ ಹೋಮ್ನಂತಹ ವ್ಯವಸ್ಥೆ ಜಾರಿಗೆ ತರಬೇಕು' ಕೆಲವರು ಒತ್ತಾಯಿಸಿದ್ದಾರೆ.
ಕೆಲವರು ಸಾರ್ವಜನಿಕ ಸಾರಿಗೆ ಹೆಚ್ಚಾಗಿ ಬಳಸಬೇಕೆಂದು ಕರೆ ನೀಡಿದರು. ಇದರಿಂದ ಬಸ್, ಮೆಟ್ರೋ ಸಂಚಾರ ಹೆಚ್ಚಾಗಿ ನಮ್ಮ ಸಮಯ ಉಳಿಯುತ್ತದೆ. ದೀರ್ಘಾವಧಿಯಲ್ಲಿ ದಟ್ಟಣೆ ಕಡಿಮೆಯಾಗುತ್ತದೆ. ನಾವು ದಟ್ಟಣೆಯಲ್ಲಿ ಕಳೆಯುವುದು ತಪ್ಪುತದೆ ಎಂದು ಹೇಳಿದರು. ಸಾರ್ವಜನಿಕ ಸಾರಿಗೆಯನ್ನು ವಾರಾಂತ್ಯದಲ್ಲಿ ಹೆಚ್ಚು ಬಳಸಲು ಮುಂದಾಗಬೇಕು. ಖಾಸಗಿ ವಾಹನಗಳು ರಸ್ತೆಗೆ ಇಳಿಸುವುದನ್ನು ಆದಷ್ಟು ಬಿಡಬೇಕೆಂದು ಮತ್ತೊಬ್ಬರು ಹೇಳಿದರು.
31 km took 2 1/2 hours today. It is only becoming worse. Traffic, condition of roads, and poor discipline
— kris gopalakrishnan (@kris_sg) July 4, 2026
ಬೆಂಗಳೂರು ಈ ವಿಚಾರದಲ್ಲಿ ಹೆಣಗಾಡುತ್ತಿದೆ!
ಬೆಂಗಳೂರು ದೇಶದ ತಂತ್ರಜ್ಞಾನ ಕೇಂದ್ರವಾಗಿ ಉಳಿದಿದೆ. ಆದರೆ ರಸ್ತೆ, ಸಾರಿಗೆ ಮೂಲಸೌಕರ್ಯ ವಿಚಾರದಲ್ಲಿ ಉತ್ತಮ ನಗರವೆಂಬ ಹೆಸರು ಉಳಿಸಿಕೊಳ್ಳುವಲ್ಲಿ ಹೆಣಗಾಡುತ್ತಿದೆ. ಲಕ್ಷಾಂತರ ದೈನಂದಿನ ಪ್ರಯಾಣಿಕರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ರಸ್ತೆ ಮತ್ತು ಮೆಟ್ರೋ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕಿದೆ. ರಸ್ತೆಗಳು ಗುಂಡಿ ಮುಕ್ತವಾಗಿಸಬೇಕು, ರಸ್ತೆ ಯೋಜನೆಗಳನ್ನು ತ್ವರಿತ ಮುಗಿಸುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಳ್ಳಬೇಕೆಂದು ಅನೇಕರು ಒತ್ತಾಯಿಸಿದ್ದಾರೆ.













Click it and Unblock the Notifications