ವರ್ಷದಲ್ಲಿ ಮೊಮ್ಮಗ ಕೊಡಿ, ಇಲ್ಲ 5 ಕೋಟಿ ಕೊಡಿ: ವೃದ್ಧ ದಂಪತಿ ಬೇಡಿಕೆ
ಹರಿದ್ವಾರ, ಮೇ 12: ಯಾವುದೇ ತಂದೆ ತಾಯಿ ಮಕ್ಕಳನ್ನು ಹೆತ್ತು ಓದಿಸಿ ತಮ್ಮ ಕೊನೆಗಾಲಕ್ಕೆ ಮೊಮ್ಮಗು ಬೇಕು ಮತ್ತು ಮಕ್ಕಳು ತಮಗೆ ಆಸರೆಯಾಗಬೇಕು ಎಂದು ಬಯಸುತ್ತಾರೆ. ಅವೆರಡೂ ಸಿಗದೇ ಹೋದರೆ ವಯಸ್ಸಾದ ಜೀವಗಳಿಗೆ ಎಷ್ಟು ಯಾತನೆ ಆಗಬೇಡ? ಇಂಥ ನೊಂದ ಜೀವಗಳ ಜೋಡಿ ಈಗ ನ್ಯಾಯ ಕೋರಿ ತಮ್ಮ ಮಗನ ವಿರುದ್ಧವೇ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ತಮಗೆ ಮೊಮ್ಮಗ ಬೇಕು ಅಷ್ಟೇ ಎಂದು ಬೇಡಿಕೆ ಇಟ್ಟಿದ್ದಾರೆ.
ಒಂದು ವರ್ಷದೊಳಗೆ ನಮಗೆ ಒಂದು ಮೊಮ್ಮಗುವನ್ನು ಹೆತ್ತು ಕೊಡಿ. ಇಲ್ಲದಿದ್ದರೆ 5 ಕೋಟಿ ರೂ ಪರಿಹಾರ ಕೊಡಿ ಎಂದು ತಮ್ಮ ಮಗ ಮತ್ತು ಸೊಸೆ ವಿರುದ್ಧ ವೃದ್ಧ ದಂಪತಿ ಕೋರ್ಟ್ ಮೆಟ್ಟಿಲೇರಿರುವ ಘಟನೆ ಉತ್ತರಾಖಂಡ್ ರಾಜ್ಯದಲ್ಲಿ ನಡೆದಿದೆ. ಹರಿದ್ವಾರದ ಎಸ್ ಆರ್ ಪ್ರಸಾದ್ ಮತ್ತವರ ಪತ್ನಿ ಕೋರ್ಟ್ ಮೆಟ್ಟಿಲು ಹತ್ತಿರುವುದು.
ಮೊಮ್ಮಗು ಆಡಿಸುವಾಸೆ:
"ನಾವು ನಮ್ಮ ಮಗನಿಗೆ 2016ರಲ್ಲಿ ಮದುವೆ ಮಾಡಿಸಿದೆವು. ಮೊಮ್ಮಗುವನ್ನು ಅಡಿಸುವ ಕನಸು ಕಂಡೆವು. ನಮಗೆ ಗಂಡು ಮಗುವೋ ಹೆಣ್ಣು ಮಗುವೋ ಎಂಬ ಚಿಂತೆಯಲ್ಲ, ಯಾವುದಾದರೂ ಮೊಮ್ಮಗು ಅದರೆ ಸಾಕು ಎಂದಿದ್ದೆವು. ಇಷ್ಟು ವರ್ಷವಾದರೂ ನಮಗೆ ಮಗ ಸೊಸೆ ಮೊಮ್ಮಗು ಹೆತ್ತು ಕೊಟ್ಟಿಲ್ಲ" ಎಂದು ಎಸ್ ಆರ್ ಪ್ರಸಾದ್ ಅಲವತ್ತುಕೊಂಡಿದ್ದಾರೆ.

ಕಷ್ಟಕಾಲಕ್ಕೆ ಆಗ ಮಗ-ಸೊಸೆ:
ತಮ್ಮ ಮಗನನ್ನು ಓದಿಸಿ ಅಮೆರಿಕದಲ್ಲಿ ತರಬೇತಿ ಕೊಡಿಸಿದೆವು. ಈಗ ನಮ್ಮ ಜೇಬು ಬರಿದಾಗಿದೆ. ಏನು ಮಾಡೋಣ ಎಂದು ಅಳಲು ತೋಡಿಕೊಂಡಿರುವ ಈ ವೃದ್ಧ ದಂಪನಿ, ತಮ್ಮ ಮಗ ಸೊಸೆಯಿಂದ 5 ಕೋಟಿ ರೂ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ.
"ನನ್ನ ಮಗನಿಗೆ ಎಲ್ಲಾ ಹಣ ಖರ್ಚು ಮಾಡಿದೆ. ಅಮೆರಿಕದಲ್ಲಿ ತರಬೇತಿ ಕೊಡಿಸಿದೆ. ಈಗ ನನ್ನ ಬಳಿ ಹಣವೇ ಇಲ್ಲ. ಮನೆ ಕಟ್ಟಲು ಬ್ಯಾಂಕ್ನಿಂದ ಸಾಲ ಪಡೆದಿದ್ದೇವೆ. ವೈಯಕ್ತಿಕವಾಗಿ ಮತ್ತು ಆರ್ಥಿಕವಾಗಿ ನಾವು ಕಷ್ಟಕ್ಕೆ ಸಿಲುಕಿದ್ದೇವೆ. ನನ್ನ ಮಗ ಮತ್ತು ಸೊಸೆ ಇಬ್ಬರಿಂದಲೂ ತಲಾ ೨.೫ ಕೋಟಿ ರೂ ಪರಿಹಾರಕ್ಕೆ ಒತ್ತಾಯಿಸಿ ಕೋರ್ಟ್ನಲ್ಲಿ ಅರ್ಜಿ ಹಾಕಿದ್ದೇವೆ" ಎಂದು ಎಸ್ ಆರ್ ಪ್ರಸಾದ್ ಹೇಳಿದ್ದಾರೆ.
ಇನ್ನು, ಈ ವೃದ್ಧ ದಂಪನಿ ಪರ ವಕಾಲತು ವಹಿಸಿರುವ ವಕೀಲರು ಈ ಕೇಸ್ ಬಗ್ಗೆ ಮಾತನಾಡಿ, ಈ ಬೆಳವಣಿಗೆ ನಮ್ಮ ಸಮಾಜದ ವಾಸ್ತವ ಸ್ಥಿತಿಗೆ ಕೈಗನ್ನಡಿ ಹಿಡಿದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

"ನಮ್ಮ ಮಕ್ಕಳ ಮೇಲೆ ಎಲ್ಲ ಬಂಡವಾಳ ಹಾಕುತ್ತೇವೆ. ಅವರು ಒಳ್ಳೆಯ ಕಡೆ ಕೆಲಸ ಸಿಗುವ ಸಾಮರ್ಥ್ಯ ತುಂಬುತ್ತೇವೆ. ಮಕ್ಕಳು ತಮ್ಮ ತಂದೆ ತಾಯಿಗೆ ಕನಿಷ್ಠ ಹಣಕಾಸು ನೆರವಾದರೂ ನೀಡಬೇಕು. ಈ ಪ್ರಕರಣದಲ್ಲಿ ಪೋಷಕರು ತಮ್ಮ ಮಗ ಮತ್ತು ಸೊಸೆಯಿಂದ ಒಂದು ವರ್ಷದೊಳಗೆ ಮೊಮ್ಮಗು ಬೇಕು ಅಥವಾ 5 ಕೋಟಿ ರೂ ಪರಿಹಾರ ಕೊಡಬೇಕು ಎಂದು ಒತ್ತಾಯಿಸುತ್ತಿದ್ದಾರೆ" ಎಂದು ವಕೀಲ ಎ ಕೆ ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications