ಗುರೂಜಿ ಮಾಹಿತಿ ತೆಗೆದುಹಾಕಲು Googleಗೆ ಆದೇಶ
ಶ್ರೀ ರವಿಶಂಕರ ಗುರೂಜಿ ಅವರ ಅನುಯಾಯಿಗಳು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣ ಆಲಿಸಿದ ಜಸ್ಟೀಸ್ ಮನಮೋಹನ್ ಸಿಂಗ್ ಅವರು Google ಕಂಪನಿಗೆ ಮತ್ತು ಅವಹೇಳನಕಾರಿ ಮಾಹಿತಿ ಪ್ರಕಟಿಸಿದ ಬ್ಲಾಗರ್ ಜಿತೇಂದರ್ ಬಗ್ಗಾ ಅವರಿಗೆ ಈ ಆದೇಶ ನೀಡುವುದರ ಜತೆಗೆ ನೋಟಿಸ್ ಸಹ ಜಾರಿ ಮಾಡಿದೆ.
ಮಧ್ಯಂತರ ತೀರ್ಪನ್ನು ಪಾಲಿಸದಿದ್ದಲ್ಲಿ ತೀವ್ರ ಕಟ್ಟುನಿಟ್ಟಿನ ಕ್ರಮ ಮತ್ತು ಅಪಾರ ನಷ್ಟ ಎದುರಿಸಬೇಕಾಗುತ್ತದೆ ಎಂದೂ ನ್ಯಾಯಪೀಠ ಎಚ್ಚರಿಸಿದೆ. ಮುಂದಿನ ಆದೇಶ ಜಾರಿಯಾಗುವವರೆಗೂ ಈ ತಕ್ಷಣಕ್ಕೆ ಅನ್ವಯವಾಗುವಂತೆ ಅಂದರೆ ಮಧ್ಯಂತರ ಆದೇಶದ ಪ್ರತಿ ಕೈಸೇರಿದ 36 ಗಂಟೆಯೊಳಗಾಗಿ ಆಕ್ಷೇಪಾರ್ಹ ಮಾಹಿತಿಯನ್ನು ಕಡ್ಡಾಯವಾಗಿ ತೆಗೆದುಹಾಕಲೇಬೇಕು ಎಂದು ಪೀಠ ಆದೇಶ ನೀಡಿದೆ.
ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಅಥವಾ ಶ್ರೀ ರವಿಶಂಕರ ಗುರೂಜಿ ಅವರಿಗೆ ಸಂಬಂಧಪಟ್ಟ ಮಾಹಿತಿಯನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬ್ಲಾಗರ್ ಜಿತೇಂದರ್ ಬಗ್ಗಾ ಇಮೇಲ್ ಮಾಡಬಾರದೂ ಎಂದೂ ಪೀಠ ನಿರ್ದೇಶಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 30ಕ್ಕೆ ನಿಗದಿಪಡಿಸಲಾಗಿದೆ.
ಶ್ರೀ ರವಿಶಂಕರ ಗುರೂಜಿ ಅವರ ಕೆಲ ಅನುಯಾಯಿಗಳೂ ಸೇರಿದಂತೆ Vyakti Vikas Kendra, India Public Charitable Trust ಈ ಮಾನನಷ್ಟ ಮೊಕದ್ದಮೆ ಹೂಡಿತ್ತು. ಪ್ರಕರಣದಲ್ಲಿ 5 ಕೋಟಿ ರುಪಾಯಿ ಮಾನನಷ್ಟ ಪರಿಹಾರ ಸಹ ಕೇಳಿದೆ.
http://www.blogger.com/ ಮುಖಾಂತರ ಬ್ಲಾಗರ್ ಜಿತೇಂದರ್ ಬಗ್ಗಾ ಅವರು ಅಸಂಖ್ಯಾತ ಇಮೇಲುಗಳು ಮತ್ತು ಲೇಖನಗಳನ್ನು ಅವ್ಯಾಹತವಾಗಿ ಕಳುಹಿಸಿದ್ದರು. ಅದರಲ್ಲಿ ನಿಂದಾನಾತ್ಮಕ, ಅಶ್ಲೀಲ ಮತ್ತು ದುರುದ್ದೇಶಪೂರಿತ ಮಾಹಿತಿಯಿತ್ತು ಎಂದು ಟ್ರಸ್ಟ್ ನ್ಯಾಯಾಲಯದ ಗಮನ ಸೆಳೆದಿತ್ತು.