ಕನ್ನಡ ವಿದ್ಯಾರ್ಥಿಗೆ ಧಮ್ಕಿ ಹಾಕಿದ್ದ ಹಿಂದಿ ವಾರ್ಡನ್ ಕೆಲಸದಿಂದ ವಜಾ, ಎಫ್ಐಆರ್ ದಾಖಲು
ಕನ್ನಡ ಮಾತನಾಡುವ ವಿಚಾರವಾಗಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಕನ್ನಡ ವಿದ್ಯಾರ್ಥಿಗೆ ಹಾಸ್ಟೆಲ್ ವಾರ್ಡನ್ ಧಮ್ಕಿ ಹಾಕಿದ್ದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಕನ್ನಡ ಎಲ್ಲ ನಿನ್ನ ಮನೆಯಲ್ಲಿ ಮಾತನಾಡ್ಕೋ, ಇಲ್ಲಿ ನೀನು ಕನ್ನಡ ಮಾತನಾಡಬೇಕೋ ಬೇಡವೋ ಅನ್ನೋದನ್ನ ನಾನು ನಿರ್ಧಾರ ಮಾಡ್ತೀನಿ ಎಂದು ಹಾಸ್ಟೆಲ್ ವಾರ್ಡನ್ ಧಮ್ಕಿ ಹಾಕಿದ್ದ. ಇದೇ ವಿಚಾರವಾಗಿ ಕನ್ನಡಪರ ಹೋರಾಟಗಾರರು ಭಾರೀ ಪ್ರತಿಭಟನೆ ನಡೆಸಿದ ಹಿನ್ನೆಲೆ ಆತನನ್ನು ಕೆಲಸದಿಂದ ವಜಾ ಮಾಡಲಾಗಿದೆ. ಆತನ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದ್ದು, ಪೊಲೀಸರ ಅತಿಥಿಯಾಗಿದ್ದಾನೆ.
ಈತ ಬನ್ನೇರುಘಟ್ಟ ರಸ್ತೆಯ ಎಎಂಸಿ ಕಾಲೇಜಿನ ಹಾಸ್ಟೆಲ್ ವಾರ್ಡನ್ ಎಂದು ತಿಳಿದುಬಂದಿದೆ. ಕಾಲೇಜು ಹಾಸ್ಟೆಲ್ನಲ್ಲಿ ಕನ್ನಡ ಮಾತನಾಡಬಾರದು ಎಂದು ಆತ ಕನ್ನಡ ವಿದ್ಯಾರ್ಥಿಗೆ ಅವಾಜ್ ಹಾಕಿದ್ದ. ಕನ್ನಡ ನಿನ್ನ ಮನೆಯಲ್ಲಿ ಮಾತನಾಡಿಕೋ, ಇದು ಕಾಲೇಜು, ಇಲ್ಲೆಲ್ಲ ನಡೆಯಲ್ಲ ಎಂದಿದ್ದ. ಇದರಿಂದ ಕೋಪಗೊಂಡ ವಿದ್ಯಾರ್ಥಿಗಳು ಕನ್ನಡ ಯಾಕೆ ಮಾತನಾಡಬಾರದು ಎಂದು ಪ್ರಶ್ನಿಸಿದ್ದ. ಅದಕ್ಕೆ ಇಲ್ಲಿ ಕನ್ನಡ ಕಡ್ಡಾಯವಲ್ಲ, ನೀನು ಕನ್ನಡದಲ್ಲಿ ಮಾತನಾಡಬೇಕೋ, ಹಿಂದಿಯಲ್ಲಿ ಮಾತನಾಡಬೇಕೋ ಎಂದು ನಿರ್ಧಾರ ಮಾಡುವುದು ನಾನು. ಕನ್ನಡ ಮಾತನಾಡುವುದಾದ್ರೆ ನಿನ್ನ ಮನೆಯಲ್ಲೇ ಇರು, ಇಲ್ಲಿ ಬೇಕಾಗಿಲ್ಲ. ಇದು ನಿನ್ನ ಮನೆಯಲ್ಲ, ಕಾಲೇಜು ಎಂದು ಹಿಂದಿಯಲ್ಲೇ ಬೆದರಿಕೆ ಹಾಕಿದ್ದ.

