ಕಳವಿಭಾಗಿ ಗ್ರಾಮದಲ್ಲಿ 85 ವರ್ಷದ ಅಜ್ಜಿಗೆ ವಂಚಿಸಿದ ಕುರಿಗಾಹಿ ಕುಟುಂಬ
ಚಿತ್ರದುರ್ಗ, ನವೆಂಬರ್, 11: ಹಿರಿಯೂರು ತಾಲೂಕಿನ ಕಳವಿಭಾಗಿ ಗ್ರಾಮದಲ್ಲಿ 85 ವರ್ಷದ ನಿಂಗಮ್ಮ ಎನ್ನುವ ಅಜ್ಜಿಗೆ ನಾಲ್ವರು ಕುರಿಗಾಹಿಗಳು ಸೇರಿ ವಂಚಿಸಿ ಆಸ್ತಿಯನ್ನು ಕಬಳಿಸಿದ್ದಾರೆ. ಈ ನಾಲ್ವರು ಅಜ್ಜಿಯ ಮನೆಗೆ ನೀರು ಕುಡಿಯಲು ಹೋಗಿ ಆಪ್ತರಂತ ನಟಿಸಿದ್ದಾರೆ. ನಂತರ ಅಜ್ಜಿಯ ಜೊತೆ ಒಡನಾಟ ಬೆಳೆಸಿದ್ದು, ಅಜ್ಜಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ವೃದ್ಧಾಪ್ಯ ವೇತನ ಮಾಡಿಸಿಕೊಡುವುದಾಗಿ ನಂಬಿಸಿ 3 ಹೆಕ್ಟೇರ್ 36 ಗುಂಟೆ ಜಮೀನನ್ನು ಅಕ್ರಮವಾಗಿ ಕಬಳಿಸಿದ್ದಾರೆ.
ಹಿರಿಯೂರು ತಾಲೂಕು ಸಂಗೇನಹಳ್ಳಿ ಗ್ರಾಮದ ಕುರಿ ಜಗನ್ನಾಥ್ ನಾಗಜ್ಜನಕಟ್ಟೆ ಗ್ರಾಮದ ಕೆಂಚಲಿಂಗಪ್ಪನ ಜೊತೆ ಸೇರಿದ್ದ. ಅಲ್ಲದೇ ಪೂಜಾರಿ ಗಿಡ್ಡಪ್ಪ ಆಲಿಯಾಸ್ ನಿಂಗಪ್ಪನ ಜೊತೆ ಸೇರಿ ಅಜ್ಜಿಯ ಜಮೀನನ್ನು ಅಕ್ರಮ ದಾಖಲೆಗಳ ಮೂಲಕ ಯಾಮಾರಿಸಿದ್ದಾರೆ. ಇವರ ವಂಚನೆಯ ಬಗ್ಗೆ ತಿಳಿದ ಅಜ್ಜಿ ಚಿತ್ರದುರ್ಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಕಳವಿಭಾಗಿ ಗ್ರಾಮದ 85 ವರ್ಷದ ನಿಂಗಮ್ಮ ಕೋಂ ಲೇಟ್ ಮಲ್ಲಪ್ಪ ಇದೀಗ ಎಲ್ಲವನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಕೋರಿ ಮೂಲಕ ಜಮೀನು ಸಾಗುವಳಿ ಮಾಡುತ್ತಿದ್ದ ಗುಳಗೊಂಡನಹಳ್ಳಿ ಪೂಜಾರಿ ಗಿಡ್ಡಪ್ಪ ಅಜ್ಜಿಗೆ ಆಪ್ತರಾಗಿದ್ದರು. ಈ ವೇಳೆ ಗಿಡ್ಡಪ್ಪ ತನ್ನ ಮಗಳು ವೀರಮ್ಮ ಮತ್ತು ವೀರಮ್ಮನ ಗಂಡ ಕುರಿ ಜಗನ್ನಾಥ್ ಅವರನ್ನು ಕರೆಸಿ ಜಮೀನಿನಲ್ಲಿ ಕುರಿಮಂದೆ ಬಿಟ್ಟರೇ ಬೆಳೆ ಚೆನ್ನಾಗಿ ಬರುತ್ತದೆ ಎಂದು ಹೇಳಿದ್ದರು.

