ಭಾರತಕ್ಕೆ ಓಡಿ ಬಂದು ಜೀವ ಉಳಿಸಿಕೊಂಡ 10 ಸಾವಿರ ಮ್ಯಾನ್ಮಾರ್ ಪ್ರಜೆಗಳು!
ಕೈಯಲ್ಲಿ ಗನ್ ಹಿಡಿದು, ಜೇಬಿನಲ್ಲಿ ಬಾಂಬು ತುಂಬಿಕೊಂಡು ಬರುವ ಸೈನಿಕರ ವಿರುದ್ಧ ಹೋರಾಡಬೇಕಾ..? ಅಥವಾ ಜೀವ ಉಳಿಸಿಕೊಳ್ಳಲು ಊರು-ಕೇರಿ ಬಿಟ್ಟು ಎಸ್ಕೇಪ್ ಆಗಬೇಕಾ..? ಇಲ್ಲ ಗೊತ್ತಾಗುತ್ತಿಲ್ಲ, ಇದೇ ಕಾರಣಕ್ಕೆ ಸಾವಿರಾರು ಮ್ಯಾನ್ಮಾರ್ ಪ್ರಜೆಗಳು ಜೀವ ಬಿಟ್ಟಿದ್ದಾರೆ. ಆದರೆ ಭಂಡ ಧೈರ್ಯ ಮಾಡಿ ಅಕ್ಕಪಕ್ಕದ ದೇಶಕ್ಕೆ ಓಡಿ ಹೋದವರು ಜೀವ ಉಳಿಸಿಕೊಳ್ಳುತ್ತಿದ್ದಾರೆ. ಮಿಲಿಟರಿ ಆಡಳಿತದ ಬಲೆಗೆ ಸಿಲುಕಿ ನಲುಗಿರುವ ಮ್ಯಾನ್ಮಾರ್ ಪ್ರಜೆಗಳ ಕರುಣಾಜನಕ ಕಥೆ ಇದು.
ಅಂದಹಾಗೆ ವಿಶ್ವಸಂಸ್ಥೆ ನೀಡಿರುವ ಅಂಕಿ-ಅಂಶದ ಪ್ರಕಾರ ಸುಮಾರು 10 ಸಾವಿರ ಮ್ಯಾನ್ಮಾರ್ ಪ್ರಜೆಗಳು ಭಾರತ ಹಾಗೂ ಥೈಲ್ಯಾಂಡ್ಗೆ ಓಡಿ ಹೋಗಿದ್ದಾರಂತೆ. ಇದು ಕೇವಲ 6 ತಿಂಗಳ ಅಂತರದಲ್ಲಿ ಸಂಭವಿಸಿರುವ ಮಹಾವಲಸೆ. ಒಂದು ಕಡೆ ಮ್ಯಾನ್ಮಾರ್ ಸೇನೆ ಹಳ್ಳಿಹಳ್ಳಿಗೂ ನುಗ್ಗಿ ಹಿಂಸೆ ನಡೆಸುತ್ತಿದೆ.
ಕಂಡ ಕಂಡವರ ಮೇಲೆ ದಾಳಿ ಮಾಡಿ, ಹತ್ಯೆ ಮಾಡುತ್ತಿದೆ. ಅದರಲ್ಲೂ ಮಿಲಿಟರಿಯ ವಿರುದ್ಧ ಉಸಿರು ಬಿಟ್ಟವರಿಗೆ ಗೋರಿ ಕಟ್ಟೋದು ಗ್ಯಾರಂಟಿ ಎಂಬಂತಾಗಿದೆ. ಪರಿಸ್ಥಿತಿ ಹೀಗಿದ್ದಾಗ ಮ್ಯಾನ್ಮಾರ್ನ ಜನರಿಗೆ ದೇಶ ಬಿಟ್ಟು ಓಡಿ ಹೋಗದೆ ಬೇರೆ ದಾಳಿ ಉಳಿದಿಲ್ಲ.