ಮುತ್ತಿಗೆ ಹಾಕಿದ್ದ ವಿದ್ಯಾರ್ಥಿಗಳು
ಇದನ್ನು ವಿಡಿಯೋ ಮಾಡಿಕೊಂಡಿದ್ದ ವಿದ್ಯಾರ್ಥಿಗಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ. ಬಳಿಕ ಅದೇ ಕಾಲೇಜಿನ ವಿದ್ಯಾರ್ಥಿಗಳು ವಾರ್ಡನ್ಗೆ ಮುತ್ತಿಗೆ ಹಾಕಿ ಕ್ಷಮೆ ಕೇಳುವಂತೆ ಜೋರು ಮಾಡಿದ್ದರು. ಮತ್ತೊಂದೆಡೆ ಕನ್ನಡ ಪರ ಹೋರಾಟಗಾರರು ಕೂಡ ಈ ವಿಡಿಯೋ ನೋಡಿ ಗರಂ ಆಗಿದ್ದರು. ಕೂಡಲೇ ಆತನನ್ನು ಕೆಲಸದಿಂದ ವಜಾ ಮಾಡದಿದ್ದರೆ, ಕಾಲೇಜಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆಯೂ ನೀಡಿದ್ದರು.
ಆದರೆ ಕಾಲೇಜು ಕಡೆಯಿಂದ ಯಾವುದೇ ಕ್ರಮ ಜರುಗದ ಕಾರಣ ಇಂದು ರೂಪೇಶ್ ರಾಜಣ್ಣ ಸೇರಿದಂತೆ ಕನ್ನಡ ಪರ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜು ಮುಂದೆ ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಿದರು. ಕನ್ನಡಕ್ಕೆ ಅವಮಾನ ಮಾಡಿದ್ದ ಕನ್ನಡ ದ್ರೋಹಿಯನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಪಟ್ಟು ಹಿಡಿದರು. ಕೊನೆಗೆ ಕನ್ನಡಿಗರ ಆಕ್ರೋಶಕ್ಕೆ ಮಣಿದ ಕಾಲೇಜು ಆಡಳಿತ ಆತನನ್ನು ಕೆಲಸದಿಂದ ವಜಾ ಮಾಡಿದೆ. ಬಳಿಕ ಬನ್ನೇರುಘಟ್ಟ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಆತನನ್ನು ವಶಕ್ಕೆ ಪಡೆದಿದ್ದಾರೆ.
ವಾರ್ಡನ್ ಕೆಲಸಕ್ಕೆ ಕನ್ನಡಿಗರ ನೇಮಕ
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರೂಪೇಶ್ ರಾಜಣ್ಣ, ಕನ್ನಡಪರ ಸಂಫಟನೆಗಳ ನೇತೃತ್ವದಲ್ಲಿ ನಾವೆಲ್ಲರೂ ಇಂದು ಕಾಲೇಜಿಗೆ ಮುತ್ತಿಗೆ ಹಾಕಿ ಕನ್ನಡಿಗರಿಗೆ, ಕನ್ನಡಕ್ಕೆ ಅವಮಾನ ಮಾಡಿದ್ದ ಕನ್ನಡ ದ್ರೋಹಿ ಯನ್ನು ಕೆಲಸದಿಂದ ವಜಾ ಮಾಡಿಸಿದೆವು, ಎಫ್ಐಆರ್ ಕೂಡ ದಾಖಲಿಸಲಾಗಿದೆ. ಆ ವಾರ್ಡನ್ ಹುದ್ದೆಗೆ ಕನ್ನಡಿಗರ ನೇಮಕ ಆಗಲಿದೆ. ಇಂದಿನ ಹೋರಾಟಕ್ಕೆ ಜೊತೆಯಾದ ಎಲ್ಲ ಹೋರಾಟಗಾರರಿಗೂ, ಕನ್ನಡದ ಮನಸುಗಳಿಗೂ ಹಾಗೂ ಪೋಲಿಸ್ ಇಲಾಖೆಯವರಿಗೂ ಧನ್ಯವಾದಗಳು ಎಂದಿದ್ದಾರೆ.
ಬನ್ನೇರುಘಟ್ಟ ಪೊಲೀಸ್ ಠಾಣಾ ಸರಹದ್ದಿನ ಎಎಂಸಿ ಕಾಲೇಜ್ ವಾರ್ಡನ್ ಕನ್ನಡ ಭಾಷೆಗೆ ಸಂಬಂಧಿಸಿದಂತೆ ಮಾತನಾಡಿದ ವಿಡಿಯೋ ವೈರಲ್ ಆಗಿದ್ದು, ಸದರಿ ವಿಡಿಯೋಗೆ ಸಂಬಂಧಿಸಿದಂತೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications