ನೆನೆದು ನೆನೆದು ತೊಪ್ಪೆಯಾದ ಮಲೆನಾಡು, ಕರಾವಳಿ
ಹಾಸನ ಜಿಲ್ಲೆ ಸಕಲೇಶಪುರ, ಬಾಳುಪೇಟೆ, ಹಾನುಬಾಳು, ಚಿಕ್ಕಮಗಳೂರು ಜಿಲ್ಲೆ ಕೊಟ್ಟಿಗೆಹಾರ, ಮೂಡಿಗೆರೆ, ಕೊಪ್ಪ, ಶೃಂಗೇರಿ, ಶಿವಮೊಗ್ಗದ ಆಗುಂಬೆ, ಹುಲಿಕಲ್, ಕೋಣಂದೂರು, ಸಾಗರ, ತೀರ್ಥಹಳ್ಳಿ, ಹೊಸನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಭಾರಿ ಮಳೆ ವರದಿಯಾಗಿದೆ.
ಶಾಲಾ ಕಾಲೇಜಿಗೆ ರಜೆ: ಕೊಡಗು ಜಿಲ್ಲೆಯಾದ್ಯಂತ ಬಹರಿ ಮಳೆಯಾಗುತ್ತಿರುವ ಕಾರಣ ಜಿಲ್ಲೆಯ ಶಾಲಾ, ಕಾಲೇಜುಗಳಿಗೆ 2 ದಿನಗಳ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಶಂಕರ್ ಸೋಮವಾರ(ಆ.6) ಘೋಷಿಸಿದ್ದಾರೆ.
ಸಂಚಾರ ಅಸ್ತವ್ಯಸ್ತ : ಚಾರ್ಮಾಡಿ ಘಾಟಿಯ 10ನೇ ತಿರುವಿನಲ್ಲಿ ಸೋಮವಾರ(ಆ.6) ಮಧ್ಯಾಹ್ನ ಭೂ ಕುಸಿತ ಉಂಟಾಗಿದ್ದು, ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. ಭಾನುವಾರ ಜಪ್ಪೆಲಪಡೆ ಬಳಿ ಮೂರನೆಯ ತಿರುವಿನಲ್ಲಿ ಭಾನುವಾರ ಸಂಜೆ ಭೂ ಕುಸಿತ ಉಂಟಾಗಿದ್ದು, ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಚಾರ್ಮಾಡಿ ಘಾಟಿಯಲ್ಲಿ 5-6 ಕಿ.ಮೀ ದೂರ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಗಿತ್ತು.
ಭಾರೀ ಮಳೆಯ ಕಾರಣ ಗುಡ್ಡ ವೊಂದು ಕುಸಿದು ಹೆದ್ದಾರಿಗೆ ಬಿದ್ದಿತ್ತು. ಭಾರೀ ಗಾತ್ರದ ಮರಗಳು ಕೂಡಾ ನೆಲಕ್ಕುರುಳಿತ್ತು. ಮರದ ಹೊಡೆತಕ್ಕೆ ಸಿಲುಕಿದ ಆಪೆ ವಾಹನ 180 ಅಡಿ ಆಳಕ್ಕೆ ಉರುಳಿತು. ಅದೃಷ್ಟವಶಾತ್ ವಾಹನದಲ್ಲಿ ಯಾರೂ ಇರಲಿಲ್ಲ. ಎಡಬಿಡದೆ ಮಳೆ ಸುರಿಯುತ್ತ್ತಿದ್ದರಿಂದ ಸಂಚಾರ ಸುಗಮಗೊಳಿಸಲು ಹರಸಾಹಸ ಪಡಬೇಕಾಯಿತು.
ಮೂಡಿಗೆರೆ ಹಾಗೂ ಉಜಿರೆ ಸಂಪರ್ಕ ನೀಡುವ ರಾಜ್ಯ ಹೆದ್ದಾರಿ 234 ಸಂಪೂರ್ಣ ಬಂದ್ ಆಗಿತ್ತು. ಧರ್ಮಸ್ಥಳಕ್ಕೆ ತೆರಳಬೇಕಾಗಿದ್ದ ಯಾತ್ರಾರ್ಥಿಗಳಿಗೆ ತುಂಬಾ ತೊಂದರೆಯಾಯಿತು. ಐದಾರು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡ ಮೇಲೆ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಿ ಬದಲಿ ಮಾರ್ಗವನ್ನು ಸೂಚಿಸಲಾಯಿತು.
