ಇ-ಆಫೀಸ್ ವ್ಯವಸ್ಥೆ ಜಾರಿ ಮಾಡದ ಕುಲಪತಿಗಳಿಗೆ ಡಿಸಿಎಂ ಖಡಕ್ ಕ್ಲಾಸ್!
ಬೆಂಗಳೂರು, ಡಿ. 21: ಉನ್ನತ ಶಿಕ್ಷಣವನ್ನು ಮತ್ತಷ್ಟು ಉತ್ತಮಗೊಳಿಸುವ ಹಾಗೂ ವಿಶ್ವವಿದ್ಯಾಲಯಗಳ ಆಡಳಿತಕ್ಕೆ ವೇಗ ಕೊಟ್ಟು ಪಾರದರ್ಶಕಗೊಳಿಸುವ ಇ-ಆಫೀಸ್ ವ್ಯವಸ್ಥೆಯನ್ನು ಇನ್ನೂ ಜಾರಿ ಮಾಡದ ವಿವಿಗಳ ಕುಲಪತಿಗಳ ಕಾರ್ಯವೈಖರಿ ಬಗ್ಗೆ ಉನ್ನತ ಶಿಕ್ಷಣ ಖಾತೆ ಸಚಿವ, ಡಿಸಿಎಂ ಡಾ.ಸಿ.ಎನ್. ಅಶ್ವಥ್ ನಾರಾಯಣ ಅವರು ತೀವ್ರ ಅಸಮಾಧಾನ ವ್ಯಕ್ತಡಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸರಕಾರಿ ಸ್ವಾಮ್ಯದ 22 ವಿವಿಗಳ ಕುಲಪತಿಗಳ ಜತೆ ವರ್ಚುಯಲ್ ಸಂವಾದ ನಡೆಸಿದ ಡಿಸಿಎಂ, ವಿವಿಗಳ ಆಡಳಿತದಲ್ಲಿ ಪಾರದರ್ಶಕತೆ ತರುವುದರ ಜತೆಗೆ ಜನರಿಗೆ ಉತ್ತರದಾಯಿತ್ವವಾಗಿರಲು ಇ-ಆಫೀಸ್ ವ್ಯವಸ್ಥೆಯನ್ನು ರೂಪಿಸಲಾಗಿದೆ. ಕೆಲ ವಿವಿಗಳು ಮಾತ್ರ ಈ ವ್ಯವಸ್ಥೆಯನ್ನು ಸ್ವಲ್ಪಮಟ್ಟಿಗೆ ಮಾತ್ರ ಜಾರಿ ಮಾಡಿದ್ದು, ಇನ್ನು ಕೆಲ ವಿವಿಗಳು ಇನ್ನೂ ಜಾರಿ ಮಾಡಿಲ್ಲ. ಇದು ಖಂಡಿತಾ ಸರಿಯಲ್ಲ ಎಂದರು.
ಇ-ಆಫೀಸ್ ಜಾರಿಯಾಗಬೇಕು
ಜನವರಿ 1ರಿಂದ ಎಲ್ಲ ವಿವಿಗಳಲ್ಲೂ ಇ-ಆಫೀಸ್ ಜಾರಿಯಾಗಲೇಬೇಕು. ಈಗಾಗಲೇ ನನ್ನ ಕಚೇರಿ, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಸೇರಿದಂತೆ ಉನ್ನತ ಶಿಕ್ಷಣ ವ್ಯಾಪ್ತಿಯಲ್ಲಿವ ಎಲ್ಲ ಕಚೇರಿಗಳಲ್ಲೂ ಈ ವ್ಯವಸ್ಥೆ ಜಾರಿಗೆ ಬಂದಿದೆ. ಹೀಗಾಗಿ ಹೊಸ ವರ್ಷದ ಮೊದಲ ದಿನದಿಂದಲೇ ಸರಕಾರ ಮತ್ತು ವಿಶ್ವವಿದ್ಯಾಲಯಗಳ ನಡುವಿನ ಎಲ್ಲ ವ್ಯಹಹಾರವು ಆನ್ಲೈನ್ ಮೂಲಕವೇ ನಡೆಯಲಿದೆ. ಪತ್ರ ವ್ಯವಹಾರ ಅಥವಾ ಕಡತ ರವಾನೆಗೆ ಅವಕಾಶವೇ ಇರುವುದಿಲ್ಲ ಎಂದು ಡಾ. ಅಶ್ವಥ್ ನಾರಾಯಣ ಸ್ಪಷ್ಟವಾಗಿ ಹೇಳಿದರು.
