Bengaluru Heat Wave: ಮಳೆಯ ನಡುವೆ ಮತ್ತೆ ದಾಖಲೆಯ ಗರಿಷ್ಠ ತಾಪಮಾನ: ಶಾಖದ ಅಲೆ ಮುನ್ಸೂಚನೆ
ಬೆಂಗಳೂರು, ಏಪ್ರಿಲ್ 23: ಬೆಂಗಳೂರು ಸೇರಿದಂತೆ ರಾಜ್ಯ ನಾನಾ ಪ್ರದೇಶಗಳಲ್ಲಿ ಮಳೆ ಆಗುತ್ತಿದೆ. ಆದರೆ ಇದರಿಂದ ವಾತಾವರಣ ತಂಪಾಯಿತು ಎನ್ನುವಷ್ಟರಲ್ಲಿ ಮತ್ತೆ ಬಿಸಿಲಿನ ಶಾಖದ ಅಲೆ ನಿರ್ಮಾಣವಾಗುವ ಮುನ್ಸೂಚನೆ ಸಿಕ್ಕಿದೆ. ಬೆಂಗಳೂರಿನಲ್ಲಿ ಎರಡು ದಿನದಿಂದ ಮತ್ತೆ ದಾಖಲೆಯ ಗರಿಷ್ಠ ತಾಪಮಾನ ದಾಖಲಾಗುತ್ತಿದೆ.
ಕಳೆದೊಂದು ದಶಕದ ನಂತರ ಬೆಂಗಳೂರಿನಲ್ಲಿ ಇದೇ ವರ್ಷ ಏಪ್ರಿಲ್ ನಲ್ಲಿ ಅತ್ಯಧಿಕ ಗರಿಷ್ಠ ತಾಪಮಾನ ದಾಖಲಾಗಿದೆ. ಗರಿಷ್ಠ 37 ಡಿಗ್ರಿ ಸೆಲ್ಸಿಯಸ್ ಗೂ ಅಧಿಕ ತಾಪಮಾನ ಕಳೆದ 12 ವರ್ಷಗಳಲ್ಲಿ ನಾಲ್ಕು ಭಾರಿ ದಾಖಲಾಗಿತ್ತು. ಇದೀಗ ಇಷ್ಟು ಪ್ರಮಾಣದ ಬಿಸಿಲು ಬೆಂಗಳೂರಿನಲ್ಲಿ ಈ ತಿಂಗಳು ಹಲವು ಭಾರಿ ಕಂಡು ಬಂದಿದೆ.

ಮಳೆಯ ನಿರೀಕ್ಷೆ ಹುಸಿ
ಉತ್ತರ ಕರ್ನಾಟಕ, ಮಲೆನಾಡು ಜಿಲ್ಲೆಗಳ ಹಲವೆಡೆ ಮಳೆ ಆಗಿದ್ದು, ತಾಪಮಾನ ಇಳಿಕೆ ಆಗಿದೆ. ಆದರೆ ಈ ವರ್ಷ ಮಳೆ ಕಾಣದ ಬೆಂಗಳೂರಿಗೆ ಕಳೆದ ಶನಿವಾರ ಒಂದು ದಿನ ಮಳೆ ಆಯಿತು. ಇದು ನೋಡುತ್ತಿದ್ದಂತೆ ಇನ್ಮುಂದೆ ಬಿಸಿಲಿನ ದಿನಗಳು ಮಾಯವಾಗಲಿವೆ. ಮಳೆ ಬರಲಿದೆ ಎಂದು ಜನರು ಊಹಿಸಿದ್ದರು. ಆದರೆ ಇದು ಸುಳ್ಳಾಗಿದೆ.
ಏಕೆಂದರೆ, ಮಳೆಯ ನಡುವೆಯು ಮತ್ತೆ ನಗರದ ತಾಪಮಾನದಲ್ಲಿ ಭಾರೀ ಏರಿಕೆ ಆಗಿದೆ. ನಿತ್ಯ ವಾಡಿಕೆಗಿಂತ ಕನಿಷ್ಠ 2 ರಿಂದ 3 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚು ಉಷ್ಣಾಂಶ ದಾಖಲಾಗಿದೆ. ಬೇಸಿಗೆ ಶಾಖದ ಅಲೆಗಳು ಮತ್ತೆ ಮರಳುವ ಮುನ್ಸೂಚನೆ ಸಿಕ್ಕಿದೆ.
ಏಪ್ರಿಲ್ 29ರವರೆಗೂ ಸೆಕೆ, ಶಾಖದ ಅಲೆ
ಹವಾಮಾನ ಇಲಾಖೆ ಪ್ರಕಾರ, ಏಪ್ರಿಲ್ 29ರವರೆಗೂ ಇದೇ ರೀತಿ ಬೆಂಗಳೂರು ವಾತಾವರಣವು ಅತೀ ಬಿಸಿಲು, ಶಾಖದ ಅಲೆಗಳಿಂದ ಕೂಡಿರಲಿದೆ ಎಂದು ಒಂದು ವಾರದ ತಾಪಮಾನದ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.

