ಸೂಪರ್ ಸ್ಟಾರ್ ದಿಲೀಪ್ ಜೀವನದ ಹೂವು, ಮುಳ್ಳುಗಳ ಹಾದಿ
ಮಲಯಾಳಂ ಚಿತ್ರರಂಗದ ಬಿಗ್ ಸ್ಟಾರ್ಗಳಲ್ಲಿ ಒಬ್ಬರೆನಿಸಿರುವ ದಿಲೀಪ್ ತಮ್ಮ ವಿರುದ್ಧ ಕೊಲೆ ಪ್ರಕರಣವೊಂದರಲ್ಲಿ ದಾಖಲಾಗಿದ್ದ ದೂರನ್ನು ವಜಾಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿದೆ. ನಟಿಯೊಬ್ಬಳ ಮೇಲೆ ಲೈಂಗಿಕ ಹಲ್ಲೆ ಎಸಗಿದ ಪ್ರಕರಣದ ತನಿಖೆ ನಡೆಸುತ್ತಿದ್ದ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಆರೋಪ ನಟ ದಿಲೀಪ್ ಮೇಲೆ ಬಂದಿತ್ತು. ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಜನವರಿ ತಿಂಗಳಲ್ಲಿ ದಿಲೀಪ್ ಮೇಲೆ ಹೊಸ ಎಫ್ಐಆರ್ ದಾಖಲಾಗಿತ್ತು. ಈ ಹೊಸ ಪ್ರಕರಣವನ್ನು ವಜಾಗೊಳಿಸುವಂತೆ ಕೋರಿ ಅವರು ಮಾಡಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಏನಿದು ಪ್ರಕರಣಗಳು?: 2017ರ ಫೆಬ್ರವರಿ 17ರಂದು ಉದಯೋನ್ಮುಖ ನಟಿಯೊಬ್ಬಳ ಮೇಲೆ ಚಲಿಸುವ ಕಾರಿನಲ್ಲಿ ಎರಡು ಗಂಟೆ ಕಾಲ ಲೈಂಗಿಕ ಕಿರುಕುಳವಾಗಿತ್ತು. ಆರೋಪಿಗಳು ಇಡೀ ಘಟನೆಯ ಚಿತ್ರೀಕರಣ ಮಾಡಿದ್ದರೆನ್ನಲಾಗಿದೆ. ಈ ಲೈಂಗಿಕ ದೌರ್ಜನ್ಯ ಘಟನೆಯಲ್ಲಿ ನಟ ದಿಲೀಪ್ ಸೇರಿ 10 ಮಂದಿ ಆರೋಪಿಗಳಿದ್ದಾರೆ. ದಿಲೀಪ್ ಅವರನ್ನು ಬಂಧಿಸಿ 80 ದಿನಗಳ ಕಾಲ ಜೈಲಿನಲ್ಲಿಡಲಾಗಿತ್ತು. ಈಗ ಜಾಮೀನಿನ ಮೇಲೆ ಅವರು ಹೊರಗಿದ್ದಾರೆ.
ಯುಕೆಯಲ್ಲಿ ಭಾರತೀಯ ಮೂಲದ ವೈದ್ಯನಿಂದ 48 ರೋಗಿಗಳ ಮೇಲೆ ಲೈಂಗಿಕ ಅಪರಾಧ ಸಾಬೀತು
ತನಿಖಾಧಿಕಾರಿಗಳಗೆ ಬೆದರಿಕೆ ಹಾಕುವ ಆಡಿಯೋ:
ಇತ್ತೀಚೆಗೆ ನಟ ದಿಲೀಪ್ ಹಾಗೂ ಅವರ ಸಂಬಂಧಿ ಸೂರಜ್ ಅವರು ಲೈಂಗಿಕ ಕಿರುಕುಳ ಪ್ರಕರಣದ ತನಿಖಾಧಿಕಾರಿಗಳ ಮೇಲೆ ದಾಳಿ ಮಾಡುವುದಾಗಿ ಮಾತನಾಡುತ್ತಿರುವ ಆಡಿಯೋವೊಂದು ಬೆಳಕಿಗೆ ಬಂದಿತ್ತು. ಕೆಲ ತಿಂಗಳ ಹಿಂದೆ ಈ ಆಡಿಯೋ ಟಿವಿ ಮಾಧ್ಯಮಗಳಲ್ಲಿ ಸದ್ದು ಮಾಡಿತು. ಈ ಆಡಿಯೋ ಆಧಾರದ ಮೇಲೆ ಮತ್ತು ತನಿಖಾಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಹೊಸ ಎಫ್ಐಆರ್ ದಾಖಲಾಗಿದೆ. ಇದರಲ್ಲಿ ದಿಲೀಪ್ ಮೊದಲ ಆರೋಪಿಯಾದರೆ ಇತರ ನಾಲ್ವರೂ ಆರೋಪಿಗಳಾಗಿದ್ದಾರೆ. ತನಿಖಾಧಿಕಾರಿ ಮೇಲೆ ಹಲ್ಲೆ ಎಸಗುವ ಸಂಚು ರೂಪಿಸಿದ ಆರೋಪ ಇವರ ಮೇಲೆ ಬಂದಿದೆ.