ಉಪ್ಪು ತಿಂದ ಮನೆಗೆ ದ್ರೋಹ
6 ತಿಂಗಳ ಅಂತರದಲ್ಲಿ ಮ್ಯಾನ್ಮಾರ್ ಅಕ್ಷರಶಃ ನರಕವಾಗಿ ಬದಲಾಗಿದ್ದು, ಕಂಡ ಕಂಡಲ್ಲಿ ಗುಂಡು ಹಾರಿಸುತ್ತಿದೆ ಮ್ಯಾನ್ಮಾರ್ ಸೇನೆ. ನಮಗೆ ಮಿಲಿಟರಿ ಆಡಳಿತ ಬೇಡ ಎನ್ನುವವರ ಉಸಿರು ನಿಲ್ಲಿಸುತ್ತಿದ್ದಾರೆ ಅಲ್ಲಿನ ಸೈನಿಕರು. ಹೀಗೆ ತಮ್ಮದೇ ದೇಶದ ಪ್ರಜೆಗಳನ್ನ, ಅದೇ ದೇಶದ ಸೈನಿಕರು ಕೊಲ್ಲುತ್ತಿದ್ದಾರೆ. ದೇಶ ಕಾಯಬೇಕಿದ್ದವರ ಕೈಗೆ ಬಂದೂಕು ಕೊಟ್ಟಿರುವ ಅಲ್ಲಿನ ಸರ್ವಾಧಿಕಾರಿಗಳು, ಅಧಿಕಾರ ಉಳಿಸಿಕೊಳ್ಳೋಕೆ ಸಾವಿರಾರು ಜನರನ್ನ ಕೊಲೆ ಮಾಡಿಸಿರುವ ಆರೋಪ ಇದೆ. ಜನ ಜೀವ ಕೈಯಲ್ಲಿಡಿದು ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಎಲ್ಲಿ ನಮ್ಮನ್ನೂ ಸಾಯಿಸಿ ಬಿಡ್ತಾರೋ ಅಂತಾ ದೇಶ ಬಿಟ್ಟು ಓಡಿ ಬರುತ್ತಿದ್ದಾರೆ ಮ್ಯಾನ್ಮಾರ್ ಪ್ರಜೆಗಳು.
ವಾಪಸ್ ಓಡಿಸುತ್ತಿದೆ ಥೈಲ್ಯಾಂಡ್..!
ಅತ್ತ ತಮ್ಮ ದೇಶದಲ್ಲೇ ಕೊಲೆಯಾಗುವ ಭಯದಿಂದ ಜನ ಮ್ಯಾನ್ಮಾರ್ ಬಿಟ್ಟು ಬೇರೆ ದೇಶಕ್ಕೆ ಓಡಿ ಬರುತ್ತಿದ್ರೆ, ಇತ್ತ ಅಕ್ರಮ ವಲಸಿಗರು ಅಂತಾ ಮ್ಯಾನ್ಮಾರ್ ಜನರನ್ನು ಹೊರಗೆ ತಳ್ಳುತ್ತಿದೆ ಥೈಲ್ಯಾಂಡ್. ಸಾವಿರಾರು ಜನರನ್ನ ಹೀಗೆ ಥೈಲ್ಯಾಂಡ್ ಸರ್ಕಾರ ಹೊರಗೆ ಕಳುಹಿಸಿದೆ. ಹೀಗಾಗಿ ಅತ್ತ ತಮ್ಮ ದೇಶದಲ್ಲಿ ನೆಲೆ ಇಲ್ಲದೆ, ಇತ್ತ ಬೇರೆ ದೇಶದಲ್ಲೂ ನೆಲೆ ಸಿಗದೆ ಮ್ಯಾನ್ಮಾರ್ ಜನರು ಅಕ್ಷರಶಃ ಅನಾಥರಾಗಿದ್ದಾರೆ. ಅದರಲ್ಲೂ ಅಲ್ಲಿನ ಪೊಲೀಸರಿಗೆ ಮ್ಯಾನ್ಮಾರ್ ಸೇನಾಧಿಕಾರಿಗಳು ಸಿಕ್ಕಾಪಟ್ಟೆ ಟಾರ್ಚರ್ ಕೊಡುತ್ತಿದ್ದಾರೆ. ಕಾನೂನು ಕಾಪಾಡಬೇಕಿದ್ದ ಪೊಲೀಸ್ ಪಡೆ ಹೆದರಿ ದೇಶಬಿಟ್ಟು ಓಡಿ ಬರುವಂತಾಗಿದೆ.
ಪೊಲೀಸರನ್ನು ವಾಪಸ್ ಕಳಿಸಿ..!
