ರಾಜಕೀಯಕ್ಕೆ ಎಂಟ್ರಿ: ಮತ್ತೊಮ್ಮೆ ಸುಳಿವು ಕೊಟ್ಟ ರಜನೀಕಾಂತ್
ಸೋಮವಾರವಷ್ಟೇ, ಮುಂದೊಂದು ದಿನ ರಾಜಕೀಯಕ್ಕೆ ಬರುವ ಸಾಧ್ಯತೆಯಿದೆ ಎಂದು ಹೇಳಿದ್ದ ರಜನೀಕಾಂತ್ ಶುಕ್ರವಾರ ಮತ್ತೊಂದು ಹೇಳಿಕೆ ನೀಡಿ ರಾಜಕೀಯ ಯುದ್ಧಕ್ಕೆ ಎಲ್ಲರೂ ಸಜ್ಜಾಗಬೇಕು ಎಂದಿರುವುದು ಅಭಿಮಾನಿಗಳಲ್ಲಿ ಹೊಸ ಕುತೂಹಲ ಹುಟ್ಟುಹಾಕಿದೆ.
ಚೆನ್ನೈ, ಮೇ 19: ರಾಜಕೀಯಕ್ಕೆ ಸದ್ಯಕ್ಕೆ ಬರೋಲ್ಲ ಎನ್ನುತ್ತಲೇ ದೈವೇಚ್ಛೆ ಇದ್ದಾಗ ಆ ಬಗ್ಗೆ ಯೋಚನೆ ಮಾಡುವೆ ಎಂದು ಮೂರು ದಿನಗಳ ಹಿಂದಷ್ಟೇ ಹೇಳಿದ್ದ ರಜನೀಕಾಂತ್, ಶುಕ್ರವಾರ ಇದ್ದಕ್ಕಿದ್ದಂತೆ ತಮ್ಮ ರಾಜಕೀಯ ಪ್ರವೇಶ ಕುರಿತಂತೆ ಕುತೂಹಲದ ಹೇಳಿಕೆಯೊಂದನ್ನು ಹರಿಯಬಿಟ್ಟು ಅಭಿಮಾನಿಗಳನ್ನು ಮತ್ತೊಮ್ಮೆ ಹುಚ್ಚೆಬ್ಬಿಸಿದ್ದಾರೆ.
ತಮ್ಮ ಅಭಿಮಾನಿಗಳಲ್ಲಿ ಭೇಟಿ ಮಾಡಲು ಮೇ 15ರಿಂದ 19ವರೆಗೆ ಏರ್ಪಡಿಸಲಾಗಿದ್ದ ಸಮಾರಂಭದ ಅಂತಿಮ ದಿನವಾದ ಶುಕ್ರವಾರ, ರಜನೀಕಾಂತ್ ಮತ್ತೊಮ್ಮೆ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದರು. ಯುದ್ಧ ಬಂದಾಗ ರಾಜಕೀಯ ಆರಂಭಿಸೋಣ. ರಾಜಕೀಯ ಹೋರಾಟಕ್ಕೆ ಎಲ್ಲರೂ ಸಿದ್ಧರಾಗಿ ಎಂದು ಅವರು ತಮ್ಮ ಅಭಿಮಾನಿಗಳಿಗೆ ಕಿವಿಮಾತು ಹೇಳಿರುವುದು ಎಲ್ಲರಲ್ಲೂ ಪುಳಕ ಹೆಚ್ಚಿಸಿದೆ.[ಜನಿ ಭೇಟಿಗೆ ಮನೆ ಬಾಗಿಲಿಗೆ ಬಂದ ಮಲೇಷ್ಯಾ ಪ್ರಧಾನಿ]
ಅಲ್ಲದೆ, ಭಾರತೀಯ ಸಮಾಜದ ವ್ಯವಸ್ಥೆ ಬದಲಾಗಬೇಕು. ಈ ವ್ಯವಸ್ಥೆ ಬದಲಿಸಲು ಶ್ರಮಪಡಬೇಕು ಎಂದು ಹೇಳಿರುವುದು ಅವರು ರಾಜಕೀಯಕ್ಕೆ ಬರುವುದನ್ನು ಸ್ಪಷ್ಟವಾಗಿಸಿದೆ ಎಂದು ಕೆಲ ಮಾಧ್ಯಮಗಳು ವಿಶ್ಲೇಷಿಸಿವೆ.
