ಕಾಂಗ್ರೆಸ್ ತೊರೆಯುವ ಸೂಚನೆ ನೀಡಿದ ಶಾಸಕ ಅನಿಲ್ ಲಾಡ್
ಬಳ್ಳಾರಿ, ಡಿಸೆಂಬರ್ 16: ಬಳ್ಳಾರಿ ಶಾಸಕ ಅನಿಲ್ ಲಾಡ್ ಅವರು ಬಹಿರಂಗವಾಗಿ ಕಾಂಗ್ರೆಸ್ ವರಿಷ್ಠರ ಮೇಲೆ ಅಸಮಧಾನ ಹೊರಹಾಕಿದ್ದು, ಪಕ್ಷ ತೊರೆಯುವ ಸೂಚನೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಣದ ಕೈಗಳು ನನ್ನನ್ನು ರಾಜಕೀಯವಾಗಿ ಮಟ್ಟಹಾಕಲು ಪ್ರಯತ್ನಿಸುತ್ತಿವೆ, ನನಗೆ ಚುನಾವಣೆ ಟಿಕೆಟ್ ತಪ್ಪಿಸಲು ಕೆಲವರು ಅವಿರತ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಯಾರು ಅವರಿಗೆ ಟಿಕೆಟ್ ತಪ್ಪಿಸುತ್ತಿದ್ದಾರೆ ಎಂದು ಹೆಸರು ಹೇಳಲು ನಿರಾಕರಿಸಿದ ಅವರು 'ನಾನು ಬಳ್ಳಾರಿಯಿಂದಲೇ ಸ್ಪರ್ಧಿಸುತ್ತೇನೆ, ಇಲ್ಲಿಯ ಜನ ನನಗೆ ಆಶೀರ್ವಾದ ಮಾಡಿದ್ದಾರೆ, ನಾನು ಹುಟ್ಟಿದ್ದು ಇಲ್ಲೇ, ಸಾಯುವುದು ಇಲ್ಲೇ' ಎಂದು ಗುಟುರು ಹಾಕಿದರು.
ಕಾಂಗ್ರೆಸ್ ಬಿಡುವ ಬಗ್ಗೆ ಮಾತನಾಡಿದ ಅವರು, ಅವಶ್ಯಕತೆ ಬಂದರೆ ಪಕ್ಷ ತೊರೆಯುವುದಕ್ಕೂ ಸಿದ್ದ ಆದರೆ ಇನ್ನೂ ಯಾವ ಪಕ್ಷದವರ ಜೊತೆಯೂ ಮಾತನಾಡಿಲ್ಲ ಎಂದರು.
ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತಿರಾ ಎಂಬ ಪ್ರಶ್ನೆಗೆ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಉತ್ತಿರಿಸಿದ ಅವರು ದೇವರು ಯಾವ ರೀತಿ ಆಶೀರ್ವಾದ ಮಾಡುತ್ತಾನೋ ಹಾಗೇ ಮಾಡುತ್ತೇನೆ, ಪಕ್ಷೇತರವಾಗಿ ನಿಂತ ಕೂಡಲೇ ಮರ್ಯಾದೆ ಕಮ್ಮಿಯಾಗುವುದಿಲ್ಲ, ಅವಶ್ಯಕತೆ ಬಿದ್ದರೆ ಅದಕ್ಕೂ ತಯಾರಾಗಿದ್ದೇನೆ ಎಂದರು.
ಬಳ್ಳಾರಿ ಉಸ್ತುವಾರಿ ಸಚಿವ ಪರಮೇಶ್ವರ್ ನಾಯ್ಕ್ ಹಾಗೂ ಅನಿಲ್ ಲಾಡ್ ಅವರಿಗೆ ಕಳೆದ ಬಾರಿಯ ಜಿಲ್ಲಾ ಪಂಚಾಯಿತಿ ಚುನಾವಣೆ ಸಮಯದಲ್ಲಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿಕೆ ವಿಷಯದಲ್ಲಿ ಮನಸ್ಥಾಪ ಉಂಟಾಗಿತ್ತು, ಆಗಿನಿಂದಲೂ ಬಳ್ಳಾರಿ ಕಾಂಗ್ರೆಸ್ನಲ್ಲಿ ಎರಡು ಬಣ ನಿರ್ಮಾಣವಾಗಿತ್ತು. ಇದೀಗ ಪರಮೇಶ್ವರ್ ನಾಯ್ಕ ಅವರೇ ಅನಿಲ್ ಲಾಡ್ಗೆ ಟಿಕೆಟ್ ತಪ್ಪಿಸುತ್ತಿದ್ದಾರೆ ಎನ್ನುವ ಊಹಾಪೋಹ ಕ್ಷೇತ್ರದಲ್ಲಿ ಹರಿದಾಡುತ್ತಿದೆ.