ಇಂದು ಮಂಗಳವಾರ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ 37 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ (KIAL), ಬೆಂಗಳೂರು 37.5 ಡಿಗ್ರಿ ಸೆಲ್ಸಿಯಸ್ 37.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಕನಿಷ್ಠ ತಾಪಮಾನ 23ರಿಂದ 25 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ.
ಬೆಂಗಳೂರಿನಲ್ಲಿ ಹೆಚ್ಚಾಯ್ತು ಮಳೆಯ ನಿರೀಕ್ಷೆ
ಉದ್ಯಾನ ನಗರದಲ್ಲಿ ಮಳೆ ನಿರೀಕ್ಷೆ ಹೆಚ್ಚಾಗಿದೆ. ಕಳೆದ ಶನಿವಾರ ಹೊರತುಪಡಿಸಿದರೆ, ಈ ವರ್ಷ ಒಂದು ಹನಿ ಮಳೆ ಸಹ ಆಗಿಲ್ಲ. ಇದೇ ಮೊದಲ ಭಾರಿ ಈ ಮಟ್ಟದಲ್ಲಿ ಅತೀವ ಬೀಸಿಲನ್ನು ವಾರಗಳ ಕಾಲ ಬೆಂಗಳೂರಿನ ಜನರು ಎದುರಿಸಿದ್ದಾರೆ. ಬಿಸಿಲಿನ ಝಳಕ್ಕೆ ತತ್ತರಿಸಿದ್ದು, ಮಳೆಗೆ ಆಕಾಶದತ್ತ ನೋಡುವ ಸ್ಥಿತಿ ಬೆಂಗಳೂರಿನಲ್ಲಿ ನಿರ್ಮಾಣವಾಗಿದೆ.
ಕರ್ನಾಟಕದಲ್ಲಿ ವಿವಿಧೆಡೆ ಮಳೆ ಬಂದರೆ, ಇನ್ನೂ ಕೆಲವು ಕಡೆಗಳಲ್ಲಿ ಮಳೆ ಬಂದ ಮರು ದಿನವೇ ಹೆಚ್ಚಿನ ಬಿಸಿಲು, ಝಳ, ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಜನರು ತಂಪು ಪಾನೀಯ, ಎಳನೀರು, ಬಿಯರ್, ಮಜ್ಜಿಗೆ, ಐಸ್ಕ್ರಿಂ ಮೊರೆ ಹೋಗಿದ್ದಾರೆ.
ರಾಜ್ಯದ ವಿವಿಧೆಡೆ ಮಳೆ, ಸೆಕೆಯ ವಾತಾವರಣ
ಉತ್ತರ ಕರ್ನಾಟಕದ ಹಾವೇರಿ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ವಿಜಯಪುರ, ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ಹೀಗೆ ಅನೇಕ ಕಡೆಳಲ್ಲಿ ವಾರದಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ಮಳೆ ಬಂದು ಹೋಗುತ್ತಿದೆ. ಇದರಿಂದ ಮಳೆಯ ಬೆನ್ನಲ್ಲೆ ಮತ್ತೆ ನಿರಂತರವಾಗಿ ಶಾಖಲೆ ಅಲೆ ಸೃಷ್ಟಿಯಾಗುತ್ತಿದೆ. ಇದು ಸಹ ಜನರನ್ನು ತತ್ತರಿಸುವಂತೆ ಮಾಡಿದೆ.












Click it and Unblock the Notifications