ಶುಕ್ರವಾರ ರಜನಿ ಹೇಳಿದ ಆ ನುಡಿಮುತ್ತುಗಳ ಅಕ್ಷರ ರೂಪ ಇಲ್ಲಿದೆ. ತಮ್ಮ ರಾಜಕೀಯ ಜೀವನದ ಆರಂಭ ಕುರಿತಂತೆ ಇತ್ತೀಚೆಗೆ, ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ ಹಾಗೂ ತಮಿಳು ನಟ ಶರತ್ ಕುಮಾರ್ ಹೇಳಿದ ಹಗುರವಾದ ಮಾತುಗಳಿಗೆ ಇಲ್ಲಿ ಉತ್ತರ ಕೊಟ್ಟಿದ್ದಾರೆ ಅವರು.[ಟಿಪ್ಪು ಕತ್ತಿ ಹಿಡಿಯಲು ಹೊರಟ ರಜನಿಗೆ ಚುಚ್ಚಿದ್ದು ಯಾರು?]
ಸುಬ್ರಮಣ್ಯಂ ಸ್ವಾಮಿ ಅವರು, ರಜನಿ ರಾಜಕೀಯದಲ್ಲಿ ಒಬ್ಬ ಫ್ಲಾಪ್ ನಟ ಆಗುತ್ತಾರೆ ಎಂದಿದ್ದರೆ, ಶರತ್ ಕುಮಾರ್ ಅವರು ಎಲ್ಲಿಂದಲೋ ಬಂದವರನ್ನು ನಾವು ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲು ಬಿಡುವುದಿಲ್ಲ. ನಮ್ಮನ್ನು ಆಳುವ ವ್ಯಕ್ತಿ ಕೇವಲ ಈ ತಮಿಳು ನೆಲದಲ್ಲೇ ಹುಟ್ಟಿದವನಾಗಿರಬೇಕು ಎಂದಿದ್ದರು.
ವ್ಯವಸ್ಥೆ ಹದಗೆಟ್ಟಿದೆ
ರಾಜಕಾರಣದಲ್ಲಿ ಸಾಕಷ್ಟು ದಕ್ಷರಿದ್ದಾರೆ. ಅದರಲ್ಲೊಬ್ಬರು ಎಂ.ಕೆ. ಸ್ಟಾಲಿನ್. ಅವರಂತೆಯೇ ಮತ್ತೊಬ್ಬ ದಕ್ಷ ರಾಜಕಾರಣಿ ಅನ್ಬುಮಣಿ ರಾಮ್ ದಾಸ್. ದೇಶ ವಿದೇಶಗಳಲ್ಲಿ ತಿರುಗಾಡಿರುವ ಅವರು, ಈಗಾಗಲೇ ಸಾಕಷ್ಟು ಅನುಭವಗಳನ್ನು ಪಡೆದಿದ್ದಾರೆ. ತಿರುಮಾವಲನ್ ಮತ್ತೊಬ್ಬ ಪ್ರಬುದ್ಧ ಹಾಗೂ ಉತ್ತಮ ಆಡಳಿತಾತ್ಮಕ ದೃಷ್ಟಿಕೋನ ಹೊಂದಿರುವ ರಾಜಕಾರಣಿ. ಆದರೆ, ಅವರಿಗೆ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಉತ್ತಮ ಆಡಳಿತ ನೀಡಲು ಸಾಧ್ಯವಾಗಿಲ್ಲ.
