ರೋಹಿಣಿ ಸಿಂಧೂರಿ ಸಹಾಯದೊಂದಿಗೆ ಬೆಂಗಳೂರಿನ ಆಸ್ತಿ ಅತಿಕ್ರಮಣ: ಐಎಎಸ್ ಅಧಿಕಾರಿ ಪತಿ ವಿರುದ್ಧ ಗಾಯಕ ಲಕ್ಕಿ ಅಲಿ ಆರೋಪ
ಬೆಂಗಳೂರು, ಡಿಸೆಂಬರ್ 5: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನೆರವಿನೊಂದಿಗೆ ತಮಗೆ ಸೇರಿದ ಬೆಂಗಳೂರಿನ ಆಸ್ತಿಯನ್ನು ಭೂ ಮಾಫಿಯಾ 'ಅಕ್ರಮವಾಗಿ ಅತಿಕ್ರಮಿಸಿದೆ' ಎಂದು ಗಾಯಕ ಲಕ್ಕಿ ಅಲಿ ಗಂಭೀರ ಆರೋಪ ಮಾಡಿದ್ದಾರೆ. ಆದರೆ, ರೋಹಿಣಿ ಸಿಂಧೂರಿ ಈ ಆರೋಪವನ್ನು ಅವರು ನಿರಾಕರಿಸಿದ್ದಾರೆ.
ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿದ ಲಕ್ಕಿ ಅಲಿ
ಭಾನುವಾರ ಮಾಡಿರುವ ಸರಣಿ ಟ್ವೀಟ್ಗಳಲ್ಲಿ ಐಎಎಸ್ ಅಧಿಕಾರಿ ಹಾಗೂ ಅವರ ಪತಿ ವಿರುದ್ಧ ಲಕ್ಕಿ ಅಲಿ ಆರೋಪ ಮಾಡಿದ್ದಾರೆ.
'ಬೆಂಗಳೂರು ಭೂ ಮಾಫಿಯಾದಲ್ಲಿ ಸಕ್ರಿಯರಾಗಿರುವ ಸುಧೀರ್ ರೆಡ್ಡಿ ಮತ್ತು ಮಧು ರೆಡ್ಡಿ ಅವರು ನನ್ನ ಟ್ರಸ್ಟ್ ಜಮೀನನ್ನು ಅಕ್ರಮವಾಗಿ ಅತಿಕ್ರಮಣ ಮಾಡಿಕೊಂಡಿದ್ದಾರೆ. ತಮ್ಮ ಪತ್ನಿ ರೋಹಿಣಿ ಸಿಂಧೂರಿ ಎಂಬ ಐಎಎಸ್ ಅಧಿಕಾರಿ ಸಹಾಯದೊಂದಿಗೆ ಸುದೀರ್ ರೆಡ್ಡಿ ಈ ಅಕ್ರಮವನ್ನು ಮಾಡಿದ್ದಾರೆ' ಎಂದು ಆರೋಪಿಸಿದ್ದಾರೆ.
ಈ ಕಾನೂನುಬಾಹಿರ ಚಟುವಟಿಕೆಗೆ ಕಡಿವಾನ ಹಾಕುವಂತೆ ಕರ್ನಾಟಕ ಪೊಲೀಸ್ ಮಹಾನಿರ್ದೇಶಕನ್ನು ಲಕ್ಕಿ ಅಲಿ ಒತ್ತಾಯಿಸಿದ್ದಾರೆ.
ವೈಯಕ್ತಿಕ ಲಾಭಕ್ಕಾಗಿ ರಾಜ್ಯದ ಸಂಪನ್ಮೂಲ ದುರುಪಯೋಗ
ರೋಹಿಣಿ ಸಿಂಧೂರಿ ಅವರ ಪತಿ ತಮ್ಮ ವೈಯಕ್ತಿಕ ಲಾಭಕ್ಕಾಗಿ ಕರ್ನಾಟಕದ ಸಂಪನ್ಮೂಲಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಲಕ್ಕಿ ಅಲಿ ಟ್ವೀಟ್ ಮಾಡಿದ್ದಾರೆ.
'ಅವರು(ಸುಧೀರ್ ರೆಡ್ಡಿ) ತಮ್ಮ ವೈಯಕ್ತಿಕ ಲಾಭಕ್ಕಾಗಿ ರಾಜ್ಯದ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅವರು ಬಲವಂತವಾಗಿ ಮತ್ತು ಕಾನೂನುಬಾಹಿರವಾಗಿ ನನ್ನ ಜಮೀನಿನ ಒಳಗೆ ನುಗ್ಗಿದ್ದಾರೆ. ಇದಕ್ಕೆ ಸಂಬಂಧಿತ ದಾಖಲೆಗಳನ್ನು ತೋರಿಸಲು ನಿರಾಕರಿಸುತ್ತಿದ್ದಾರೆ' ಎಂದು ತಿಳಿಸಿದ್ದಾರೆ.
'ಸಂಬಂಧಿಸಿದ ಸಹಾಯಕ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದೇನೆ. ಆದರೆ ಪೊಲೀಸ್ ಆಯುಕ್ತರಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. ಸ್ಥಳೀಯ ಪೊಲೀಸರು ನನಗೆ ಯಾವುದೇ ಸಹಾಯವನ್ನು ಮಾಡುತ್ತಿಲ್ಲ' ಎಂದು ಲಕ್ಕಿ ಅಲಿ ಆರೋಪಿಸಿದ್ದಾರೆ.
