ಸಾಕ್ಷಾತ್ ದೇವರನ್ನೇ ಸಂಕಷ್ಟದಲ್ಲಿ ಸಿಲುಕಿಸುವ ಗ್ರಹಣ!
ಪ್ರತಿ ಬಾರಿ ಗ್ರಹಣ ಬಂದಾಗ ನಮಗೆ ಗೋಳು ಇದ್ದದ್ದೇ. ಗ್ರಹಣಕ್ಕೆ ಮುಂಚೆ ಒಂದು ಬಾರಿ ಸ್ನಾನ, ನಂತರ ಒಂದು ಬಾರಿ ಸ್ನಾನ.. ಅಯ್ಯಪ್ಪಾ ಯಾಕಾದ್ರೂ ಈ ಗ್ರಹಣ ಬರುತ್ತದೆಯೋ ಎಂದು ಅನಿಸುತ್ತಿತ್ತು. ಈಗ ಹಾಗಿಲ್ಲ ಬಿಡಿ 'ಸ್ನಾನ ಮಾಡ್ರೋ...' ಎಂದು ಕೂಗಾಡವವರು ಯಾರೂ ಇಲ್ಲ. ನಗರ ಸೇರಿದ ಮೇಲೆ ದಿನಕ್ಕೆ ಒಂದು ಸ್ನಾನ ಮಾಡಲಿಕ್ಕೆ ಸುಸ್ತಾಗಿ ಹೋಗುತ್ತೆ!
ಹೌದು,, ಬೇರೆ ಕಡೆಯ ಕತೆ ನನಗೆ ಗೊತ್ತಿಲ್ಲ. ಮಲೆನಾಡ ಭಾಗದಲ್ಲಿ ಗ್ರಹಣ ಎದುರಾದಾಗ ಅನೇಕ ಆಚರಣೆಗಳು ಚಾಲ್ತಿಯಲ್ಲಿವೆ. ಆಧುನಿಕತೆ ಪ್ರಭಾವ ಬೀರುತ್ತಿದ್ದರೂ ಕೆಲ ಕಟ್ಟುಪಾಡುಗಳು ಇನ್ನು ಸಡಿಲವಾಗಿಲ್ಲ. ಹಾಗಾದರೆ ಇಷ್ಟಕ್ಕೂ ಚಾಲ್ತಿಯಲ್ಲಿರುವ ಪದ್ಧತಿಗಳೇನು? ಇದನ್ನು ನಂಬಿಕೆ ಅಂತ ಕರೆಯೋಣವೇ? ಅಥವಾ ಮೂಢನಂಬಿಕೆಯೇ? ಆಚರಣೆಗಳಿಗೆ ವೈಜ್ಞಾನಿಕ ಹಿನ್ನೆಲೆ ಏನಾದರೂ ಇದೆಯಾ? ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಿದೆ. ಆದರೆ ಕಟ್ಟುಪಾಡುಗಳು ಇಂದಿಗೂ ಅಬಾಧಿತ.
ಅದು ಚಂದ್ರ ಗ್ರಹಣ ವಿರಲಿ, ಸೂರ್ಯ ಗ್ರಹಣ ವಿರಲಿ ಗ್ರಹಣ ಆರಂಭಕ್ಕೂ ಮುನ್ನ ಒಂದು ಸಾರಿ ಸ್ನಾನ ಮಾಡಬೇಕು, ನಂತರ ಗ್ರಹಣ ಬಿಟ್ಟ ಮೇಲೆ ಇನ್ನೊಂದು ಸಾರಿ ಸ್ನಾನ ಮಾಡಬೇಕು. ಗ್ರಹಣ ಕಾಲದಲ್ಲಿ ಆಹಾರ ಸೇವಿಸುವುದು ನಿಷಿದ್ಧ. ಕೆಲವು ಕಡೆ ಮನೆಯ ಪೀಠದಲ್ಲಿರುವ ದೇವರನ್ನು ನೀರಿನಲ್ಲಿ ಮುಳುಗಿಸಿಡುವ ಸಂಪ್ರದಾಯವೂ ಇದೆ. ಇಲ್ಲಾ ಗ್ರಹಣ ಹಿಡಿದಲ್ಲಿಂದ ಬಿಡುವವರೆಗೆ ದೇವರಿಗೆ ನಿರಂತರ ಅಭಿಷೇಕ ನಡೆಯುತ್ತಿರುತ್ತದೆ. ಇದನ್ನು ಪ್ರಶ್ನಿಸಿದರೆ ಮೊದಲು ಬೈಗುಳ ತಿನ್ನಬೇಕಾಗುವುದು. ಮತ್ತೂ ಹಿಡಿದು ಕೇಳಿದರೆ ಗ್ರಹಣ ಎಂದರೇ ದೇವರಿಗೆ ಸಂಕಷ್ಟ ಎದುರಾದ ಕಾಲ! ಎಂಬ ಉತ್ತರ ಸಿಗುತ್ತದೆ. [ಸೂಪರ್ ಕೆಂಪು ಚಂದ್ರನ ಕುರಿತು ಇಂಟರೆಸ್ಟಿಂಗ್ ಸಂಗತಿ]
ಗ್ರಹಣ ಸಮಯದಲ್ಲಿ ಕ್ರಿಮಿ-ಕೀಟಗಳು ಕ್ರಿಯಾಶೀಲವಾಗುತ್ತವೆ. ಆ ಸಮಯದಲ್ಲಿ ಆಹಾರ ಸೇವಿಸಿದರೆ ಅನಾರೋಗ್ಯ ಉಂಟಾಗುತ್ತದೆ ಎಂಬ ನಂಬಿಕೆಯೂ ಇದೆ. ಅಷ್ಟಕ್ಕೂ ವೈಜ್ಞಾನಿಕವಾಗಿ ಸೂರ್ಯನನ್ನು ನಕ್ಷತ್ರ ಎಂದು ಕರೆಯಲಾಗಿದ್ದರೆ, ಇಲ್ಲಾ ಸೂರ್ಯ ಗ್ರಹ ಎಂಬ ವಾದವನ್ನೇ ಇಲ್ಲಿ ಒಪ್ಪಿಕೊಳ್ಳಬೇಕು. ಸೂರ್ಯ ನಕ್ಷತ್ರ ಎಂದಿದ್ದಕ್ಕೆ ಖಗೋಳ ಶಾಶ್ತಜ್ಞ ಗೆಲಿಲಿಯೋ ಪ್ರಾಣ ಕಳೆದಿಕೊಂಡಿದ್ದು ಅಲ್ಲವೇ?
ಚಂದ್ರ ಗ್ರಹಣ ನೋಡಲು ಸುಲಭವಾಗಿ ಅವಕಾಶ ಸಿಗುತ್ತಿದ್ದರೂ ನಾವೆಲ್ಲ ನಿದ್ರೆಯಲ್ಲಿರುತ್ತಿದ್ದೆವು. ಗ್ರಹಣ ಬಿಟ್ಟ ಮೇಲೆ, ತಟ್ಟಿ ಎಚ್ಚರ ಮಾಡಿ ಮಧ್ಯರಾತ್ರಿಯ ಸ್ನಾನ ಮಾಡಲೇಬೇಕಿತ್ತು. ಇದಕ್ಕೆ ಅಡ್ಡಿ ಸೂಚಿಸಿದವನಿಗೆ ಬೈಗುಳಗಳ ಬಹುಮಾನ ಖಂಡಿತ. ಸೂರ್ಯ ಗ್ರಹಣವನ್ನು ನೋಡುವುದು ದುಸ್ತರವೇ ಸರಿ, ಮಕ್ಕಳು ಕಣ್ಣು ಹಾಳು ಮಾಡಿಕೊಳ್ಳುತ್ತಾರೇ ಎಂಬ ಕಾರಣವೂ ಇದ್ದಿರಬಹುದು. ಸಗಣಿ ಕರಡಿದ ನೀರಿನಲ್ಲೋ ಇಲ್ಲಾ ಮಸಿ ಬಳಿದ ಗಾಜಿನ ತುಣುಕಲ್ಲೋ ಸೂರ್ಯ ಗ್ರಹಣ ನೋಡುವುದನ್ನು ನಂತರ ಅಭ್ಯಾಸ ಮಾಡಿಕೊಂಡೆವು.
9 ನೇ ತರಗತಿ ಪಠ್ಯದಲ್ಲಿ ಗ್ರಹಣ ಎಂದರೆ ಏನು? ಹೇಗಾಗುತ್ತದೆ? ಎಂಬುದನ್ನು ಕಲಿಯುವುದಕ್ಕು ಮುನ್ನ ನಮಗೆ ಗೊತ್ತಿದ್ದ ಉತ್ತರ ಗ್ರಹಣ ಎಂದರೆ ದೇವರಿಗೆ ಸಂಕಷ್ಟ ಬರುವುದು!
ಗ್ರಹಣ ಕಾಲದ ಇನ್ನೆರಡು ಪದ್ಧತಿಗಳ ಬಗ್ಗೆ ಹೇಳಲೇಬೇಕು. ಫಲ ನೀಡದ ತೆಂಗಿನ ಮರವನ್ನು ಯಾವ ಕಾರಣಕ್ಕೂ ಕಡಿಯಲ್ಲ(ಈಗ ಕಾಲ ಬದಲಾಗಿದೆ). ಹೂವು ಬಿಡುವ ತೆಂಗಿನ ಮರ ಕಾಯಿ ಕಚ್ಚುವುದಿಲ್ಲ. ಸೊಂಪಾಗಿ ಬೆಳೆದ ತೆಂಗಿನ ಮರ ಕಾಯಿ ಕಚ್ಚುವುದಿಲ್ಲ. ಇದಕ್ಕೆಲ್ಲ ಗ್ರಹಣವೇ ಪರಿಹಾರ!
ಗ್ರಹಣದ ಸಮಯದಲ್ಲಿ ಕಬ್ಬಿಣದ ಮೊಳೆಯನ್ನು ತೆಂಗಿನ ಮರದ ಬುಡಕ್ಕೆ ಹೊಡೆದರೆ ಕಾಯಿ ಕಚ್ಚುತ್ತದೆ ಎಂಬ ನಂಬಿಕೆಯಿದೆ. ಅಲ್ಲದೇ ಇದು ಶೇ. 70 ರಷ್ಟು ನಿಜವೂ ಆಗಿದೆ. ಹಿಂದಿರುವ ವೈಜ್ಞಾನಿಕ ಸತ್ಯ ಅರಿಯಲು ವಿಜ್ಞಾನಿಗಳ ಬಳಿಯೇ ಹೋಗಬೇಕು. [ಸೆಪ್ಟೆಂಬರ್ 28 ಭೂಮಿ ಮೇಲೆ ನಮ್ಮೆಲ್ಲರದ್ದು ಕೊನೆ ದಿನ!]
ಗ್ರಹಣ ಸಮಯದಲ್ಲಿ ತೆಂಗಿನ ಗಿಡ ನೆಟ್ಟರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯೂ ಬಲವಾಗಿ ಬೇರೂರಿದೆ. ಪಕ್ಕದ ಮನೆಯ ಗಡಿಯಲ್ಲಿ ಗುಂಡಿ ತೋಡಿ ತೆಂಗಿನ ಸಸಿ ನೆಟ್ಟು ಇಂದು ತಾವು ಕಣ್ಮರೆಯಾಗಿದ್ದರೂ ಇಂದಿಗೂ ಪ್ರತಿದಿನ 'ಹೆಸರು' ಹೇಳಿಸಿಕೊಳ್ಳಿತ್ತಿರುವ ಅಜ್ಜಂದಿರನ್ನು ಕಂಡಿದ್ದೇವೆ. ಅಂದು ಸೋಗೆ ಮನೆಯಾದ್ದರಿಂದ ತೆಂಗಿನ ಕಾಯಿ ಬಿದ್ದರೆ ಸಮಸ್ಯೆಯಾಗಿತ್ತಿರಲಿಲ್ಲ. ಆದರೆ ಇಂದು ಹೆಂಚಿನ ಮನೆ, ನೇರವಾಗಿ ಬೀಳುವ ಕಾಯಿ ಒಂದಿಷ್ಟು ಹೆಂಚುಗಳನ್ನು ಪುಡಿ ಮಾಡಿಯೇ ಇರುತ್ತದೆ. ಅತ್ತ ಮರ ಕಡಿವಂತಿಲ್ಲ. ಇತ್ತ ತಾಪತ್ರಯ ತಪ್ಪಲ್ಲ. ಎಲ್ಲ ಗ್ರಹಣದ ಪರಿಣಾಮ!
ನಿಮ್ಮ ರಾಶಿಗೆ ಗ್ರಹಚಾರ ತಗುಲಿದೆ. ಗ್ರಹಣ ಕಾಲದಲ್ಲಿ ಶಾಂತಿ ಮಾಡಿಸಿ, ಜಪ ಮಾಡಿಸಿ ಎಂದು ದುಡ್ಡು ಪೀಕುವವರು ಒಂದೆಡೆ, ಗ್ರಹಣ ಒಂದು ಖಗೋಳ ಪ್ರಕ್ರಿಯೆ. ಇದರಿಂದ ಯಾವ ಕೆಡುಕು ಉಂಟಾಗಲ್ಲ. ಅಧ್ಯಯನಕ್ಕೆ ಇದನ್ನು ಬಳಸಿಕೊಳ್ಳಬೇಕು ಎಂಬುವರು ಒಂದೆಡೆ. ನಗರದ ದೇವಾಲಯಗಳಿಗೂ ಜನ ಭೇಟಿ ಇಡುತ್ತಾರೆ. ನೆಹರೂ ತಾರಾಲಯದಲ್ಲೂ ಗ್ರಹಣ ವೀಕ್ಷಣೆ ಮಾಡಲಾಗುತ್ತದೆ. ಯಾವುದನ್ನು ಒಪ್ಪಿಲೊಳ್ಳಬೇಕು? ಆದರೆ ನಮ್ಮ ಊರಿನ ಜನ ಗ್ರಹಣದ ದಿನ ಎರಡು ಸಾರಿ ಸ್ನಾನ ಮಾಡಲು ಮಾತ್ರ ಮರೆಯಲ್ಲ.