ಕೆಲ ತಿಂಗಳ ಹಿಂದೆ ಭಾರತಕ್ಕೆ ಓಡಿ ಬಂದಿರುವ ಮ್ಯಾನ್ಮಾರ್ ಪೊಲೀಸರನ್ನು ವಶಕ್ಕೆ ನೀಡಿ ಎಂದು ಒತ್ತಾಯಿಸಿ ಮ್ಯಾನ್ಮಾರ್ ಪತ್ರ ಬರೆದಿತ್ತು. ಉಭಯ ರಾಷ್ಟ್ರಗಳ ಸಂಬಂಧ ಮುಂದುವರಿಯಲು ಪೊಲೀಸ್ ಅಧಿಕಾರಿಗಳನ್ನು ಮ್ಯಾನ್ಮಾರ್ಗೆ ಹಸ್ತಾಂತರಿಸಿ ಅಂತಾ ಮಿಜೋರಾಂ ರಾಜ್ಯದ ಚಂಪೈ ಜಿಲ್ಲೆಯ ಉಪ ಆಯುಕ್ತೆಗೆ ಮ್ಯಾನ್ಮಾರ್ನ ಅಧಿಕಾರಿಗಳು ಪತ್ರ ಬರೆದಿದ್ದರು. ಪತ್ರ ಬರೆದ ಕೆಲ ದಿನಗಳಲ್ಲಿ ಆಘಾತಕಾರಿ ಅಂಶ ಬಯಲಾಗಿತ್ತು. ಭಾರತಕ್ಕೆ ಓಡಿ ಬಂದಿದ್ದ ಮ್ಯಾನ್ಮಾರ್ ಪೊಲೀಸರು ಅಲ್ಲಿನ ಭಯಾನಕ ಪರಿಸ್ಥಿತಿಯನ್ನ ಬಿಡಿಸಿಟ್ಟಿದ್ದರು. ಮ್ಯಾನ್ಮಾರ್ ಜನರ ಸದ್ಯದ ಪರಿಸ್ಥಿತಿ ಹಾಗೂ ಹಿಂಸೆಯ ಬಗ್ಗೆ ಎಳೆ ಎಳೆಯಾಗಿ ವಿವರಿಸಿದ್ದರು.
ಶಾಲಾ ಶಿಕ್ಷಕರಿಗೂ ಶಿಕ್ಷೆ
ಫೆಬ್ರವರಿಯಲ್ಲಿ ನಡೆದಿದ್ದ ಸೇನಾ ದಂಗೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದವರ ಜೊತೆ ಸೇರಿದ್ದಕ್ಕೆ ಮ್ಯಾನ್ಮಾರ್ನ 1.25 ಲಕ್ಷಕ್ಕೂ ಹೆಚ್ಚು ಶಾಲಾ ಶಿಕ್ಷಕರನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಫೆಬ್ರವರಿ 1ರಂದು ಸೇನೆ ಮ್ಯಾನ್ಮಾರ್ ಪ್ರಧಾನಿ ಸೂಕಿ ನಿವಾಸಕ್ಕೆ ನುಗ್ಗಿತ್ತು. ಬಳಿಕ ಪ್ರಧಾನಿ ಆಂಗ್ ಸಾನ್ ಸೂಕಿ ಸೇರಿದಂತೆ ಸಂಪುಟ ಸಚಿವರು ಮತ್ತು ಸಂಸದರನ್ನು ಗೃಹ ಬಂಧನದಲ್ಲಿ ಇರಿಸಿತ್ತು. ಇದಾದ ಬಳಿಕ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಆದರೆ ತಮ್ಮ ವಿರುದ್ಧ ಪ್ರತಿಭಟನೆ ನಡೆಸಿದವರ ಮೇಲೆ ರಿವೇಂಜ್ ತೆಗೆದುಕೊಳ್ಳುತ್ತಿದೆ ಮ್ಯಾನ್ಮಾರ್ ಮಿಲಿಟರಿ.
850ಕ್ಕೂ ಹೆಚ್ಚು ಹೋರಾಟಗಾರರು ಬಲಿ..?
ಈಗಾಗಲೇ ಪ್ರತಿಭಟನೆ ನಡೆಸುತ್ತಿದ್ದ ಸುಮಾರು 850ಕ್ಕೂ ಹೆಚ್ಚು ಜನರನ್ನು ಮ್ಯಾನ್ಮಾರ್ ಸೇನೆ ಬಲಿಪಡೆದಿರುವ ಆರೋಪವಿದೆ. ಹೀಗಾಗಿ ನಾಗರಿಕರನ್ನು ಕೊಂದು ಹಾಕಿರುವ ಮ್ಯಾನ್ಮಾರ್ ಸೇನೆ ವಿರುದ್ಧ ಜಗತ್ತಿನಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪ್ರಜಾಪ್ರಭುತ್ವವಾದಿ ರಾಷ್ಟ್ರಗಳು ಮ್ಯಾನ್ಮಾರ್ ಮಿಲಿಟರಿ ಕ್ರಮವನ್ನು ಟೀಕಿಸಿವೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಅಲ್ಲಿನ ಸೇನಾಧಿಕಾರಿಗಳು, ಪ್ರತಿಭಟನೆ ನಡೆಸುತ್ತಿರುವ ಜನರ ನಿಯಂತ್ರಣ ಹಾಗೂ ಹೋರಾಟಗಾರನ್ನು ಚದುರಿಸಲು ಬಲಪ್ರಯೋಗ ಮಾಡುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಹಲವರು ಸಾವು, ಬದುಕಿನ ಮಧ್ಯೆ ಹೋರಾಡುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ಆವರಿಸಿದೆ.