ಅರೇ ಕ್ಷಣ ಮೈಮೆರೆತಿದ್ರು ಕೋಟಿ ಚಿನ್ನದ ಮಾಲು- ಬಿಹಾರದ ಪಾಲು..!
ಬೆಂಗಳೂರು, ಏಪ್ರಿಲ್ 28 : ಸಿರಿವಂತರ ಮನೆಯಲ್ಲಿ ಕಳ್ಳತನವಾಗಿರುತ್ತೆ. ಮಧ್ಯರಾತ್ರಿಯಲ್ಲಿ ಮನೆಗೆ ವಾಪಸ್ಸಾಗುವ ಮನೆಯ ಮಾಲೀಕರಿಗೆ ಕಳ್ಳತನ ನಡೆದಿರೋದು ಗೊತ್ತಾಗುತ್ತೆ. ಆ ಕ್ಷಣವೇ ಪೊಲೀಸರಿಗೆ ಕಳ್ಳತನವಾಗಿರೋ ಬಗ್ಗೆ ಮಾಹಿತಿ ರವಾನೆಯಾಗಿರುತ್ತೆ. ಪೊಲೀಸರು ಅಲರ್ಟ್ ಆಗ್ತಾರೆ. ಮನೆಗೆ ಬಂದು ಕ್ರೈಂ ಸೀನ್ ನೋಡ್ತಾರೆ. ಪ್ಲಾನ್ ಮಾಡಿ ಕಳ್ಳತನ ಮಾಡಿರೋದು ಗೊತ್ತಾಗುತ್ತೆ. ಅದೇ ಪೊಲೀಸರು ಅಲರ್ಟ್ ಆದರೆ ಕಳ್ಳರ ದಾರಿ ಹುಡುಕೋದು ಕಷ್ಟವಲ್ಲ ಅನ್ನೋದಕ್ಕೆ ಹುಳಿಮಾವು ಪೊಲೀಸರ ಅಪರೇಷನ್ ಬಿಹಾರಿಯನ್ಸ್ ನ ಯಶಸ್ಸೇ ಅದ್ಬುತ.
801ರಿಂದ 701ಕ್ಕೆ ಎಂಟ್ರಿ
ಮನೆಯನ್ನು ದೋಚಬೇಕಾದರೆ ಒಂದು ಯೋಜನೆಯನ್ನು ಕಳ್ಳರು ಮಾಡಿರ್ತಾರೆ. ಆ ಯೋಜನೆಯನ್ನು ಕಾರ್ಯ ರೂಪಕ್ಕೆ ತರುವ ಸಲುವಾಗಿ ಸಮಯಕ್ಕಾಗಿ ಕಾಯ್ತಾ ಇರ್ತಾರೆ. ಅದು ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ರೋಷನ್ ಪ್ಲಾಟಿನಂ ಅಪಾರ್ಟ್ಮೆಂಟ್. ಪ್ಲಾಟ್ ನಂಬರ್ 701 ರಲ್ಲಿ ತಜಮುಲ್ಲಾ ಪಾಷ ಎಂಬುವವರು ನಾಲ್ಕು ದಿನದ ಹಿಂದಷ್ಟೇ ಪ್ಲಾಟ್ ಖರೀದಿಸಿ ವಾಸಕ್ಕೆ ಬಂದಿರುತ್ತಾರೆ. ಇವರು ಸಿರಿವಂತರು ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಕಳ್ಳರು 701ರ ಮೇಲಿನ ಮಹಡಿಯ 801 ಸಂಖ್ಯೆ ಖಾಲಿ ಪ್ಲಾಟ್ಗೆ ತೆರೆಳಿದ್ದಾರೆ. ಅಲ್ಲಿಂದ ಡ್ರಿಲ್ ಉಪಯೋಗಿಸಿ ಗೋಡೆ ಕೊರೆದಿದ್ದಾರೆ. ಆ ಬಳಿಕ ಕೆಳಗಿನ ಮಹಡಿಗೆ ಹೋಗಿ ಅಲ್ಲಿ ಸ್ಲೈಡಿಂಗ್ ಕಿಟಕಿ ಮುರಿದು ಮನೆಯ ಒಳಗೆ ಹೋಗಿದ್ದಾರೆ. ಮನೆಯಲ್ಲಿದ್ದ ಕೋಟಿ ಕೋಟಿ ಮೊತ್ತದ ಚಿನ್ನ, ವಜ್ರವನ್ನೆಲ್ಲಾ ದೋಚಿಕೊಂಡು ಎಸ್ಕೇಪ್ ಆಗಿದ್ದಾರೆ.
ಕಳ್ಳರ ಸುಳಿವು ಪತ್ತೆ ಮಾಡಿದ್ದೇಗೆ ಇನ್ಸ್ಪೆಕ್ಟರ್ ಚಂದ್ರಕಾಂತ್..
ಅಪಾರ್ಟ್ಮೆಂಟ್ ನಲ್ಲಿ ಸಿಸಿಟಿವಿ ಇರಬಹುದು ಎಂದು ಚೆಕ್ ಮಾಡುತ್ತಾರೆ. ದುರಾದೃಷ್ಟವಶಾತ್ ಸಿಸಿಟಿವಿಯ ಸ್ವಿಚ್ ಆಫ್ ಆಗಿ ಯಾವುದು ರೆಕಾರ್ಡ್ ಆಗಿರುವುದಿಲ್ಲ. ಅಪಾರ್ಟ್ಮೆಂಟ್ನಲ್ಲಿ ಯಾರು ಬಂದರು, ಯಾರು ಹೋದರು ಎಂಬ ರೆಕಾರ್ಡ್ ಬುಕ್ ಸಹ ಇರೋದಿಲ್ಲ. ಪೊಲೀಸರಿಗೆ ಮತ್ತೊಂದು ಅನುಮಾನ ಮೂಡುತ್ತದೆ. ಪ್ಲಾನ್ ಮಾಡಿ ಕಳ್ಳತನ ಮಾಡಿರೋದ್ರಿಂದ ಇದ್ಯಾರೋ ಗೊತ್ತಿರುವವರೇ ಮಾಡಿರಬಹುದು ಎಂದು ಭಾವಿಸುತ್ತಾರೆ. ಅಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡುವ ಕಾರ್ಮಿಕರ ಶೆಡ್ ಕಡೆಗೆ ಹೋಗುತ್ತಾರೆ. ಆ ಸಮಯದಲ್ಲೇ ಯಾರು ರಾತ್ರಿಯಿಂದ ಇಲ್ಲ ಎಂಬುದನ್ನು ಪರಿಶೀಲಿಸುತ್ತಾರೆ. ಬಬ್ಲು , ಬೋಲಾ, ಶ್ರೀಧರ್ ಎಂಬ ಮೂವರು ಬಿಹಾರ ಮೂಲದವರು ಕಣ್ಮರೆಯಾಗಿರುತ್ತಾರೆ. ಈ ಮೂವರ ಫೋನ್ ನಬರ್ ಪಡೆದು ಫೋನ್ ಮಾಡಿದರೆ ಸ್ವಿಚ್ ಆಫ್ ಬರುತ್ತದೆ. ಅಲ್ಲಿಗೇ ಈ ಮೂವರೇ ಕಳ್ಳರು ಅನ್ನೋದು ಪೊಲೀಸರಿಗೆ ಬಹುತೇಕ ಖಚಿತವಾಗುತ್ತೆ.
ಎಸಿಪಿ ಪವನ್ರಿಂದ ಅಪರೇಷನ್ ಬಿಹಾರಿಯನ್ಸ್ಗೆ ಗ್ರೀನ್ ಸಿಗ್ನಲ್
ಬಿಹಾರ ಮೂಲದ ಬಬ್ಲು , ಬೋಲಾ ಮತ್ತು ಶ್ರೀಧರ್ ಕಳ್ಳರು ಎಂಬುದು ಗೊತ್ತಾದ ತಕ್ಷಣವೇ ಮತ್ತೊಂದು ರೀತಿಯಲ್ಲಿ ಕಳ್ಳರನ್ನು ಹಿಡಿಯಲು ಯತ್ನಿಸುತ್ತಾರೆ. ಬೆಳಗಿನ ಜಾವ ಬಿಹಾರಕ್ಕೆ ಹೊರಡುವ ರೈಲುಗಳ್ಯಾವುದು ಎಂದು ಲಿಸ್ಟ್ ತೆಗೆದುಕೊಂಡು ರೈಲ್ವೇ ನಿಲ್ದಾಣಕ್ಕೆ ತಮ್ಮ ಸಿಬ್ಬಂದಿಯನ್ನು ಕಳಿಸುತ್ತಾರೆ. ಬಂಗಾರಪೇಟೆಯ ರೈಲ್ವೇ ನಿಲ್ದಾಣದಲ್ಲಿ ಕಳ್ಳರು ಪತ್ತೆಯಾಗಿ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಆದರೆ ಹುಳಿಮಾವು ಪೊಲೀಸ್ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳ ಹಿನ್ನೆೆಲೆ ಏನು..?
ಕಳ್ಳತನ ಪ್ರಕರಣದ ಎ೧ ಆರೋಪಿ ಬಬ್ಲು ಕೋವಿಡ್ ಮುನ್ನ ಬೆಂಗಳೂರಿನಲ್ಲೇ ಅಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡಿಕೊಂಡಿದ್ದ. ಕೋವಿಡ್ ಕಾರಣಕ್ಕೆ ಬಿಹಾರಕ್ಕೆ ವಾಪಸ್ಸಾಗಿದ್ದ. ಮತ್ತೆ ಈತನಿಗೆ ಕರೆಯನ್ನು ಮಾಡಿದ್ದ ಮೇಸ್ತ್ರಿ ತನ್ನೊಂದಿಗೆ ಇನ್ನೊಂದಿಬ್ಬರನ್ನು ಕೆಲಸಕ್ಕೆ ಕರೆತರುವಂತೆ ಹೇಳಿದ್ದ. ಅದರಂತೆ ಬಬ್ಲು ಅಪಾರ್ಟ್ಮೆಂಟ್ಗೆ ಕೆಲಸಕ್ಕೆ ಬಂದವನು ಕಳ್ಳತನವನ್ನು ಮಾಡಿ ಗ್ರೇಟ್ ಎಸ್ಕೇಪ್ ಆಗುವ ಮೊದಲೇ ಪೊಲೀಸರ ಅಥಿತಿಯಾಗಿದ್ದಾನೆ.
Recommended Video
ಇನ್ನು ಬಂಧಿತರಿಂದ 1.25 ಕೋಟಿ ರೂಪಾಯಿ ಮೌಲ್ಯದ 1.5 ಕೆಜಿ ಚಿನ್ನಾಭರಣ, 116ಗ್ರಾಂ ಡೈಮಂಡ್, 20ಗ್ರಾಂ ಪ್ಲಾಟಿನಂ ವಶಕ್ಕೆ ಪಡೆದಿದ್ದಾರೆ. ಅಪಾರ್ಟ್ಮೆಂಟ್ನಿಂದ ಕದ್ದ ಒಂದೇ ಒಂದು ನಯಾಪೈಸೆಯನ್ನು ಬಿಡದಂತೆ ರಿಕವರಿ ಮಾಡಿರುವ ಹುಳಿಮಾವು ಇನ್ಸ್ಪೆಕ್ಟರ್ ಚಂದ್ರಕಾಂತ್ ಮತ್ತವರ ಸಿಬ್ಬಂದಿ ಕಾರ್ಯಕ್ಕೆ ಆಗ್ನೇಯ ಡಿಸಿಪಿ ಶ್ರೀನಾಥ್ ಜೋಶಿ ಶ್ಲಾಘಿಸಿದ್ದಾರೆ.