ಭೂ ವಿವಾದಕ್ಕೂ ನನಗೂ ಸಂಬಂಧವಿಲ್ಲ
ಭೂಮಿ ಅತಿಕ್ರಮಣ ವಿಚಾರವಾಗಿ 'ದಿ ಇಂಡಿಯನ್ ಎಕ್ಸ್ಪ್ರೆಸ್' ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, 'ವಿವಾದಕ್ಕೂ ತನಗೂ ಯಾವುದೇ ಸಂಬಂಧವಿಲ್ಲ. ನನ್ನ ಮೇಲೆ ಆರೋಪ ಮಾಡಿರುವ ಗಾಯಕ ಲಕ್ಕಿ ಅಲಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ' ಎಂದು ಹೇಳಿದ್ದಾರೆ.
'ಅವರ(ಲಕ್ಕಿ ಅಲಿ) ಹೇಳಿಕೆಗಳು ಅವಹೇಳನಕಾರಿಯಾಗಿದೆ. ಅವರು ನನ್ನ ಮೇಲೆ ಕೆಸರು ಎರಚುವ ಪ್ರಯತ್ನ ಮಾಡುತ್ತಿದ್ದಾರೆ' ಎಂದು ಸಿಂಧೂರಿ ತಿಳಿಸಿದ್ದಾರೆ.
ನಮ್ಮ ಬಳಿ ದಾಖಲೆಗಳಿವೆ ಎಂದ ಸಿಂಧೂರಿ ಸೋದರ ಮಾವ
ಬೆಂಗಳೂರಿನ ಯಲಹಂಕದ ಬಳಿ ಇರುವ ಮೂರು ಎಕರೆ ಜಮೀನಿನ ಮಾಲೀಕತ್ವವನ್ನು ಸಾಬೀತುಪಡಿಸಲು ತಮ್ಮ ಬಳಿ ದಾಖಲೆಗಳಿವೆ ಎಂದು ಸಿಂಧೂರಿ ಅವರ ಸೋದರ ಮಾವ ಮಧುಸೂಧನ್ ರೆಡ್ಡಿ ಹೇಳಿದ್ದಾರೆ.
ನನ್ನ ತಂದೆಯ ನಿಧನದ ನಂತರ ಈ ವರ್ಷದ ಆರಂಭದಲ್ಲಿ ಆಸ್ತಿಯನ್ನು ಪಿತ್ರಾರ್ಜಿತವಾಗಿ ಪಡೆದಿರುವುದಾಗಿ ಮಧುಸೂಧನ್ ರೆಡ್ಡಿ ತಿಳಿಸಿದ್ದಾರೆ.
'ಮಾರಾಟ ಪತ್ರ, ಭೂ ಸ್ವಾಧೀನ ಪತ್ರಗಳನ್ನು ಒಳಗೊಂಡಂತೆ, ಭೂಮಿಯ ಮೇಲೆ ನಮ್ಮ ಹಕ್ಕನ್ನು ಸಾಭೀತುಪಡಿಸಲು ನಾವು ಎಲ್ಲಾ ದಾಖಲೆಗಳನ್ನು ಹೊಂದಿದ್ದೇವೆ. ನಾವು ಎಲ್ಲಾ ದಾಖಲೆಗಳನ್ನು ಪೊಲೀಸರಿಗೆ ಸಲ್ಲಿಸಿದ್ದೇವೆ' ಎಂದು ಹೇಳಿದ್ದಾರೆ.
ಜಮೀನು ಯಾರ ಮಾಲೀಕತ್ವದಲ್ಲಿದೆ ಎಂಬುದನ್ನು ನ್ಯಾಯಾಲಯ ನಿರ್ಧರಿಸುತ್ತದೆ ಎಂದು ರೆಡ್ಡಿ ತಿಳಿಸಿದ್ದಾರೆ.
ಗಾಯಕ ಲಕ್ಕಿ ಅಲಿ ವಿರುದ್ಧ ಎಫ್ಐಆರ್
ನವೆಂಬರ್ 28 ರಂದು ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಲಕ್ಕಿ ಅಲಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಎಫ್ಐಆರ್ ಪ್ರಕಾರ, ರೆಡ್ಡಿ ಅವರು ಏಪ್ರಿಲ್ 30, 2012 ರಂದು ಆಸ್ತಿಯನ್ನು ಲಕ್ಕಿ ಅಲಿ ಅವರ ಸಹೋದರ ಮನ್ಸೂರ್ ಅಲಿಯಿಂದ ಖರೀದಿಸಿದ್ದಾರೆ. ಈ ಜಮೀನಿಗೆ ಭೇಟಿ ನೀಡಲು ಹೋದಾಗ ಗಾಯಕ ಲಕ್ಕಿ ಅಲಿ ಬೆಂಬಲಿಗರು ತಮ್ಮ ಹಾಗೂ ತಮ್ಮೊಂದಿಗಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರೆಡ್ಡಿ ಆರೋಪಿಸಿದ್ದಾರೆ.