ಬಿಸಿ ರೋಡ್, ಪುತ್ತೂರು, ಮಡಿಕೇರಿ, ಚಿಕ್ಕಮಗಳೂರು ಮಾರ್ಗ ಹಾಗೂ ಬಿಸಿ ರಸ್ತೆ-ಹಾಸನ-ಸಕಲೇಶಪುರ-ಬೇಲೂರು-ಚಿಕ್ಕಮಗಳೂರು ಮಾರ್ಗವನ್ನು ಸೂಚಿಸಲಾಗಿತ್ತು. ಆದರೆ, ಆ ಪ್ರದೇಶದಲ್ಲೂ ಭಾರಿ ಮಳೆ ಬೀಳುತ್ತಿದ್ದರಿಂದ ವಾಹನ ಸಂಚಾರ ತುಂಬಾ ಕಷ್ಟವಾಗಿತ್ತು.
ಚಾರ್ಮಾಡಿ ಘಾಟಿ ಹಾಗೂ ಸುತ್ತಮುತ್ತ ರಸ್ತೆ ಬಂದ್ ಆಗಿದ್ದು ಸೋಮವಾರ ಸಂಜೆ 6 ರ ತನಕ ದುರಸ್ತಿ ಕಾರ್ಯ ನಡೆಯಲಿದೆ ಎಂದು ಬೆಳ್ತಂಗಡಿ ಟ್ರಾಫಿಕ್ ಪೊಲೀಸರು ಹೇಳಿದ್ದಾರೆ.
ಜಲಾಶಯಕ್ಕೆ ಹೆಚ್ಚಿನ ಒಳ ಹರಿವು: ತುಂಗಾ ಜಲಾಶಯದಿಂದ 65 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಭದ್ರಾ ಹಾಗೂ ಲಿಂಗನಮಕ್ಕಿ ಜಲಾನಯನ ಪ್ರದೇಶದ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಹಾರಂಗಿ ಜಲಾಶಯ ಭರ್ತಿಯಾಗಿದೆ.
ಗರಿಷ್ಠ ಮಟ್ಟ 2859 ಅಡಿಯಾಗಿದ್ದು, ಭಾನುವಾರ ರಾತ್ರಿ ಜಲಾಶಯದ ನೀರಿನ ಮಟ್ಟ 2857 ಅಡಿ ಇತ್ತು. ಭದ್ರಾ ಅಣೆಕಟ್ಟಿನ ನೀರಿನ ಮಟ್ಟ 149.4 ಅಡಿಗೆ ಏರಿದೆ.
ಬೆಂಗಳೂರಿಗರಿಗೆ ಸೂಚನೆ: ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮುಂದಿನ ನಾಲ್ಕು ದಿನ ಮೋಡ ಕವಿದ ವಾತಾವರಣ ಮುಂದುವರೆಯಲಿದ್ದು, ಸಣ್ಣ ಪ್ರಮಾಣದ ಮಳೆ ಸಾಧ್ಯತೆಯಿದೆ.
ಸಕಲೇಶಪುರ ತಾಲೂಕಿನಲ್ಲಿ ನಾಲ್ಕು ಮನೆಗಳು ಮಳೆಗೆ ಆಹುತಿಯಾಗಿದೆ. ಶಿವಮೊಗ್ಗದ ಹೊಸನಗರ ತಾಲೂಕಿನಲ್ಲಿ ಹಲವೆಡೆ ಭೂ ಕುಸಿತ ಉಂಟಾಗಿರುವ ವರದಿಯಾಗಿದೆ. ಕೊಡಗಿನ ಶ್ರೀಮಂಗಲ ಹಾಗೂ ಹುದಿಕೇರಿ ಹೋಬಳಿಗಳಲ್ಲಿ ಭಾರಿ ಮಳೆಯಾಗಿದೆ.ಲಕ್ಷ್ಮಣತೀರ್ಥ, ಕಿತ್ತುಹೊಳೆ ಜಲಾಶಯ ನೀರಿನ ಮಟ್ಟ ಏರಿಕೆಯಾಗಿದೆ. ಕೆಆರ್ ಎಸ್ ಇನ್ನೂ ಭರ್ತಿಯಾಗದಿದ್ದರೂ ಭಾನುವಾರ ನೀರಿನ ಮಟ್ಟ 79.50 ಅಡಿಯಷ್ಟಿತ್ತು.