ಐಟಿಐ ತರಬೇತಿ ಪರೀಕ್ಷೆ ಕುರಿತು ಸರ್ಕಾರದ ಮಹತ್ವದ ತೀರ್ಮಾನ!
ನಾನೇ ಬರುತ್ತೇನೆ
ಇ-ಆಫೀಸ್ ಅನ್ನು ಎಲ್ಲ ವಿಶ್ವವಿದ್ಯಾಲಯಗಳು ಇನ್ನೂ ಮಾಡುತ್ತಿಲ್ಲ. ಈ ಬಗ್ಗೆ ನಿರ್ಲಕ್ಷ್ಯ ತಾಳಿದರೆ ಸಹಿಸುವ ಪ್ರಶ್ನೆಯೇ ಇಲ್ಲ. ಜನವರಿ ಒಂದರಿಂದಲೇ ಇದೆಲ್ಲ ಸಾಧ್ಯವಾಗಬೇಕು. ಒಂದು ವೇಳೆ ತಪ್ಪಿದರೆ ನಾನೇ ಖುದ್ದು ವಿಶ್ವವಿದ್ಯಾಲಯಗಳು ಬಂದು ಮಾಡಿಸಬೇಕಾಗುತ್ತದೆ ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರು ಎಚ್ಚರಿಕೆ ನೀಡಿದರು.
ಮೂರು ದಿನ ಗಡುವು
ಇ-ಆಡಳಿತ ಇಲಾಖೆ ಮತ್ತು ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಅತ್ಯಂತ ವೈಜ್ಞಾನಿಕವಾಗಿ ರೂಪಿಸಿರುವ ಏಕೀಕೃತ ವಿಶ್ವವಿದ್ಯಾಲಯ ಹಾಗೂ ಕಾಲೇಜು ನಿರ್ವಹಣಾ ವ್ಯವಸ್ಥೆಯನ್ನು ಎಲ್ಲ ವಿವಿಗಳಲ್ಲೂ ಕಡ್ಡಾಯವಾಗಿ ಜಾರಿಯಾಗಲೇಬೇಕು. ಇದರ ಬಗ್ಗೆ ಅಧ್ಯಯನ ಮಾಡಲು ವಿವಿಧ ಕುಲಪತಿಗಳ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿಗಳು ಆಯಾ ಮಾಡ್ಯೂಲ್ಸ್ʼಗೆ ಸಂಬಂಧಿಸಿದಂತೆ ಮೂರು ದಿನಗಳಲ್ಲಿ ವರದಿಗಳನ್ನು ತಪ್ಪದೇ ನೀಡಬೇಕು ಎಂದು ಡಿಸಿಎಂ ಅವರು ಸಂಬಂಧಿತ ಕುಲಪತಿಗಳಿಗೆ ಗಡುವು ವಿಧಿಸಿದರು.
ಕ್ರಾಂತಿಕಾರಕ ಬದಲಾವಣೆ
ಈ ವ್ಯವಸ್ಥೆಯಿಂದ ವಿವಿಗಳ ಆಡಳಿತದಲ್ಲಿ ಕ್ರಾಂತಿಕಾರಕ ಬದಲಾವಣೆ ಆಗುತ್ತದೆ. ಈ ನಿಟ್ಟಿನಲ್ಲಿ ಹೊಸ ಕೋರ್ಸುಗಳಿಗೆ ಅನುಮತಿ ನೀಡುವುದು, ಹೊಸ ಕಾಲೇಜುಗಳಿಗೆ ಮಂಜೂರಾತಿ ಸೇರಿದಂತೆ ಎಲ್ಲ ಆಡಳಿತಾತ್ಮಕ ಕೆಲಸಗಳೆಲ್ಲವೂ ಈ ಮೂಲಕವೇ ನಡೆಯಬೇಕು ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ್ ಅವರು ತಾಕೀತು ಮಾಡಿದರು. ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ ನಾಯಕ್, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್ ಭಾಗಿಯಾಗಿದ್ದರು.