ಅಜ್ಜಿ ಆಸ್ತಿ ಕಬಳಿಸಿದ ಕುರಿಗಾಯಿಗಳು
ಕುರಿ ಕಾಯುವ ಕುಟುಂಬವೊಂದು ಹರ್ತಿಕೋಟೆ ಗ್ರಾಮದ ಸರ್ವೆ ನಂಬರ್ 322/4ರ 3 ಹೆಕ್ಟೇರ್ 36 ಗುಂಟೆ ಅಜ್ಜಿಯ ಜಮೀನಿನಲ್ಲಿ ಬೀಡುಬಿಟ್ಟಿತ್ತು. ದಿನ ಕಳೆದಂತೆ ಕುರಿಗಾಹಿ ಕುಟುಂಬ ಅಜ್ಜಿಗೆ ಹತ್ತಿರವಾಯಿತು. ಆರೋಪಿಗಳಾದ ಗಿಡ್ಡಪ್ಪ, ಗಿಡ್ಡಪ್ಪನ ಮಗಳು ವೀರಮ್ಮ, ವೀರಮ್ಮನ ಗಂಡ ಕುರಿ ಜಗನ್ನಾಥ್ ಸಂಚು ರೂಪಿಸಿದ್ದರು. ಮೊದಲೇ ಓದು, ಬರಹ, ಹಣವನ್ನು ಎಣಿಸುವುದಕ್ಕೂ ಬರುವುದಿಲ್ಲ ಎಂದು ತಿಳಿದು ಅಜ್ಜಿಯನ್ನು ಯಾಮಾರಿಸಲು ಮುಂಚಿತವಾಗಿಯೇ ಹೊಂಚು ಹಾಕಿದ್ದಾರೆ. ನಿನಗೆ ಸರ್ಕಾರದಿಂದ ಸಂಬಳ ಬರುವಂತೆ ಮಾಡಿಕೊಡುತ್ತೇವೆ ಹಿರಿಯೂರಿಗೆ ಹೋಗಿ ಫೋಟೋ ತೆಗೆಸಬೇಕು ಎಂದು ಅಜ್ಜಿಗೆ ಹೇಳಿ ಕರೆದುಕೊಂಡು ಹೋಗಿದ್ದಾರೆ.

ನಕಲಿ ದಾಖಲೆ ಸೃಷ್ಟಿ, ಆಸ್ತಿ ಕಬಳಿಕೆ
ಗೊತ್ತಿಲ್ಲದೇ ನಿಂಗಜ್ಜಿಯ ಜಮೀನನ್ನು ಗಿಡ್ಡಪ್ಪ ಕಬಳಿಸಿ ನಕಲಿ ದಾಖಲೆಯನ್ನು ಸೃಷ್ಟಿಸಿದ್ದಾರೆ. ರಿಜಿಸ್ಟಾರ್ ಆಫೀಸ್ನಲ್ಲಿ ಕೆಲಸ ಮಾಡಿಸಿಕೊಂಡು ಅಜ್ಜಿಯನ್ನು ಕರೆತಂದು ಕುರಿಮಂದೆಯೊಳಗೆ ಬಿಟ್ಟು ಪರಾರಿ ಆಗಿದ್ದಾರೆ. ಅಜ್ಜಿಗೆ ಆಸ್ತಿ ಸೇರಿದಂತೆ ಒಂದು ರೂಪಾಯಿ ನೀಡದೆ ಕ್ರಯಪತ್ರ ಮಾಡಿಸಿಕೊಂಡ ಗಿಡ್ಡಪ್ಪ ತನ್ನ ಮಗಳಾದ ವೀರಮ್ಮ ಜಗನ್ನಾಥ್ಗೆ ಇದೇ ಜಮೀನನ್ನು ದಾನಪತ್ರ ಮಾಡಿಸಿದ್ದಾನೆ. ಇದಕ್ಕೆ ಸಾಕ್ಷಿಯಾಗಿ ವೀರಮ್ಮನ ಮಗ ಮೋಹನ್ ಮತ್ತು ಇದೇ ಕೆಂಚ ಮತ್ತು ಜಗನ್ನಾಥ್ನಿಂದ ಸಾಲ ಪಡೆದ ಕೆಲವರು ಸಹಿಹಾಕಿದ್ದಾರೆ.

