ಆನಂದ್ ಸಿಂಗ್, ಕಂಪ್ಲಿ ಗಣೇಶ್ ಹೊಡೆದಾಟ ಪ್ರಕರಣ ಇತ್ಯರ್ಥ!
ಬೆಂಗಳೂರು, ಅಕ್ಟೋಬರ್ 05; ಕಂಪ್ಲಿ ಶಾಸಕ ಜೆ. ಎನ್. ಗಣೇಶ್ ಮತ್ತು ಪ್ರಸ್ತುತ ಸಚಿವರಾಗಿರುವ ಆನಂದ್ ಸಿಂಗ್ ನಡುವಿನ ಹೊಡೆದಾಟ ಪ್ರಕರಣ ಇತ್ಯರ್ಥಗೊಂಡಿದೆ. 2019ರ ಜನವರಿ 19ರಂದು ಬಿಡದಿಯ ಈಗಲ್ಟನ್ ರೆಸಾರ್ಟ್ನಲ್ಲಿ ಹೊಡೆದಾಟ ನಡೆದಿತ್ತು.
ಕರ್ನಾಟಕ ಹೈಕೋರ್ಟ್ಗೆ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಶಾಸಕ ಜೆ. ಎನ್. ಗಣೇಶ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ ಪುರಸ್ಕರಿಸಿದೆ.
ಆನಂದ್ ಸಿಂಗ್ ಮೇಲೆ ಹಲ್ಲೆ: ಎಫ್ಐಆರ್ ರದ್ದು ಕೋರಿ ಕಂಪ್ಲಿ ಗಣೇಶ್ ಮನವಿ
ಜೆ. ಎನ್. ಗಣೇಶ್ ಪರವಾಗಿ ವಾದ ಮಂಡನೆ ಮಾಡಿದ ಹಿರಿಯ ವಕೀಲ ಎ. ಎಸ್. ಪೊನ್ನಣ್ಣ, ಕೊಲೆ ಯತ್ನದ ಆರೋಪ ಇದ್ದ ಕಾರಣ ರಾಜಿ ಸಂಧಾನ ಸಾಧ್ಯವಾಗಿರಲಿಲ್ಲ. ಇದು ಕೇವಲ ಹಣಕಾಸಿನ ವಿಚಾರಕ್ಕೆ ನಡೆದಿದ್ದ ಜಗಳವಾಗಿತ್ತು ಎಂದು ವಾದ ಮಂಡಿಸಿದರು.
ಆನಂದ್ ಸಿಂಗ್-ಕಂಪ್ಲಿ ಗಣೇಶ್ ಹೊಡೆದಾಟ: ಚಾರ್ಜ್ಶೀಟ್ ಸಲ್ಲಿಕೆ
ಈಗಾಗಲೇ ಆರೋಪಿ ಮತ್ತು ದೂರುದಾರರು ರಾಜಿಯಾಗಲು ಒಪ್ಪಿದ್ದಾರೆ. ಈ ಪ್ರಕರಣದಲ್ಲಿ ಕೊಲೆ ಯತ್ನದ (ಕಲಂ 307) ಉದ್ದೇಶ ಕಂಡು ಬರುತ್ತಿಲ್ಲ ಎಂದು ನ್ಯಾಯಪೀಠದ ಮಂದೆ ವಾದ ಮಾಡಿದರು.
ಈಗಲ್ ಟನ್ ರೆಸಾರ್ಟ್ ಗೆ 982 ಕೋಟಿ ದಂಡ ಹಾಕಿದ್ದು ಏಕೆ?
ಇದು ಆ ಕ್ಷಣಕ್ಕೆ ಘಟಿಸಿದ ಘಟನೆಯಾಗಿದೆ. ಕೊಲೆ ಯತ್ನದ ಉದ್ದೇಶ ಕಂಡು ಬರುತ್ತಿಲ್ಲ. ಈ ಕುರಿತು ವೈದ್ಯಕೀಯ ವರದಿ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ, ಸಾಕ್ಷ್ಯಗಳು ಹೇಳಿವೆ. ಆದ್ದರಿಂದ ಪ್ರಕರಣ ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.