ಇದೇ ವೇಳೆ, 2017ರ ಲೈಂಗಿಕ ಕಿರುಕುಳ ಪ್ರಕರಣದ ತನಿಖೆಗೆ ಇನ್ನೂ ಆರು ತಿಂಗಳ ಕಾಲಾವಕಾಶ ಕೊಡಲಾಗಿದೆ. ಈಗ ಎರಡು ಪ್ರಕರಣಗಳ ಸುಳಿಗಳಲ್ಲಿ ನಟ ದಿಲೀಪ್ ಸಿಲುಕಿ ಒದ್ದಾಡುತ್ತಿದ್ದಾರೆ.
ಗೋಪಾಲಕೃಷ್ಣನಿಂದ ದಿಲೀಪ್ವರೆಗೆ: ನಟ ದಿಲೀಪ್ ಅವರ ಮೂಲ ಹೆಸರು ಗೋಪಾಲಕೃಷ್ಣನ್. ಇವರ ತಂದೆ ಪದ್ಮನಾಭನ್ ಪಿಳ್ಳೈ ಮತ್ತು ತಾಯಿ ಸರೋಜಮ್. 54 ವರ್ಷದ ಇವರು ಹುಟ್ಟಿದ್ದು ಎರ್ನಾಕುಲಂ ಜಿಲ್ಲೆಯಲ್ಲಿ. ಇವರಿಗೆ ಒಬ್ಬ ಸಹೋದರ ಮತ್ತು ಒಬ್ಬ ಸಹೋದರಿ ಇದ್ದಾರೆ. ಚಲನಚಿತ್ರರಂಗಕ್ಕೆ ಬಂದು ಕೆಲ ವರ್ಷಗಳ ಬಳಿಕ ಇವರು ದಿಲೀಪ್ ಹೆಸರಿನಲ್ಲಿ ಚಿರಪರಿಚಿತರಾದರು.
ಮಿಮಿಕ್ರಿಯಿಂದ ಸೂಪರ್ಸ್ಟಾರ್ವರೆಗೆ:
ದಿಲೀಪ್ ಅವರು ಕಾಲೇಜು ದಿನಗಳಿಂದ ಮಿಮಿಕ್ರಿಯಲ್ಲಿ ಬಹಳ ಆಸಕ್ತಿ ಮತ್ತು ಪ್ರತಿಭೆ ಹೊಂದಿದ್ದವರು. ಒಮ್ಮೆ ಇವರು ಮತ್ತು ಸ್ನೇಹಿತ ನಾದಿರ್ ಶಾ ಅವರು ಆಡಿಯೋ ಕ್ಯಾಸೆಟ್ವೊಂದನ್ನು ಬಿಡುಗಡೆ ಮಾಡಿದರು. ಈ ಆಡಿಯೋ ಬಹಳ ಜನಪ್ರಿಯವಾಯಿತು. ತತ್ಪರಿಣಾಮವಾಗಿ ದಿಲೀಪ್ ಅವರನ್ನ ಮಾಲಿವುಡ್ ಚಿತ್ರರಂಗ ಸೆಳೆಯತೊಡಗಿತು.
ಏಷ್ಯಾನೆಟ್ ಟಿವಿ ಚಾನಲ್ನ ಕಾಮಿಕೋಲ ಎಂಬ ನಗೆ ಕಾರ್ಯಕ್ರಮದಲ್ಲಿ ಮಿಮಿಕ್ರಿ ಆರ್ಟಿಸ್ಟ್ ಆಗಿ ಮಿಂಚುತ್ತಿದ್ದ ದಿಲೀಪ್ ಅವರು ಸಹಾಯಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಧುಮುಕಿದರು. ಜೊತೆಜೊತೆಗೆ ಸಣ್ಣಪುಟ್ಟ ಪಾತ್ರಗಳನ್ನೂ ಅವರು ಮಾಡುತ್ತಿದ್ದರು.