ಅಜ್ಜಿ ಆಸ್ತಿ ವಂಚಿಸಿದ ಖತರ್ನಾಕ್ ಕುಟುಂಬ
ವೀರಮ್ಮ ಜಗನ್ನಾಥ ನಮ್ಮ ಮನೆಗೆ ಆಗಾಗ ಬಂದು ಹೋಗುತ್ತಿದ್ದರು. ಇವರು ನಮ್ಮ ಕುರುಬ ಸಮುದಾಯದವರು ಆಗಿರುವುದರಿಂದ ನಾನು ಅಡುಗೆ ಮಾಡಿಕೊಡುತ್ತಿದ್ದೆ. ಮತ್ತು ಅವರು ಕಳವಿಭಾಗಿ ಸುತ್ತಮುತ್ತ ಕುರಿ ಮೇಯಿಸಲು ಬರುತ್ತಿದ್ದಾಗ ನನಗೆ ಅಡುಗೆ ಮಾಡಿಕೊಡುವಂತೆ ಹೇಳುತ್ತಿದ್ದರು. ಆಗ ನಾನು ಸಹಕರಿಸುತ್ತಾ ಬಂದಿದ್ದೆ. ಒಮ್ಮೆ ಜಮೀನಿನಲ್ಲಿ ಕುರಿಮಂದೆ ಬಿಟ್ಟಿದ್ದರು. ಆಗ ನಾನು ನಮ್ಮವರೇ ಎಂದು ತಿಳಿದು ಸುಮ್ಮನಿದ್ದೆ. ಇವರ ಸಂಚು ಬುದ್ಧಿಯನ್ನು ನಾನು ತಿಳಿಯಲಿಲ್ಲ. ಒಮ್ಮೆ ಇವರು ನೀನು ಒಬ್ಬಳೇ ಯಾಕೆ ಹಳೆಮನೆಯಲ್ಲಿ ಇರುತ್ತೀಯಾ, ನಮ್ಮ ಜೊತೆ ಇರು ಅಂತಾ ನನ್ನನ್ನು ಪುಸಲಾಯಿಸಿ ಕರೆದುಕೊಂಡು ಹೋದರು. ಅವರ ಜೊತೆ ಕುರಿಕಾಯುವ ಸ್ಥಳಗಳಲ್ಲಿ ಚಳಿ, ಮಳೆ, ಗಾಳಿ ಬಿಸಿಲು ಎನ್ನದೇ ವಾಸವಾಗಿದ್ದೆ.

