ದಕ್ಷ ಸಬ್ಇನ್ಸ್ಪೆಕ್ಟರ್ ದಯಾನಾಯಕ್ ಮತ್ತೆ ಡ್ಯೂಟಿಗೆ
ಅಕ್ರಮ ಆಸ್ತಿ ಎಂಬ ಭೂತನರ್ತನಕ್ಕೆ ಸಿಕ್ಕಿ ಮಹಾಮಹಿಮ ಜನಪ್ರತಿನಿಧಿಗಳು ಹೈರಾಣಗೊಳ್ಳುತ್ತಿರುವ ಈಗಿನ ಕಾಲಮಾನದಲ್ಲಿ ಒಬ್ಬ ಖಡಕ್ ಸರಕಾರಿ ಸೇವಕ ದಯಾನಾಯಕ ತಮ್ಮ ಬೆನ್ನುಹತ್ತಿದ್ದ ಅಕ್ರಮ ಆಸ್ತಿ ಪೆಡಂಭೂತವನ್ನು ಕಿತ್ತೊಗೆಯುವಲ್ಲಿ ಯಶಸ್ವಿಯಾಗಿದ್ದು, ನಿನ್ನೆಯಿಂದ (ಜೂನ್ 16) ಡ್ಯೂಟಿಗೆ ರಿಪೋರ್ಟ್ ಮಾಡಿಕೊಂಡಿದ್ದಾರೆ.
'ಎನ್ ಕೌಂಟರ್ ಸ್ಪೆಷಲಿಸ್ಟ್' ದಯಾನಾಯಕ್ ಅವರು ಸದ್ಯಕ್ಕೆ ಇಲಾಖೆಯ ಸ್ಥಳೀಯ ಸಶಸ್ತ್ರ ವಿಭಾಗದಲ್ಲಿ ಸೇವೆಗೆ ಹಾಜರಾದರು. ಅಂದಹಾಗೆ, ಸೇವೆಗೆ ಮರುಭರ್ತಿಯಾಗುವ ಬಗ್ಗೆ ಶನಿವಾರವಷ್ಟೇ ದಯಾನಾಯಕ್ ಗೆ ಇಲಾಖೆಯು ಆದೇಶ ಹೊರಡಿಸಿತ್ತು.
'ದೇವರು ನನ್ನ ಕಡೆಗಿದ್ದಾನೆ. ಮತ್ತೆ ಸೇವೆಗೆ ಹಾಜರಾಗಿದ್ದೇನೆ. ಉಳಿದ 18 ವರ್ಷಗಳ ಸೇವೆಯನ್ನು ಈ ಹಿಂದೆ ನಿರ್ವಹಿಸಿದಂತೆಯೇ ಪ್ರಮಾಣಿಕತೆಯಿಂದ ನಿಭಾಯಿಸುವೆ ಎಂದು ಸಂತಸದ ಚಿಲುಮೆಯಂತಿದ್ದ ದಯಾನಾಯಕ್ ಪ್ರತಿಕ್ರಿಯಿಸಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ ಮೇಲೆ 2006ರ ಜನವರಿಯಲ್ಲಿ ಮಹಾರಾಷ್ಟ್ರದ ಭ್ರಷ್ಟಾಚಾರ ನಿಗ್ರಹ ದಳ ನಾಯಕ್ ಅವರನ್ನು ಬಂಧಿಸಿತ್ತು. ಅದಾಗುತ್ತಿದ್ದಂತೆ ದಯಾನಾಯಕ್ ಅವರನ್ನು ಸೇವೆಯಿಂದ ವಜಾಮಾಡಲಾಗಿತ್ತು.
'ದಯಾನಾಯಕ್ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ. ಆದ್ದರಿಂದ ಅವರನ್ನು ಮತ್ತೆ ಸೇವೆಗೆ ತೆಗೆದುಕೊಳ್ಳಬಹುದು ಎಂದು ಮ್ಯಾಜಿಸ್ಟ್ರೇಟ್ ಕೋರ್ಟಿಗೆ ತಿಳಿಸಲಾಯಿತು. ಬಳಿಕ ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ನಗರ ಪೊಲೀಸ್ ಆಯುಕ್ತರು ನಾಯಕ್ ಗೆ ಸೇವೆಗೆ ಮರಳುವಂತೆ ಆದೇಶಿಸಿದರು' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.