ವಾದವನ್ನು ಮನ್ನಿಸಿದ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ ಕಂಪ್ಲಿ ಶಾಸಕ ಜೆ. ಎನ್. ಗಣೇಶ್ ವಿರುದ್ಧ ಪೊಲೀಸರು ದಾಖಲಿಸಿದ್ದ ಎಫ್ಐಆರ್ ಮತ್ತು ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
2019ರಲ್ಲಿ ಘಟನೆ ನಡೆದಾಗ ಆನಂದ್ ಸಿಂಗ್ ಹೊಸಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದರು. ಈಗ ಅವರು ಬಿಜೆಪಿ ಸೇರಿದ್ದು, ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಪ್ರವಾಸೋದ್ಯಮ,ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು.
ಆಸ್ಪತ್ರೆಗೆ ದಾಖಲಾಗಿದ್ದ ಆನಂದ್ ಸಿಂಗ್; ಬಿಡದಿಯ ಈಗಲ್ಟನ್ ರೆಸಾರ್ಟ್ನಲ್ಲಿ ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿದ್ದಾಗ ಆನಂದ್ ಸಿಂಗ್ ಮತ್ತು ಜೆ. ಎನ್. ಗಣೇಶ್ ನಡುವೆ 2019ರ ಜನವರಿ 19ರ ರಾತ್ರಿ ಗಲಾಟೆ ನಡೆದಿತ್ತು. ಈ ವೇಳೆ ಆನಂದ್ ಸಿಂಗ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಆನಂದ್ ಸಿಂಗ್ ಗಲಾಟೆ ಕುರಿತು ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಜೆ. ಎನ್. ಗಣೇಶ್ ವಿರುದ್ಧ ಹಲ್ಲೆ ಮತ್ತು ಕೊಲೆ ಯತ್ನದ ಆರೋಪದಡಿ ಎಫ್ಐಆರ್ ದಾಖಲು ಮಾಡಿದ್ದರು. ಈ ಪ್ರಕರಣದ ಕುರಿತು ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ವಿಶೇಷ ನ್ಯಾಯಾಲಯ ವಿಚಾರಣೆ ಸಹ ನಡೆಸುತ್ತಿತ್ತು.
ತಮ್ಮ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆ ಜೆ. ಎನ್. ಗಣೇಶ್ ತಲೆಮರೆಸಿಕೊಂಡಿದ್ದರು. ಸುಮಾರು ಒಂದು ತಿಂಗಳ ಬಳಿಕ ಗುಜರಾತ್ನಲ್ಲಿ ಬಿಡದಿ ಪೊಲೀಸರ ತಂಡ ಗಣೇಶ್ ಬಂಧಿಸಿತ್ತು. ಜೈಲು ಸೇರಿದ್ದ ಅವರು ಬಳಿಕ ಬಿಡುಗಡೆಗೊಂಡಿದ್ದರು.
ಘಟನೆ ನಡೆಯುವಾಗ ಆನಂದ್ ಸಿಂಗ್ ಮತ್ತು ಕಂಪ್ಲಿ ಗಣೇಶ್ ಒಂದೇ ಜಿಲ್ಲೆಯ ಶಾಸಕರಾಗಿದ್ದರು. ಒಂದೇ ಜಿಲ್ಲೆಯ ಒಂದೇ ಪಕ್ಷದ ಶಾಸಕರ ಗಲಾಟೆ ವಿಚಾರ ದೊಡ್ಡ ಸುದ್ದಿಯಾಗಿತ್ತು. ಆಗ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿತ್ತು.
ಈಗ ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ವಿಜಯನಗರ ಜಿಲ್ಲೆ ರಚನೆ ಮಾಡಲಾಗಿದೆ. ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಅಸ್ತಿತ್ವಕ್ಕೆ ಬಂದಿದೆ. ಈಗ ಬಳ್ಳಾರಿ ಜಿಲ್ಲೆಯಗೆ ಬಳ್ಳಾರಿ ಕೇಂದ್ರ ಸ್ಥಾನವಾಗಿದೆ. ಬಳ್ಳಾರಿ, ಕುರುಗೋಡು, ಸಿರಗುಪ್ಪ, ಕಂಪ್ಲಿ, ಸಂಡೂರು ತಾಲೂಕುಗಳು ಜಿಲ್ಲೆಯಲ್ಲಿವೆ.
ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರಕ್ಕೆ ಹೊಸಪೇಟೆ ಕೇಂದ್ರ ಸ್ಥಾನವಾಗಿದೆ. ಹೊಸಪೇಟೆ, ಕೂಡ್ಲಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನ ಹಡಗಲಿ, ಹರಪನಹಳ್ಳಿ ತಾಲೂಕುಗಳು ಜಿಲ್ಲೆಯಲ್ಲಿವೆ.