ವಿರೋಧವಿದ್ದರೇನೇ ಬೆಳೆಯಲು ಸಾಧ್ಯ
ಬೆಂಬಲ ಹಾಗೂ ವಿರೋಧಗಳು ಯಾವಾಗಲೂ ಜತೆಜತೆಯಲ್ಲೇ ಇರುತ್ತವೆ. ವಿರೋಧಗಳಿಲ್ಲದೆ ನಾವು ಎಂದಿಗೂ ಬೆಳೆಯಲಾರೆವು. ರಾಜಕೀಯದಲ್ಲಂತೂ ವಿರೋಧ ಇದ್ದೇ ಇರುತ್ತದೆ. ಅದೆಲ್ಲವನ್ನು ಎದುರಿಸಿಕೊಂಡೇ ಬೆಳೆಯಬೇಕಿದೆ. (ಸುಬ್ರಮಣ್ಯಂ ಸ್ವಾಮಿ ಮಾತುಗಳಿಗೆ ಪ್ರತಿಕ್ರಿಯಿಸಿ).
ಆದರೆ, ನಾನು ಈಗ ತಮಿಳುನಾಡಿನವ
ನನಗೀಗ 67 ವರ್ಷ. ಕರ್ನಾಟಕದಲ್ಲಿ ನಾನು 23 ವರ್ಷ ಇದ್ದೆ. ತಮಿಳುನಾಡಿಗೆ ಬಂದು 42 ವರ್ಷಗಳೇ ಕಳೆದಿವೆ. ನಾನು ನಿಮ್ಮೊಂದಿಗೇ ಬೆಳೆದಿದ್ದೇನೆ. ನೀವು ನನ್ನನ್ನು ಸಾಕಿ, ಸಲಹಿ ಒಬ್ಬ ತಮಿಳಿಗನನ್ನಾಗಿಯೇ ಮಾಡಿದ್ದೇನೆ. ನನಗೆ ಈ ಪ್ರಪಂಚದಲ್ಲಿ ಜೀವಿಸಲು ಇಷ್ಟವಾಗುವ ಸ್ಥಳವೆಂದರೆ ಅದು ತಮಿಳುನಾಡು ಮಾತ್ರ . (ನಟ ಶರತ್ ಕುಮಾರ್ ಟೀಕೆಗಳಿಗೆ ನೀಡಿದ ಉತ್ತರ).
ಹಣದಾಸೆಯಿಂದ ರಾಜಕೀಯಕ್ಕೆ ಬರೋದು ತಪ್ಪು
ನನ್ನ ಕೆಲವಾರು ಸ್ನೇಹಿತರು ನನಗೆ ರಾಜಕೀಯಕ್ಕೆ ಬರುವಂತೆ ಸಲಹೆ ನೀಡಿದ್ದಾರೆ. ರಾಜಕೀಯಕ್ಕೆ ಬರುವುದು ತಪ್ಪಲ್ಲ. ಆದರೆ, ಹಣ ಮಾಡುವ ಉದ್ದೇಶದಿಂದಲೇ ರಾಜಕೀಯಕ್ಕೆ ಬರುವುದು ಸರಿಯಲ್ಲ. ನಾನು ರಾಜಕೀಯಕ್ಕೆ ಬಂದರೆ ನನ್ನ ಸಿದ್ಧಾಂತಗಳು ಉಳಿದವರಿಗಿಂತ ಬೇರೆಯದ್ದೇ ಆಗಿರುತ್ತವೆ.
ಅಭಿಮಾನಿಗಳಿಗೆ ಕೃತಜ್ಞತೆ
ನನ್ನ ಅಭಿಮಾನಿಗಳನ್ನು ಪ್ರತ್ಯೇಕವಾಗಿ ಭೇಟಿಯಾಗುವ ಈ ಸಮಾರಂಭವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸಬಯಸುತ್ತೇನೆ. ಇಲ್ಲಿನ ಭದ್ರತಾ ಸಿಬ್ಬಂದಿಗೂ ನಾನು ನನ್ನ ನಮನಗಳನ್ನು ಸಲ್ಲಿಸುತ್ತೇನೆ. ಈ ಎಲ್ಲಕ್ಕಿಂತ ಮಿಗಿಲಾಗಿ ವರ್ಷಾನುಗಟ್ಟಲೆ ನನ್ನನ್ನು ಪೋಷಿಸಿದ ಅಭಿಮಾನಿಗಳಿಗೆ ನಾನು ಚಿರಋಣಿ.
{promotion-urls}