Z+ ಸೆಕ್ಯೂರಿಟಿ ಕೇಳಿದ ಜನಾರ್ದನ ರೆಡ್ಡಿ: ಇರಾನ್, ಅಮೇರಿಕಾದಿಂದ ಸೆಕ್ಯೂರಿಟಿ ತರಿಸಿಕೊಳ್ಳಲಿ ಎಂದ ಡಿ ಕೆ ಶಿವಕುಮಾರ್
ಬೆಂಗಳೂರು: ಬಳ್ಳಾರಿ ಬ್ಯಾನರ್ ಗಲಾಟೆ ಸದ್ಯ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ನಡುವೆ ತಮಗೆ ಝಡ್ ಪ್ಲಸ್ ಭದ್ರತೆ ನೀಡಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಜನಾರ್ದನ ರೆಡ್ಡಿ ಮನವಿ ಮಾಡಿದ್ದಾರೆ. ಬಳ್ಳಾರಿಯಲ್ಲಿ ತಮ್ಮ ಮೇಲೆ ಪೂರ್ವ ಯೋಜಿತ ಹತ್ಯೆ ಯತ್ನ ನಡೆದಿದೆ, ಹೀಗಾಗಿ ತನಗೆ ಹಾಗೂ ತಮ್ಮ ಕುಟುಂಬಸ್ಥರಿಗೆ ಝಡ್ ಪ್ಲಸ್ ಭದ್ರತೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಶಾಗೆ ಜನಾರ್ದನ ರೆಡ್ಡಿ ಪತ್ರ ಬರೆದಿದ್ದಾರೆ.
ಇದೀಗ ಜನಾರ್ದನ ರೆಡ್ಡಿ ಝಡ್ ಪ್ಲಸ್ ಭದ್ರತೆ ಕುರಿತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ, ಜನಾರ್ದನ ರೆಡ್ಡಿ ಜಡ್ ಆದರೂ ಕೇಳಲಿ. ಇರಾನ್, ಅಮೆರಿಕಾದಿಂದಾದರೂ ಸೆಕ್ಯುರಿಟಿ ತೆಗೆದುಕೊಂಡು ಬರಲಿ. ಇವರು ಯಾರನ್ನಾದರೂ ನೇಮಿಸಿಕೊಳ್ಳಲಿ. ಬೇಡ ಎಂದವರು ಯಾರು ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೇ ಅವರ ಪಾರ್ಟಿಯ 100 ಜನರನ್ನು ಭದ್ರತೆಗೆ ಇರಿಸಿಕೊಳ್ಳಲಿ ಅಂತ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಬಳ್ಳಾರಿ ಗಲಭೆ ಕುರಿತಾಗಿ ಎಚ್.ಎಂ.ರೇವಣ್ಣ ಅವರ ಸಮಿತಿ ವರದಿ ಕುರಿತು ಮಾತನಾಡಿ, ಬಳ್ಳಾರಿ ಗಲಭೆ ಬಗ್ಗೆ ಎಚ್.ಎಂ.ರೇವಣ್ಣ ಅವರು ಒಳ್ಳೆಯ ಮಾಹಿತಿಗಳನ್ನು ಪಡೆದುಕೊಂಡು ಬಂದಿದ್ದಾರೆ. ಅಧಿಕೃತ ಹಾಗೂ ಅನಧಿಕೃತ ವಿಚಾರಗಳನ್ನು ಭೇಟಿ ಮಾಡಿ ತಿಳಿಸಿದ್ದಾರೆ ಎಂದರು. ಬಳ್ಳಾರಿ ಗಲಭೆಯ ತನಿಖೆಯನ್ನು ಸಿಐಡಿ ಅಥವಾ ಎಸ್ ಐಟಿಗೆ ನೀಡುವ ಆಲೋಚನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವರು ತೀರ್ಮಾನ ಮಾಡುತ್ತಾರೆ. ಈ ಬಗ್ಗೆ ಯಾವ ಚರ್ಚೆಯೂ ನನಗೆ ಗೊತ್ತಿಲ್ಲ ಎಂದರು.
ಗುಂಡು ಸತೀಶ್ ರೆಡ್ಡಿ ಅವರ ಗನ್ ಮ್ಯಾನ್ ದು ಎನ್ನುವ ವರದಿ ಬಗ್ಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಯಾರದ್ದೇ ಆಗಿದ್ದರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ವರದಿ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು.
ಎಲ್ಲಾ ಕಡೆಯೂ ಪ್ರತಿಮೆಗಳನ್ನು ಇಡುತ್ತಾರೆ. ಇದಕ್ಕೆ ಅಸೂಯೆ ಏಕೆ ಪಡಬೇಕು. ವಾಲ್ಮೀಕಿ ಮಹರ್ಷಿಯವರು ಒಂದು ಸಮುದಾಯಕ್ಕೆ ಸೇರಿದವರೇ? ಅವರು ಎಲ್ಲಾ ಸಮುದಾಯದ ಆಸ್ತಿ. ಅವರು ಬರೆದಿರುವ ರಾಮಯಣವನ್ನು ಎಲ್ಲರೂ ಓದುವುದಿಲ್ಲವೇ?. ಹೀಗಿರುವಾಗ ಅವರ ಬ್ಯಾನರ್ ಹಾಕಲು ಜನಾರ್ಧನ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದು ಸರಿಯಲ್ಲ ಎಂದರು.












Click it and Unblock the Notifications