ರಾಜ್ಯಾದ್ಯಂತ ಚಳಿ ಪ್ರಮಾಣ ಇನ್ನೂ ಹೆಚ್ಚಾಗಲಿದೆ
ಬೆಂಗಳೂರು, ಫೆಬ್ರವರಿ 2 : ಫೆಬ್ರವರಿ ತಿಂಗಳಿಗೆ ಕಾಲಿಡುತ್ತಿದ್ದಂತೆಯೇ ಚಳಿಯ ಅಬ್ಬರ ತೀವ್ರವಾಗಿದ್ದು, ವಿಪರೀತ ಶೀತಗಾಳಿ ಬೀಸುತ್ತಿದೆ.
ಜನವರಿ ಮಾಸಾಂತ್ಯಕ್ಕೆ ಕಾಲಿಡುತ್ತಿದ್ದಂತೆಯೇ ಬೆಂಗಳೂರಿನ ಹವಾಮಾನದಲ್ಲಿ ಬದಲಾವಣೆ ಕಾಣಿಸಿಕೊಂಡಿದೆ. ಕಳೆದೊಂದು ವಾರದಿಂದ ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇದ್ದ ತಾಪಮಾನ ಇದೀಗ 12 ಡಿಗ್ರಿ ಸೆ. ಬಂದು ತಲುಪಿದೆ.
ಶುಭ್ರ ಆಕಾಶ ಹಾಗೂ ಶೀತ ಗಾಳಿ ಹೆಚ್ಚಾಗುವುದರಿಂದ ಮುಂದಿನ ಮೂರು ದಿನಗಳು ಚಳಿ ಇನ್ನಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಗದಗ, ಚಿಕ್ಕಮಗಳೂರು, ಬೀದರ್, ತುಮಕೂರು, ಬಾಗಲಕೋಟೆ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ 6 ಡಿಗ್ರಿ ಸೆಲ್ಸಿಯಸ್ನಿಂದ 8 ಡಿಗ್ರಿ ಸೆಲ್ಸಿಯಸ್ನಷ್ಟಿದೆ.

ಕನಿಷ್ಠ ಉಷ್ಣಾಂಶದಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಉತ್ತರ ಕರ್ನಾಟಕ ಬಯಲು ಪ್ರದೇಶವಾಗಿರುವುದರಿಂದ ಚಳಿ ಹೆಚ್ಚಾಗಿದ್ದು, ಕನಿಷ್ಠ ಉಷ್ಣಾಂಶದಲ್ಲಿ ಮೂರರಿಂದ ಐದು ಡಿಗ್ರಿಯಷ್ಟು ಕುಸಿತವಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಕನಿಷ್ಠ ಉಷ್ಣಾಂಶ ಒಂದರಿಂದ ಮೂರು ಡಿಗ್ರಿಯಷ್ಟು ಕಡಿಮೆಯಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಚಳಿ ಕೊಂಚ ಹೆಚ್ಚಿದೆ.
ಬೆಂಗಳೂರು ನಗರದಲ್ಲಿ ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆ. ದಾಖಲಾಗಿದ್ದರೆ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ, ಇನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಗರಿಷ್ಠ 29 ಕನಿಷ್ಠ 12 ಡಿಗ್ರಿಸೆ. ಎಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಗರಿಷ್ಠ 29 ಹಾಗೂ ಕನಿಷ್ಠ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಬೀದರ್ ನಲ್ಲಿ ಕನಿಷ್ಠ ತಾಪಮಾನ 8.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.ಇನ್ನು ಒಂದು ವಾರ ಹವಾಮಾನ ಇದೇ ರೀತಿ ಮುಂದುರೆಯಲಿದೆ.












Click it and Unblock the Notifications