ಉದ್ದೇಶಪೂರ್ವಕವಾಗಿ ನಂಬಿಕೆ ದ್ರೋಹ
ಮಳೆಗಾಲದಲ್ಲಿ ಕಳವಿಭಾಗಿಯ ಮನೆಯೂ ಬಿದ್ದುಹೋಗಿ ನನ್ನ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಸಂಬಳ ಬರುತ್ತಿದ್ದ ವೃದ್ದಾಪ್ಯವೇತನ ಪತ್ರ ಎಲ್ಲವೂ ಹಾಳಾಗಿದ್ದವು. ಆಗ ವೀರಮ್ಮ, ವೀರಮ್ಮನ ಗಂಡ ಜಗನ್ನಾಥ, ನಾಗಜ್ಜನಕಟ್ಟೆ ಕೆಂಚಪ್ಪ ಮತ್ತು ವೀರಮ್ಮನ ತಂದೆ ಗಿಡ್ಡಪ್ಪ ಅವರು ನನಗೆ ತಿಳಿಯದಂತೆ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮಾಡಿಸಿ ಮತ್ತೆ ಸಂಬಳ ಬರುವಂತೆ ಮಾಡುತ್ತೇವೆ ಎಂದು ವಿಷಯಾಂತರ ಮಾಡಿದ್ದರು. ಆ ಸಂದರ್ಭದಲ್ಲಿ ನನ್ನ ಆಸ್ತಿಯನ್ನು ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ. ಅಲ್ಲದೆ ಕ್ರಯ ಪತ್ರ ಮಾಡಿಸಿ ನಗದು ಹಣ ನೀಡಿರುವಂತೆ ಪತ್ರದಲ್ಲಿ ಸುಳ್ಳಾಗಿ ತಿಳಿಸಿದ್ದಾರೆ. ನಾನು ಅನಕ್ಷರಸ್ಥೆ ಆಗಿದ್ದು, ನನಗೆ ಇವರು ಉದ್ದೇಶಪೂರ್ವಕವಾಗಿ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಅಜ್ಜಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನನ್ನ ದಾಖಲೆಗಳನ್ನು ಸೃಷ್ಟಿಸಿಕೊಂಡು ಇವರು ಜಮೀನನ್ನು 2,73,000 ಸಾವಿರ ರೂಪಾಯಿಗೆ ಗಿಡ್ಡಪ್ಪ ಕ್ರಯ ಮಾಡಿಕೊಂಡಿದ್ದಾರೆ. ನಂತರ ತನ್ನ ಮಗಳಾದ ವೀರಮ್ಮ ಅವರಿಗೆ ದಾನಪತ್ರ ಮಾಡಿಸಿಕೊಂಡಿದ್ದಾರೆ. ನನಗೆ ಮತ್ತು ನನ್ನ ಕುಟುಂಬಸ್ಥರಿಗೆ ತಿಳಿಯದಂತೆ ವಂಚನೆಯ ಮೂಲಕ ಆಸ್ತಿ ಕಬಳಿಸಿದ್ದಾರೆ. ಅಲ್ಲದೆ ನನಗೆ ತಿಳಿಯದಂತೆ ದಾನವನ್ನು ಮಾಡಿಕೊಂಡಿದ್ದಾರೆ. ತನ್ನದೇ ಜಮೀನನ್ನು ಅಡವಿಟ್ಟು ಟ್ರ್ಯಾಕ್ಟರ್ ತಂದಿದ್ದಾರೆ, ನನ್ನ ಜಮೀನನ್ನು ನನಗೆ ಕೊಡಿಸಿ ಎಂದು ಅಜ್ಜಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನಂತರ ಗ್ರಾಮಲೆಕ್ಕಾಧಿಕಾರಿ ಮತ್ತು ರಾಜಸ್ವನಿರೀಕ್ಷಕರು ಅಜ್ಜಿ ವಾಸವಿದ್ದ ಕಳವಿಭಾಗಿ ಬದಲು ಹರ್ತಿಕೋಟೆಯಲ್ಲಿ ಮಹಜರು ಮಾಡಿದ್ದಾರೆ. ತಿಳುವಳಿಕೆ ಚೀಟಿ ನೀಡಿರುವುದು ಎಲ್ಲವೂ ಗುಪ್ತವಾಗಿಯೇ ನಡೆದಿದೆ. ಇದು ಅಜ್ಜಿಗೆ ಮಾಡಿದ ಒಳಸಂಚು ಮತ್ತು ಮೋಸದ ಕೃತ್ಯ ಎನ್ನುವುದು ತಿಳಿದುಬಂದಿದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications