Get Updates
Get notified of breaking news, exclusive insights, and must-see stories!

ಚಾಮರಾನಗರದ ಆಕ್ಸಿಜನ್ ದುರಂತದಲ್ಲಿ ಸತ್ತ 36 ಜನರಲ್ಲಿ ಒಬ್ಬನಾದರೂ ಯಡಿಯೂರಪ್ಪ ಅಭಿಮಾನಿ ಆಗಿರಬೇಕಿತ್ತು!

ಬೆಂಗಳೂರು, ಜು. 30: ಚಾಮರಾಜನಗರದಲ್ಲಿ ನಡೆದಿದ್ದ ಆಕ್ಸಿಜನ್ ದುರಂತದಲ್ಲಿ ಜೀವ ತೆತ್ತವರಲ್ಲಿ ಒಬ್ಬರಾದರೂ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನಿಯಾಗಿರಬಾರದಿತ್ತೆ? ಎಂಬ ಚರ್ಚೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಈಗ ಶುರುವಾಗಿದೆ. ಅಲ್ಲಿನ ಜನರು ಹಾಗೆ ಮಾತನಾಡಿಕೊಳ್ಳುತ್ತಿರುವುದಕ್ಕೆ ಪ್ರಬಲವಾದ ಕಾರಣವೂ ಇದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರವಿದ್ದಾಗ ಒಂದು ರೀತಿ, ಅಧಿಕಾರ ಕಳೆದುಕೊಂಡ ಬಳಿಕ ಮತ್ತೊಂದು ರೀತಿ ನಡೆದುಕೊಳ್ಳುತ್ತಾರಾ? ಹೌದು ಅಂಥದ್ದೊಂದು ಚರ್ಚೆಯೂ ಇದೀಗ ರಾಜ್ಯದಲ್ಲಿ ಆರಂಭವಾಗಿದೆ. ಅದಕ್ಕೆ ಕಾರಣವಾಗಿರುವುದು ಕೂಡ ಅವರ ನಡೆ ಎಂಬ ಆರೋಪವೂ ಕೇಳಿ ಬಂದಿದೆ.

ಇದೀಗ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬಿಜೆಪಿ ಹೈಕಮಾಂಡ್ ಬದಲಾವಣೆ ಮಾಡಿದೆ. ಆಡಳಿತದ ದೃಷ್ಟಿಯಿಂದ ಅವರನ್ನು ಬದಲಾವಣೆ ಮಾಡಲಾಗಿದೆ ಎಂಬ ಮಾಹಿತಿ ದೆಹಲಿ ಬಿಜೆಪಿ ಹೈಕಮಾಂಡ್ ವಲಯದಲ್ಲಿದೆ. ಅದಕ್ಕೆ ಪುಷ್ಟಿ ಎಂಬಂತೆ ಬಿಜೆಪಿಯ ಹಿರಿಯ ಶಾಸಕರೇ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವ ಮೂಲಕ ರಾಜ್ಯದಲ್ಲಿ ಆಡಳಿತ ಸುಧಾರಣೆ ಮಾಡಬೇಕು ಎಂದು ಹೈಕಮಾಂಡ್‌ಗೆ ಮನವಿ ಮಾಡಿಕೊಂಡಿದ್ದರು.

ಇದೀಗ ಅಧಿಕಾರ ಹೋದ ಬಳಿಕ ಚಾಮರಾಜನಗರಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಇಂದು ಭೇಟಿ ಕೊಡುತ್ತಿದ್ದಾರೆ. ಯಡಿಯೂರಪ್ಪ ಅವರ ಈ ಭೇಟಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಮಾಜಿ ಮುಖ್ಯಮಂತ್ರಿ ಚಾಮರಾಜನಗರಕ್ಕೆ ಹೋಗುತ್ತಿರುವುದು ಯಾಕೆ? ಅವರ ಭೇಟಿಗೆ ಅಲ್ಲಿನ ಜನರು ವಿರೋಧ ಮಾಡುತ್ತಿರುವುದು ಯಾಕೆ? ಮುಂದಿದೆ ಮಾಹಿತಿ.

ಸಾವಿನ ಹೊಣೆ ಹೊರದ ಸರ್ಕಾರ!

ಸಾವಿನ ಹೊಣೆ ಹೊರದ ಸರ್ಕಾರ!

ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆ ಉಂಟಾಗಿ 36 ಮಂದಿ ಕೋವಿಡ್ ರೋಗಿಗಳು ಮೃತಪಟ್ಟ ಘಟನೆ ನಡೆದಿತ್ತು. ಆ ಘಟನೆಯಲ್ಲಿ ತಪ್ಪಿತಸ್ಥರಾಗಿದ್ದವರ ಮೇಲೆ ಈ ವರೆಗೂ ರಾಜ್ಯ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮೃತ ಕುಟುಂಬಗಳಿಗೆ ಸಾಂತ್ವನ ಹೇಳುವುದು ಹೋಗಲಿ, ಆ ಸಾವುಗಳಿಗೆ ಸೂಕ್ತ ನ್ಯಾಯ ಕೊಡಿಸುವುದನ್ನೂ ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಡಲಿಲ್ಲ ಎಂಬ ಆರೋಪವಿದೆ. ಜೊತೆಗೆ ಚಾಮರಾಜನಗರಕ್ಕೆ ತೆರಳಿ ತಮ್ಮ ಸರ್ಕಾರದ ತಪ್ಪಿನಿಂದ ಆಕ್ಸಿಜೆನ್ ಕೊರತೆಯಾಗಿ ಮೃತಪಟ್ಟಿದ್ದ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡುವ ಸೌಜನ್ಯವನ್ನೂ ಬಿ.ಎಸ್. ಯಡಿಯೂರಪ್ಪ ಅಥವಾ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್. ಸುರೇಶ್ ಕುಮಾರ್ ಅವರು ತೋರಿಸಿರಲಿಲ್ಲ. ಆದರೆ ಈಗ ಅವರ ಪರಿಸ್ಥಿತಿ ಬದಲಾಗಿದೆ. ಸದ್ಯಕ್ಕೆ ಇಬ್ಬರೂ ನಾಯಕರು ಅಧಿಕಾರ ಕಳೆದುಕೊಂಡು ಮಾಜಿಗಳಾಗಿದ್ದಾರೆ.

ಯಡಿಯೂರಪ್ಪ ಭೇಟಿಗೆ ಆಕ್ರೋಶ!

ಯಡಿಯೂರಪ್ಪ ಭೇಟಿಗೆ ಆಕ್ರೋಶ!

'ಈಗ ಅಧಿಕಾರ ಕಳೆದುಕೊಂಡ ತಕ್ಷಣ ಅವರ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಕಾರಣಕ್ಕೆ ಆತನ ಮನೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಲು ಜಿಲ್ಲೆಗೆ ಆಗಮಿಸಿದ್ದಾರೆ' ಎಂಬ ಕಾರಣಕ್ಕೆ ಇಡೀ ಚಾಮರಾಜನಗರ ಜಿಲ್ಲೆಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ ಮಾರನೆಯ ದಿನ ಅಂದರೆ ಜು. 27 ರಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ರವಿ ಎಂಬ ಯುವಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಬಿ.ಎಸ್. ಯಡಿಯೂರಪ್ಪ ಅವರ ಕಟ್ಟಾ ಅಭಿಮಾನಿಯಾಗಿದ್ದ ಆತ, ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದರಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿತ್ತು.

ದೂರವಾಣಿ ಮೂಲಕ ಯಡಿಯೂರಪ್ಪ ಭರವಸೆ

ದೂರವಾಣಿ ಮೂಲಕ ಯಡಿಯೂರಪ್ಪ ಭರವಸೆ

ಈ ವಿಷಯ ತಿಳಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಕ್ಷಣ ಟ್ವಿಟರ್‌ನಲ್ಲಿ ಆತನ ಸಾವಿಗೆ ಸಾಂತ್ವನ ಹೇಳಿದ್ದರು. ಜೊತೆಗೆ ಯಡಿಯೂರಪ್ಪ ಆಪ್ತ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾ.ಪು. ಸಿದ್ದಲಿಂಗಸ್ವಾಮಿ ಮೃತನ ಮನೆಗೆ ಅಂದು ಭೇಟಿ ನೀಡಿದ್ದರು. ಯಡಿಯೂರಪ್ಪನವರಿಗೆ ದೂರವಾಣಿ ಕರೆ ಮಾಡಿ, ಸ್ಪೀಕರ್ ಫೋನ್ ಆನ್ ಮಾಡಿ ಕುಟುಂಬದವರೊಂದಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದರು. ಆಗ ಕುಟುಂಬಸ್ಥರೊಂದಿಗೆ ಮಾತನಾಡಿದ್ದ ಯಡಿಯೂರಪ್ಪ, "ಈ ಘಟನೆ ದುರದೃಷ್ಟಕರ. ನಾನು ಶೀಘ್ರವೇ ನಿಮ್ಮ ಮನೆಗೆ ಭೇಟಿ ನೀಡುತ್ತೇನೆ" ಎಂದು ಭರವಸೆ ನೀಡಿದ್ದರು. ಜೊತೆಗೆ ಇಂತಹ ಕೆಲಸವನ್ನು ಯಾರೂ ಮಾಡಿಕೊಳ್ಳಬಾರದು ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು.

ಮಾತು ಕೊಟ್ಟಂತೆ ಅಭಿಮಾನಿ ಮನೆಗೆ ಯಡಿಯೂರಪ್ಪ

ಮಾತು ಕೊಟ್ಟಂತೆ ಅಭಿಮಾನಿ ಮನೆಗೆ ಯಡಿಯೂರಪ್ಪ

ಕೊಟ್ಟ ಮಾತು ಉಳಿಸಿಕೊಳ್ಳುವುದಕ್ಕೆ ಹೆಸರಾಗಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಇವತ್ತು ಗುರುವಾರ ಹೆಲಿಕಾಪ್ಟರ್ ಮೂಲಕ ಗುಂಡ್ಲುಪೇಟೆಗೆ ಆಗಮಿಸಿದ್ದಾರೆ. ಕೆಲ ಹೊತ್ತಿನಲ್ಲಿ ಬೊಮ್ಮಲಾಪುರದ ಮೃತನ ಮನೆಗೆ ಭೇಟಿ ನೀಡುತ್ತಿದ್ದಾರೆ. ಜೊತೆಯಲ್ಲಿ ಅವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಸಹ ಆಗಮಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸುರೇಶ್ ಕುಮಾರ್ ಅವರು ಆಕ್ಸಿಜನ್ ದುರಂತದಲ್ಲಿ ಮಡಿದ 36 ಮಂದಿಯ ಮನೆಯಲ್ಲಿ ಒಬ್ಬರ ಮನೆಗೂ ಸೌಜನ್ಯದ ಭೇಟಿ ನೀಡಿಲಿಲ್ಲ. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೃತರ ಮನೆಗಳಿಗೆ ತೆರಳಿ ತಲಾ 1 ಲಕ್ಷ ರೂ. ಪರಿಹಾರವನ್ನೂ ವಿತರಿಸಿದ್ದರು. ಆಕ್ಸಿಜನ್ ದುರಂತ ಸಂತ್ರಸ್ತರ ಮನೆಗಳಿಗೆ ಹೋಗದ ಮಾಜಿ ಸಚಿವ ಸುರೇಶ್‌ಕುಮಾರ್ ನಿನ್ನೆ ಬುಧವಾರ ರಾತ್ರಿ ಬೊಮ್ಮಲಾಪುರದ ರವಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು.

Recommended Video

    ವಿಜೇತ ಟ್ವೀಟ್ ಗೆ ಸ್ವಾಗತ ಕೋರಿದ HDK | Oneindia Kannada
    ನಮಗೆ ತೀವ್ರ ನೋವಾಗಿದೆ ಎಂದ ಸಂತ್ರಸ್ತರು

    ನಮಗೆ ತೀವ್ರ ನೋವಾಗಿದೆ ಎಂದ ಸಂತ್ರಸ್ತರು

    ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರ ಈ ನಡೆ, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಜಿಲ್ಲೆಯ ಹಲವರಲ್ಲಿ ತೀವ್ರ ಅಸಮಾಧಾನ, ಆಕ್ರೋಶಕ್ಕೆ ಕಾರಣವಾಗಿದೆ. ಆಕ್ಸಿಜನ್ ದುರಂತದಲ್ಲಿ ಮೃತಪಟ್ಟಿದ್ದ ಬಿಸಲವಾಡಿಯ ಸಿದ್ದರಾಜ ನಾಯಕ ಎಂಬುವರ ಪತ್ನಿ ಜ್ಯೋತಿ ಎಂಬುವರು "ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ, 36 ಜನರು ಮೃತಪಟ್ಟರೂ, ಸೌಜನ್ಯಕ್ಕೂ ಭೇಟಿ ನೀಡಿ ನಮಗೆ ಸಾಂತ್ವನ ಹೇಳಲಿಲ್ಲ. ಸೂಕ್ತ ಪರಿಹಾರ ಸಹ ಕೊಡಲಿಲ್ಲ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೂ ಮುಂದಾಗಲಿಲ್ಲ. ಈಗ ಅವರ ಅಭಿಮಾನಿಯೋಬ್ಬರ ಆತ್ಮಹತ್ಯೆಗೆ ಸ್ಪಂದಿಸಿ ಭೇಟಿ ನೀಡುತ್ತಿದ್ದಾರೆ. ಇದನ್ನು ಕೇಳಿ ನಮ್ಮ ಮನಸ್ಸಿಗೆ ತೀವ್ರ ನೋವಾಯಿತು" ಎಂದು ಅಳಲು ತೋಡಿ ಕೊಂಡಿದ್ದಾರೆ.

    ಇದೇ ವಿಷಯ ಮುಂದಿಟ್ಟುಕೊಂಡು ಹಲವರು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡುತ್ತಿದ್ದಾರೆ. ಆಕ್ಸಿಜನ್ ದುರಂತದಲ್ಲಿ ಮಡಿದವರು ಮನುಷ್ಯರಲ್ಲವೇ? ಕೇವಲ ಅಭಿಮಾನಿಗಳ ಮನೆಗೆ ಮಾತ್ರ ಇವರು ಭೇಟಿ ನೀಡುತ್ತಾರಾ? ಎಂದು ಪ್ರಶ್ನಿಸುತ್ತಿದ್ದಾರೆ. ಇದೇ ವಿಷಯವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಸಹ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸುರೇಶ್‌ಕುಮಾರ್ ಅವರನ್ನು ಟೀಕಿಸಿದ್ದಾರೆ.

    More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+