ತೆಲಂಗಾಣ ಸಾರಿಗೆ ಮುಷ್ಕರದ ಪರಿಣಾಮ: ಮಹಿಳಾ ಕಂಡೆಕ್ಟರ್ ಆತ್ಮಹತ್ಯೆ
ಹೈದರಾಬಾದ್, ಅಕ್ಟೋಬರ್ 28: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು(TSRTC) ನಡೆಸಿರುವ ಮುಷ್ಕರ ಪ್ರತಿಭಟನೆಯಿಂದಾಗಿ ಇಬ್ಬರು ನೌಕರರು ಬಲಿಯಾಗಿರುವ ಸುದ್ದಿ ಬೆನ್ನಲ್ಲೇ ಖಮ್ಮಂ ಜಿಲ್ಲೆಯಲ್ಲಿ ಮಹಿಳಾ ಕಂಡೆಕ್ಟರ್ ರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಒಟ್ಟಾರೆ, ಮುಷ್ಕರದ ಪರಿಣಾಮ ನಾಲ್ವರು ಮೃತರಾಗಿದ್ದಾರೆ.
ಕೆ ಚಂದ್ರಶೇಖರ್ ರಾವ್ ಸರ್ಕಾರವು ಬರೋಬ್ಬರಿ 48000 ಮಂದಿ ನೌಕರರನ್ನು ಕೆಲಸದಿಂದಲೇ ವಜಾಗೊಳಿಸಿದ ಬಳಿಕವೂ ಮುಷ್ಕರ ಮುಂದುವರೆದಿದೆ. TSRTC ಕಂಡೆಕ್ಟರ್ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಖಮ್ಮಂ ಪೊಲೀಸರು ತಿಳಿಸಿದ್ದಾರೆ.
ತೆಲಂಗಾಣ ಸಾರಿಗೆ ಮುಷ್ಕರಕ್ಕೆ ಇಬ್ಬರು ನೌಕರರು ಬಲಿ, ಉದ್ವಿಗ್ನ ಪರಿಸ್ಥಿತಿ
ಮೃತ ಮಹಿಳೆಯನ್ನು ನೀರ್ಜಾ ಎಂದು ಗುರುತಿಸಲಾಗಿದೆ, ಸಟ್ಟುಪಲ್ಲಿ ಡಿಪೋಗೆ ಸೇರಿದ ಸಾರಿಗೆ ಸಂಸ್ಥೆ ವಾಹನಗಳಲ್ಲಿ ಈಕೆ ಕಾರ್ಯ ನಿರ್ವಹಿಸುತ್ತಿದ್ದರು. ಖಾನಾಪುರಂ ಹವೇಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನೀರ್ಜಾ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಕುಟುಂಬಸ್ಥರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಆಕ್ಟೋಬರ್ 05ರಂದು ಆರಂಭವಾದ ಆರ್ ಟಿಸಿ ಮುಷ್ಕರದಿಂದಾಗಿ ನೀರ್ಜಾ ಭಾರಿ ಖಿನ್ನತೆಗೊಳಗಾಗಿದ್ದಳು, ಭವಿಷ್ಯದ ಬಗ್ಗೆ ಚಿಂತಿಸಿ ಕೊರಗಿದ್ದಳು ಎಂದು ಹೇಳಿದ್ದಾರೆ.
ಸಿ ಆರ್ ಪಿಸಿ ಸೆಕ್ಷನ್ 174 ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅಟಾಪ್ಸಿಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ಕಳಿಸಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಆತ್ಮಹತ್ಯೆ ಕಾರಣ ಸ್ಪಷ್ಟವಾಗಲಿದೆ ಎಂದಿದ್ದಾರೆ.
ಶೀಘ್ರದಲ್ಲಿಯೇ ರಸ್ತೆ ಸಾರಿಗೆ ಸಂಸ್ಥೆಗೆ ಹೊಸ ನೌಕರರನ್ನು ಸೇರಿಸಿಕೊಳ್ಳುವ ನೇಮಕಾತಿ ಪ್ರತಿಕ್ರಿಯೆ ಪ್ರಾರಂಭ ಮಾಡುತ್ತೇವೆ ಎಂದು ಸಿಎಂ ಈಗಾಗಲೇ ಹೇಳಿದ್ದಾರೆ. ಆದರೆ ವಜಾಗೊಂಡಿರುವ ನೌಕರರು ಪ್ರತಿಭಟನೆ ಆರಂಭಿಸಿದ್ದು, ಅವರಿಗೆ ಪ್ರತಿಭಟನೆಗೆ ಪೊಲೀಸರು ಅವಕಾಶ ನಿರಾಕರಿಸಿದ್ದಾರೆ.
ತಮಗಾದ ಅನ್ಯಾಯ ಸರಿಪಡಿಸುವಂತೆ ಚಾಲಕ ಶ್ರೀನಿವಾಸ ರೆಡ್ಡಿ (48) ಹಾಗೂ ಸುರೇಂದ್ರ ಗೌಡ (36) ಸಾವಿಗೆ ಶರಣಾಗಿದ್ದಾರೆ. ಆದರೆ ತೆಲಂಗಾಣ ಸರ್ಕಾರ ತನ್ನ ಹಠ ಮುಂದುವರೆಸಿದ್ದು, ಪ್ರತಿಭಟನಾ ನಿರತರ ಜೊತೆ ಮಾತುಕತೆ ನಡೆಸಲು ಮುಂದಾಗಿಲ್ಲ. ಮುಷ್ಕರ ನಿರತ ಕಾರ್ಮಿಕರು 26 ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಪಟ್ಟು ಹಿಡಿದಿದ್ದಾರೆ.