ಪಂಜಾಬ್ನಲ್ಲಿ ಆಪ್ ನಿಜರೂಪ ಬಯಲು ಎಂದು ಟೀಕೆ; ಕಾರಣ ತಿಳಿಯಿರಿ
ಸಂಗ್ರೂರ್, ನವೆಂಬರ್ 30: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ ಸಂಗ್ರೂರ್ನಲ್ಲಿರುವ ಮುಖ್ಯಮಂತ್ರಿ ಭಗವಂತ್ ಮಾನ್ ನಿವಾಸದ ಕಡೆಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ಕೃಷಿ ಕಾರ್ಮಿಕ ಸಂಘಟನೆಗಳ ಸದಸ್ಯರ ಮೇಲೆ ಪಂಜಾಬ್ ಪೊಲೀಸರು ಬುಧವಾರ ಲಾಠಿ ಚಾರ್ಜ್ ನಡೆಸಿದ್ದಾರೆ.
ಕೃಷಿ ಕಾರ್ಮಿಕರನ್ನು ಒಳಗೊಂಡ ಪ್ರತಿಭಟನಾಕಾರರು ಪಟಿಯಾಲಾ ಬೈಪಾಸ್ನಲ್ಲಿ ಜಮಾಯಿಸಿದರು, ನಂತರ ಅವರು ಮುಖ್ಯಮಂತ್ರಿಗಳ ನಿವಾಸದತ್ತ ತೆರಳಲು ಪ್ರಾರಂಭಿಸಿದರು, ಅಲ್ಲಿ ಭಾರೀ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.
ಭಾರತದ ಗಡಿ ಪ್ರವೇಶಿಸಿದ ಪಾಕಿಸ್ತಾನ ಡ್ರೋನ್: ಬಿಎಸ್ಎಫ್ನಿಂದ ತಕ್ಕಪಾಠ
ಎಂಟು ಕಾರ್ಮಿಕ ಸಂಘಟನೆಗಳ ಸದಸ್ಯರನ್ನು ಒಳಗೊಂಡ ಪ್ರತಿಭಟನಾಕಾರರನ್ನು ಪೊಲೀಸರು ತಡೆಯಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಬಲಪ್ರಯೋಗವನ್ನು ಮಾಡಿದ್ದರಿಂದ ಪ್ರತಿಭಟನಾಕಾರರಲ್ಲಿ ಕೆಲವರು ಗಾಯಗೊಂಡರು. ಆದಾಗ್ಯೂ, "ಪ್ರತಿಭಟನಾಕಾರರ ಆಕ್ರಮಣಕಾರಿ ಬಣವು ಗಲಾಟೆಯಲ್ಲಿ ತೊಡಗಿದ್ದರೂ ಲಾಠಿ ಚಾರ್ಜ್ ಅನ್ನು ನಡೆಸಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ.
ಲಾಠಿಚಾರ್ಜ್ ನಡೆಸಿಲ್ಲ ಎಂದ ಪೊಲೀಸರು:
"ಆರಂಭದಲ್ಲಿ ಪೊಲೀಸರು ಯಾವುದೇ ರೀತಿಯ ಲಾಠಿ ಚಾರ್ಜ್ ಮಾಡಿರಲಿಲ್ಲ. ಪ್ರತಿಭಟನೆಯು ಶಾಂತಿಯುತ ರೀತಿಯಲ್ಲಿ ನಡೆಯುತ್ತಿತ್ತು. ಆದರೆ ಕೆಲವು ಪ್ರತಿಭಟನಾಕಾರರ ಆಕ್ರಮಣಕಾರಿ ಬಣವು ಮಾರಾಮಾರಿಯಲ್ಲಿ ತೊಡಗಿತು, ನಂತರ ಅದನ್ನು ಪೊಲೀಸರು ನಿಯಂತ್ರಿಸಿದರು. ನಾವು ಅವರ ಬೇಡಿಕೆಗಳನ್ನು ಪರಿಗಣಿಸಿದ್ದೇವೆ ಎಂದು ಸಂಗ್ರೂರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.
ಈ ಘಟನೆಯು ಪಂಜಾಬ್ನಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಮೇಲೆ ಭಾರತೀಯ ಜನತಾ ಪಕ್ಷದ ಮಂಜಿಂದರ್ ಸಿಂಗ್ ಸಿರ್ಸಾ ಮತ್ತು ಶೆಹಜಾದ್ ಪೂನವಾಲಾ ದಾಳಿ ಮಾಡುವ ಮೂಲಕ ರಾಜಕೀಯ ಕೋಲಾಹಲವನ್ನು ಸೃಷ್ಟಿಸಿತು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ "ನಿಜವಾದ ಮುಖ"ವನ್ನು ತೋರಿಸುತ್ತಿದ್ದಾರೆ ಎಂದು ಮಂಜಿಂದರ್ ಸಿಂಗ್ ಸಿರ್ಸಾ ಆರೋಪಿಸಿದರು. ಪಂಜಾಬ್ ಜನರು ತಮಗಾದ ಅನ್ಯಾಯಕ್ಕೆ ತಕ್ಕ ಉತ್ತರವನ್ನು ನೀಡುತ್ತಾರೆ ಎಂದು ಹೇಳಿದರು.
ರೈತರ ಮೇಲೆ ಲಾಠಿಪ್ರಹಾರದ ಮೂಲಕ ನಿಜರೂಪ ಬಯಲು:
"ಸಿಎಂ ಭಗವಂತ್ ಮಾನ್ ಮನೆ ಮುಂದೆ ಧರಣಿ ಕುಳಿತಿದ್ದ ಪಂಜಾಬ್ ರೈತರ ಮೇಲೆ ಲಾಠಿ ಚಾರ್ಜ್ ಮೂಲಕ ಕೇಜ್ರಿವಾಲ್ ತಮ್ಮ ನಿಜ ರೂಪ ತೋರಿಸಿದ್ದಾರೆ. ರೈತರಿಗೆ ಅವರ ಹಕ್ಕುಗಳನ್ನು ನೀಡುವ ಬದಲು ಕೇಜ್ರಿವಾಲ್ ಪಂಜಾಬ್ನ ಹಣವನ್ನು ಗುಜರಾತ್ ಪ್ರಚಾರದಲ್ಲಿ ಹೂಡಿಕೆ ಮಾಡುವ ಮೂಲಕ ಪಂಜಾಬ್ ಅನ್ನು ದುರ್ಬಲಗೊಳಿಸುತ್ತಿದ್ದಾರೆ. ಕೇಜ್ರಿವಾಲ್ ಈ ಅನ್ಯಾಯಕ್ಕೆ ಪಂಜಾಬಿಗಳು ತಕ್ಕ ಉತ್ತರ ನೀಡಲಿದ್ದಾರೆ ಎಂದು ಸಿರ್ಸಾ ಟ್ವೀಟ್ ಮಾಡಿದ್ದಾರೆ. ಚುನಾವಣೆಗೂ ಮುನ್ನ ಭರವಸೆ ನೀಡಿ ನಂತರ ಈಡೇರಿಸದಿರುವುದು ಎಎಪಿ ತಂದಿರುವ "ಹೊಸ ಬದಲಾವಣೆ" ಎಂದೂ ಅವರು ಹೇಳಿದ್ದಾರೆ.
ಲಾಠಿಚಾರ್ಜ್ ಆಪ್ ನಾಯಕರ ದೌರ್ಜನ್ಯಕ್ಕೆ ಸಾಕ್ಷಿ:
ಮನೆಯ ಹೊರಗೆ ಪ್ರತಿಭಟನೆ ನಡೆಸುತ್ತಿರುವ ರೈತ ಕಾರ್ಮಿಕರಿಗೆ ನ್ಯಾಯ ಒದಗಿಸುವ ಬದಲು ಅವರ ಮೇಲೆ ಲಾಠಿ ಚಾರ್ಜ್ ಮಾಡಿರುವುದು ಅರವಿಂದ್ ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ದೌರ್ಜನ್ಯಕ್ಕೆ ಸಾಕ್ಷಿಯಾಗಿದೆ. ಚುನಾವಣೆಗೂ ಮುನ್ನ ಭರವಸೆ ನೀಡಿ ಚುನಾವಣೆ ನಂತರ ಈಡೇರಿಸದೇ ಇರುವುದು ಎಎಪಿಯ ಬದಲಾವಣೆ. ದೆಹಲಿ ಮತ್ತು ಗುಜರಾತ್ನ ಜನರು ಈ ಮೋಸದ ಪಕ್ಷದಿಂದ ದೂರವಿರಬೇಕು ಎಂದು ಸಿರ್ಸಾ ಮತ್ತೊಂದು ಟ್ವೀಟ್ನಲ್ಲಿ ಹೇಳಿದ್ದಾರೆ. ಎಎಪಿ "ಜನವಿರೋಧಿ ರೈತ ವಿರೋಧಿ ಪಕ್ಷ" ಎಂದು ಬಿಜೆಪಿ ನಾಯಕ ಶೆಹಜಾದ್ ಪೂನವಾಲಾ ಆರೋಪಿಸಿದ್ದಾರೆ.
''ಶಾಂತಿಯುತವಾಗಿ ಸಿಎಂ ನಿವಾಸದತ್ತ ತೆರಳುತ್ತಿದ್ದ ಕಾರ್ಯಕರ್ತರ ಮೇಲೆ ಕ್ರೂರವಾಗಿ ಲಾಠಿ ಚಾರ್ಜ್ ಮಾಡಲಾಗಿದೆ. ಇದು ಎಎಪಿಯ ನಿಜವಾದ ಮುಖವನ್ನು ತೋರಿಸುತ್ತದೆ. ಇದು 'ಜನವಿರೋಧಿ ರೈತ ವಿರೋಧಿ ಪಕ್ಷ' ಎಂಬುದಾಗಿದೆ. ಸಿಎಂ ಭಗವಂತ್ ಮಾನ್ ಗುಜರಾತ್ನಲ್ಲಿ ಪ್ರಚಾರದಲ್ಲಿ ನಿರತರಾಗಿದ್ದಾರೆ ಮತ್ತು ಪಂಜಾಬ್ನ ರೈತರು ಶೋಚನೀಯ ಸ್ಥಿತಿಯಲ್ಲಿದ್ದಾರೆ ಎಂದು ಅವರು ಹೇಳಿದರು.