ಗೋಪಾಲಕೃಷ್ಣ ದಿಲೀಪ್ ಆಗಿದ್ದು ಹೀಗೆ:
1993ರವರೆಗೂ ನಟ ದಿಲೀಪ್ ಅವರು ತಮ್ಮ ಮೂಲ ಹೆಸರು ಗೋಪಾಲಕೃಷ್ಣ ಪದ್ಮನಾಭನ್ ಆಗಿಯೇ ಪರಿಚಿತರಾಗಿದ್ದರು. 1994ರಲ್ಲಿ ಮನದೇ ಕೊಟ್ಟರಂ ಎಂಬ ಸಿನಿಮಾದಲ್ಲಿ ಅವರು ದಿಲೀಪ್ ಹೆಸರಿನ ಪಾತ್ರ ಮಾಡಿದರು. ಆ ಪಾತ್ರ ಜನಪ್ರಿಯಗೊಂಡು, ಅವರ ಮುಂದಿನ ಚಿತ್ರಗಳಲ್ಲಿ ದಿಲೀಪ್ ಎಂದೇ ಖ್ಯಾತರಾದರು.
ದಿಲೀಪ್ ಹೆಸರು ಬದಲಾಗಿ ಮೂರ್ನಾಲ್ಕು ವರ್ಷಗಳ ಬಳಿಕ ದಿಲೀಪ್ ಪಂಜಾಬೀ ಹೌಸ್ ಎಂಬ ಸಿನಿಮಾದಲ್ಲಿ ಹೀರೋ ಪಾತ್ರ ಮಾಡಿದರು. ಆ ಸಿನಿಮಾ ಬಹಳ ಜನಪ್ರಿಯತೆ ತಂದುಕೊಟ್ಟಿತು.
ಇದಾದ ಬಳಿಕ ದಿಲೀಪ್ ಅವರ ಅನೇಕ ಚಿತ್ರಗಳು ಭರ್ಜರಿ ಯಶಸ್ಸು ಗಳಿಸಿದವು. ಮೋಹನ್ ಲಾಲ್, ಮಮ್ಮೂಟಿ ಮೊದಲಾದ ಘಟಾನುಘಟಿಗಳ ಸಾಲಿಗೆ ದಿಲೀಪ್ ಕೂಡ ಸೇರ್ಪಡೆಯಾದರು. 2002ರಲ್ಲಿ ತಮ್ಮದೇ ಪ್ರೊಡಕ್ಷನ್ ಆರಂಭಿಸಿದರು. ಅವರು ಮಲಯಾಳಂನಲ್ಲಿ ಮಾಡಿದ ಬಾಡಿಗಾರ್ಡ್ ಸಿನಿಮಾ ಹಿಂದಿ ಮತ್ತು ತಮಿಳಿನಲ್ಲಿ ರೀಮೇಕ್ ಕೂಡ ಆಯಿತು.
ಮದುವೆ ಮತ್ತು ಡಿವೋರ್ಸ್:
ನಟ ದಿಲೀಪ್ ಅವರು 1998ರಲ್ಲಿ ನಟಿ ಮಂಜು ವಾರಿಯರ್ ಅವರನ್ನು ವಿವಾಹವಾದರು. ಈ ದಂಪತಿಗೆ ಮೀನಾಕ್ಷಿ ಎಂಬ ಮಗಳಿದ್ದಾರೆ. 2015ರಲ್ಲಿ ಮಂಜು ವಾರಿಯರ್ಗೆ ಡಿವೋರ್ಸ್ ಕೊಟ್ಟ ಅವರು ಮರುವರ್ಷ ನಟಿ ಕಾವ್ಯಾ ಮಾಧವನ್ ಅವರನ್ನು ವರಿಸಿದರು. ಇವರಿಬ್ಬರಿಗೂ ಒಬ್ಬ ಮಗಳಿದ್ದಾಳೆ. ಈ ಪ್ರಕರಣದಲ್ಲಿ ಕಾವ್ಯಾ ಕೂಡಾ ವಿಚಾರಣೆ ಎದುರಿಸಿದ್ದಾರೆ.(ಒನ್ಇಂಡಿಯಾ ಸುದ್ದಿ)